ಕಾಂಗ್ರೆಸ್ ಸೇರುವುದಾಗಿ ಘೋಷಿಸಿದ ಪ್ರಭಾವಿ ಜೆಡಿಎಸ್ ನಾಯಕ!
ಬೆಳಗಾವಿ, ಅಕ್ಟೋಬರ್ 22; ಮುಂದಿನ ವಿಧಾನಸಭೆ ಚುನಾವಣೆ ಮೇಲೆ ಕಣ್ಣಿಟ್ಟಿರುವ ಹಲವಾರು ನಾಯಕರು ಪಕ್ಷಾಂತರ ಮಾಡಲು ಮುಂದಾಗಿದ್ದಾರೆ. ಜೆಡಿಎಸ್ನ ಕೆಲವು ನಾಯಕರು ಈಗಾಗಲೇ ಕಾಂಗ್ರೆಸ್ ಸೇರುವುದಾಗಿ ಘೋಷಣೆ ಮಾಡಿದ್ದಾರೆ. ಈಗ ಇಂತಹ ಸುದ್ದಿ ಗಡಿ ಜಿಲ್ಲೆಯಿಂದ ಬಂದಿದೆ.
ಬೆಳಗಾವಿ ಜಿಲ್ಲೆಯ ಪ್ರಭಾವಿ ಜೆಡಿಎಸ್ ನಾಯಕರೊಬ್ಬರು ಈಗ ಕಾಂಗ್ರೆಸ್ ಸೇರುವುದಾಗಿ ಘೋಷಣೆ ಮಾಡಿದ್ದಾರೆ. 2023ರ ಚುನಾವಣೆಯಲ್ಲಿ ಅವರು ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧ ಕಾಂಗ್ರೆಸ್ನಿಂದ ಕಣಕ್ಕಿಳಿಯಲಿದ್ದಾರೆ. ಈ ಮೂಲಕ ಜಿಲ್ಲೆಯ ಜೆಡಿಎಸ್ ನಾಯಕರೊಬ್ಬರು ಪಕ್ಷ ತೊರೆಯುವುದಾಗಿ ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ.
ಬೆಳಗಾವಿ ರಾಜಕೀಯ; ಬಂತೊಂದು Breaking News!
ಗೋಕಾಕ್ ಕ್ಷೇತ್ರದ ಪ್ರಭಾವಿ ಜೆಡಿಎಸ್ ನಾಯಕ ಅಶೋಕ ಪೂಜಾರಿ ಕಾಂಗ್ರೆಸ್ ಸೇರಲಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಮತ್ತು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಭೇಟಿಯಾಗಿ ಅವರು ಮಾತುಕತೆ ನಡೆಸಿದ್ದಾರೆ. ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಜೊತೆ ಮಾತುಕತೆ ನಡೆಸಿ ಪಕ್ಷ ಸೇರುವ ದಿನಾಂಕವನ್ನು ತೀರ್ಮಾನಿಸಲಿದ್ದಾರೆ.
ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಶೆಟ್ಟರ್ ಸೊಸೆ ಬಿಜೆಪಿ ಅಭ್ಯರ್ಥಿ?
ಅಶೋಕ ಪೂಜಾರಿ 2018ರ ಚುನಾವಣೆಯಲ್ಲಿ ಗೋಕಾಕ್ನಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ರಮೇಶ್ ಜಾರಕಿಹೊಳಿ ವಿರುದ್ಧ ಸ್ಪರ್ಧಿಸಿದ್ದರು. 75,969 ಮತಗಳನ್ನು ಪಡೆದು ಸೋಲು ಕಂಡಿದ್ದರು. ಬದಲಾದ ರಾಜಕೀಯ ಚಿತ್ರಣದಲ್ಲಿ ರಮೇಶ್ ಜಾರಕಿಹೊಳಿ ಬಿಜೆಪಿಗೆ ಬಂದರು. ಆಗ ನಡೆದ ಉಪ ಚುನಾವಣೆಯಲ್ಲಿ ಅಶೋಕ ಪೂಜಾರಿ ಜೆಡಿಎಸ್ನಿಂದ ಕಣಕ್ಕಿಳಿದು ಸೋಲು ಕಂಡಿದ್ದರು.
ಶಾಸಕರಿಗೇ ತಿಳಿಯದೇ ಗುಬ್ಬಿಯಲ್ಲಿ ಜೆಡಿಎಸ್ ಸಮಾವೇಶ!
ಕಾಂಗ್ರೆಸ್ ಸೇರಲಿದ್ದಾನೆ
ಕಾಂಗ್ರೆಸ್ ಸೇರುವ ಸುದ್ದಿಗಳ ಕುರಿತು ಮಾತನಾಡಿರುವ ಅಶೋಕ ಪೂಜಾರಿ, "ಕಾಂಗ್ರೆಸ್ ಪಕ್ಷ ಸೇರ್ಪಡೆಗೊಳ್ಳುತ್ತಿದ್ದೇನೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಭೇಟಿಯಾಗಿ ಮಾತುಕತೆ ನಡೆಸಿದ್ದೇನೆ. ಸತೀಶ್ ಜಾರಕಿಹೊಳಿ ಜೊತೆ ಮಾತನಾಡಿ ದಿನಾಂಕ ನಿಗದಿ ಮಾಡುವುದಾಗಿ ಹೇಳಿದ್ದಾರೆ" ಎಂದು ಸ್ಪಷ್ಟಪಡಿಸಿದರು.
ಗೋಕಾಕ್ನಲ್ಲಿ ಬದಲಾವಣೆ ಆಗುತ್ತದೆ
ಮಾಧ್ಯಮಗಳ ಜೊತೆ ಮಾತನಾಡಿದ ಅಶೋಕ ಪೂಜಾರಿ, "ಗೋಕಾಕ್ನಲ್ಲಿ ಬದಲಾವಣೆ, ಹೋರಾಟ ಯಶಸ್ವಿಯಾಗಬೇಕಾದರೆ ಸಂದರ್ಭಾನುಸಾರ ರಾಜಕಾರಣ ಮಾಡುವ ಅನಿವಾರ್ಯತೆ ಇದೆ. ಗೋಕಾಕ್ ತಾಲೂಕಿನಲ್ಲಿ ಬದಲಾವಣೆ ಆಗುತ್ತದೆ. ಕ್ಷೇತ್ರದ ಮತದಾರರು ನನ್ನ ಜೊತೆ ಕೈ ಜೋಡಿಸಬೇಕಿದೆ. ಆಗ ಬದಲಾವಣೆ ಖಂಡಿತ ಆಗುತ್ತದೆ" ಎಂದು ಅಶೋಕ ಪೂಜಾರಿ ಹೇಳಿದರು.
ಪ್ರಭಾವಿ ಜೆಡಿಎಸ್ ನಾಯಕ
ಅಶೋಕ ಪೂಜಾರಿ ಪ್ರಭಾವಿ ಜೆಡಿಎಸ್ ನಾಯಕ. 2008, 2013ರ ವಿಧಾನಸಭೆ ಚುನಾವಣೆಯಲ್ಲಿ ಅವರು ಜೆಡಿಎಸ್ನಿಂದ ಸ್ಪರ್ಧಿಸಿದ್ದರು. 2018ರಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ರಮೇಶ್ ಜಾರಕಿಹೊಳಿ ವಿರುದ್ಧ ಕಣಕ್ಕಿಳಿದು 75,969 ಮತಗಳನ್ನು ಪಡೆದಿದ್ದರು. ರಮೇಶ್ ಜಾರಕಿಹೊಳಿ ಬಿಜೆಪಿ ಸೇರಿದರು. ಆಗ ನಡೆದ ಗೋಕಾಕ್ ಉಪಚುನಾವಣೆಯಲ್ಲಿ ಅಶೋಕ ಪೂಜಾರಿ ಮತ್ತೆ ರಮೇಶ್ ಜಾರಕಿಹೊಳಿ ವಿರುದ್ಧ ಜೆಡಿಎಸ್ ಅಭ್ಯರ್ಥಿಯಾದರು, ಸೋಲು ಕಂಡರು.
ಕ್ಷೇತ್ರದಲ್ಲಿ ಸಾಕಷ್ಟು ಪ್ರಭಾವ ಹೊಂದಿದ್ದಾರೆ
ಅಶೋಕ ಪೂಜಾರಿ ಲಿಂಗಾಯತ ಸಮುದಾಯಕ್ಕೆ ಸೇರಿದವರು. ಗೋಕಾಕ್ ಕ್ಷೇತ್ರದಲ್ಲಿ ಅವರದ್ದೇ ಆದ ಬೆಂಬಲಿಗರು, ಹಿತೈಷಿಗಳಿದ್ದಾರೆ. ಕಳೆದ ಚುನಾವಣೆಯಲ್ಲಿ ಅವರು 75 ಸಾವಿರ ಮತಗಳನ್ನು ಪಡೆದಿರುವುದೇ ಇದಕ್ಕೆ ಸಾಕ್ಷಿ.
ದಿ. ಸುರೇಶ್ ಅಂಗಡಿ ನಿಧನದಿಂದ ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ಉಪ ಚುನಾವಣೆ ಎದುರಾಯಿತು. ಈ ಉಪ ಚುನಾವಣೆ ಸಂದರ್ಭದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅಶೋಕ ಪೂಜಾರಿ ನಿವಾಸಕ್ಕೆ ಭೇಟಿ ನೀಡಿ ಪಕ್ಷಕ್ಕೆ ಆಹ್ವಾನಿಸಿದ್ದರು.
ಬೆಳಗಾವಿ ರಾಜಕೀಯದ ಚರ್ಚೆ
ಬೆಳಗಾವಿ ರಾಜಕೀಯದಲ್ಲಿ ಹಲವಾರು ಬೆಳವಣಿಗೆ ನಡೆಯುತ್ತಿವೆ. ಬೆಳಗಾವಿ ಗ್ರಾಮೀಣ ಕ್ಷೇತ್ರ ಸದ್ಯ ಕಾಂಗ್ರೆಸ್ ವಶದಲ್ಲಿದೆ. ಲಕ್ಷ್ಮೀ ಹೆಬ್ಬಾಳ್ಕರ್ ಕ್ಷೇತ್ರದ ಶಾಸಕಿ. 2023ರ ಚುನಾವಣೆಯಲ್ಲಿ ಅವರನ್ನು ಸೋಲಿಸಲು ಬಿಜೆಪಿಯಿಂದ ಶ್ರದ್ಧಾ ಶೆಟ್ಟರ್ ಅಭ್ಯರ್ಥಿಯಾಗಲಿದ್ದಾರೆ ಎಂಬ ಸುದ್ದಿಗಳು ಹಬ್ಬಿವೆ. ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವರಾಗಿದ್ದ ದಿ. ಸುರೇಶ್ ಅಂಗಡಿ ಪುತ್ರಿ, ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಸೊಸೆ ಶ್ರದ್ಧಾ ಶೆಟ್ಟರ್ ಅಭ್ಯರ್ಥಿಯಾಗಲಿದ್ದಾರೆಯೇ? ಎಂದು ಪಕ್ಷ ತೀರ್ಮಾನ ಕೈಗೊಳ್ಳಬೇಕಿದೆ.