ಗೋಕಾಕ್ ಉಪಚುನಾವಣಾ ಕಾವು; ಸುಪ್ರೀಂ ಕೋರ್ಟ್ ಆದೇಶದತ್ತ ಎಲ್ಲರ ಚಿತ್ತ
ಬೆಳಗಾವಿ, ನವೆಂಬರ್ 12: ಗೋಕಾಕ ಉಪ ಚುನಾವಣೆ ಕಾವು ದಿನೇ ದಿನೇ ಏರುತ್ತಿದೆ. ರಮೇಶ ಜಾರಕಿಹೊಳಿ ವಿರುದ್ಧ ಲಖನ್ ಜಾರಕಿಹೊಳಿಯೇ ಪ್ರಬಲ ಅಭ್ಯರ್ಥಿ, 4 ತಿಂಗಳಿಂದ ನಾವು ಗೋಕಾಕ್ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದೇವೆ ಎಂದು ಸಹೋದರ ಸತೀಶ ಜಾರಕಿಹೊಳಿ ಹೇಳಿದ್ದು, ಗೋಕಾಕ್ ನಲ್ಲಿ ಕಾಂಗ್ರೆಸ್ಸಿನಿಂದ ಲಖನ್ ಜಾರಕಿಹೊಳಿಗೆ ಟಿಕೆಟ್ ಪಕ್ಕಾ ಆಗಿದೆ. ಆದರೆ ಟಿಕೆಟ್ ಕುರಿತು ಇನ್ನೂ ಗೊಂದಲಗಳು ಮುಗಿದಂತೆ ಕಾಣುತ್ತಿಲ್ಲ. ಹಲವು ರಾದ್ಧಾಂತಗಳ ನಡುವೆ ಇನ್ನು ಎರಡು ಮೂರು ದಿನಗಳಲ್ಲಿ ಕಾಂಗ್ರೆಸ್ ಟಿಕೆಟ್ ಯಾರಿಗೆ ಎಂದು ತಿಳಿದುಬರಬೇಕಿದೆ.
"ಗೋಕಾಕ್ ನಲ್ಲಿ ವ್ಯಕ್ತಿ ಪೂಜೆಗೆ ಅವಕಾಶವಿಲ್ಲ"
ಆದರೆ ಲಖನ್ ಜಾರಕಿಹೊಳಿ ಟಿಕೆಟ್ ತಪ್ಪಿಸಲು ಕಾಂಗ್ರೆಸ್ ನಲ್ಲಿ ಒಂದು ಗುಂಪು ತೆರೆಮರೆಯಲ್ಲಿ ಕೆಲಸ ಮಾಡುತ್ತಿದೆ. ಕಳೆದ ವಿಧಾನಸಭೆಯಲ್ಲಿ ಸೋತ ಕಾಂಗ್ರೆಸ್ ಶಾಸಕರು ಲಖನ್ ಗೆ ಟಿಕೆಟ್ ಕೊಡುವುದನ್ನು ವಿರೋಧಿಸುತ್ತಿದ್ದಾರೆ ಎಂದು ದೂರಿದ್ದಾರೆ ಸತೀಶ್. ಹೀಗಾಗಿಯೇ ಮಾಜಿ ಶಾಸಕ, ಕಾಂಗ್ರೆಸ್ ಪಕ್ಷದ ವೀಕ್ಷಕ ಅಶೋಕ ಪಟ್ಟಣ, "ಗೋಕಾಕ್ನಲ್ಲಿ ವ್ಯಕ್ತಿ ಪೂಜೆಗೆ ಅವಕಾಶವಿಲ್ಲ" ಎಂದಿದ್ದಾರೆ. ಪಕ್ಷದ ಟಿಕೆಟ್ ಗಾಗಿ ಅಶೋಕ, ಲಖನ್ ಅರ್ಜಿ ಹಾಕಿದ್ದಾರೆ. ಗೆಲ್ಲುವ ಅಭ್ಯರ್ಥಿಗೆ ಹೈಕಮಾಂಡ್ ಟಿಕೆಟ್ ನೀಡಲಿದೆ ಎಂದು ಅಶೋಕ ಪಟ್ಟಣ ಜಾರಕಿಹೊಳಿ ಬ್ರದರ್ಸಗೆ ಟಾಂಗ್ ನೀಡಿದ್ದಾರೆ.
ರಮೇಶ್ ಜಾರಕಿಹೊಳಿ ಸೋಲಿಸಲು ಒಂದಾದ ನಾಯಕರು!
ಟಿಕೆಟ್ ಹಂಚಿಕೆಯಲ್ಲಿ ಗುಂಪುಗಾರಿಕೆ
ಬೆಳಗಾವಿ ಜಿಲ್ಲಾ ಕಾಂಗ್ರೆಸ್ ಪಕ್ಷದಲ್ಲಿ ಎಲ್ಲವೂ ಸರಿಯಿಲ್ಲ ಎಂಬುದೂ ಸ್ಪಷ್ಟವಾಗುತ್ತಿದೆ. ಗೋಕಾಕ್, ಕಾಗವಾಡ ಮತಕ್ಷೇತ್ರದಲ್ಲಿ ಟಿಕೆಟ್ ಹಂಚಿಕೆ ವಿಚಾರದಲ್ಲಿ ಗುಂಪುಗಳಾಗಿವೆ. ಅನರ್ಹ ಶಾಸಕರಾದ ರಮೇಶ ಜಾರಕಿಹೊಳಿ, ಮಹೇಶ ಕುಮಟಳ್ಳಿ ಮತ್ತು ಶ್ರೀಮಂತ ಪಾಟೀಲಗೆ ಬಿಜೆಪಿ ಟಿಕೆಟ್ ಫಿಕ್ಸ್ ಆಗಿದೆ. ಆದರೂ ನಾಳೆ ಸುಪ್ರೀಂ ಕೋರ್ಟ್ ತೀರ್ಪು ಏನು ಬರುತ್ತದೆ ಅನ್ನುವ ಕುತೂಹಲ ಕಾಂಗ್ರೆಸ್, ಬಿಜೆಪಿಯಲ್ಲಿದೆ. ಅನರ್ಹರ ಭವಿಷ್ಯ ನಿರ್ಧಾರವಾದ ಬಳಿಕ ಚುನಾವಣೆ ಚಿತ್ರಣ ಸ್ಪಷ್ಟವಾಗಲಿದೆ. ಕಾಂಗ್ರೆಸ್ ನಲ್ಲಿ ಸತೀಶ ಜಾರಕಿಹೊಳಿ ಬಣ ಮತ್ತು ಸೋತ ಶಾಸಕರ ಬಣ ಎಂದು ಎರಡು ಗುಂಪಾಗಿದ್ದು, ಟಿಕೆಟ್ ವಿಚಾರದಲ್ಲಿ ಎರಡು ಬಣದಿಂದ ವಿರುದ್ಧ ಹೇಳಿಕೆಗಳು ಬರುತ್ತಿವೆ. ಅತ್ತ ಗೋಕಾಕ, ಕಾಗವಾಡ, ಅಥಣಿ ಮೂರು ಕ್ಷೇತ್ರದಲ್ಲೂ ಮತ್ತೆ ಕಮಲ ಅರಳಲಿದೆ ಎಂದು ರಾಜ್ಯಸಭಾ ಸಂಸದ ಪ್ರಭಾಕರ ಕೋರೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಸುಪ್ರೀಂ ಕೋರ್ಟ್ ತೀರ್ಪು ಮುಖ್ಯ ಎಂದ ಸತೀಶ್
ಉಪಚುನಾವಣೆಯಲ್ಲಿ ಕಾಂಗ್ರೆಸ್ 10, ಜೆಡಿಎಸ್ ಎರಡು ಕಡೆ ಗೆಲ್ಲಲ್ಲಿದೆ ಎಂದು ಸತೀಶ ಜಾರಕಿಹೊಳಿ ಹೇಳಿದ್ದಾರೆ. ಮತ್ತೆ ಶಾಸಕರು ಆಕಡೆ, ಈ ಕಡೆ ಹೋಗುವ ಪ್ರಕ್ರಿಯೆ ಆರಂಭವಾಗಲಿದೆ. ಇದೆಲ್ಲದಕ್ಕೂ ನಾಳಿನ ಸುಪ್ರೀಂ ಕೋರ್ಟ್ ನಿರ್ಧಾರ ಮಹತ್ವದ್ದಾಗಿದೆ. ಸುಪ್ರೀಂ ಕೋರ್ಟ್ ಶರತ್ತು ವಿಧಿಸಿದರೆ ಎಲ್ಲರಿಗೂ ಅನುಕೂಲವಾಗಲಿದೆ ಎಂದಿದ್ದಾರೆ. ಮಾಜಿ ಶಾಸಕ ಅಶೋಕ ಪಟ್ಟಣ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಅಶೋಕ್ ಪೂಜಾರಿಗೂ ಟಿಕೆಟ್ ನೀಡುವ ಬಗ್ಗೆ ಚರ್ಚೆ ಆಗಿದೆ. ಸಿದ್ದರಾಮಯ್ಯ, ಗುಂಡೂರಾವ್, ಡಿಕೆಶಿ ಭೇಟಿಯಾಗಿದ್ದಾರೆ. ಗೋಕಾಕ್ ಕ್ಷೇತ್ರ ಚುನಾವಣೆ ಬಗ್ಗೆ ನಾವು ಹೈಕಮಾಂಡ್ ಗೆ ಮನವರಿಕೆ ಮಾಡಿದ್ದೇವೆ. ಟಿಕೆಟ್ ಹಂಚಿಕೆ ವಿಚಾರ ಮುಗಿದು ಹೋದ ಅಧ್ಯಾಯ. ಹೈಕಮಾಂಡ್ ಟಿಕೆಟ್ ನೀಡುವ ಅಂತಿಮ ನಿರ್ಧಾರ ಮಾಡಲಿದೆ.
ಮಾತು ತಪ್ಪಿದ ಮೇಲೆ ಅವರೆಂಥಾ ಶಿಷ್ಯ - ಸಿದ್ದರಾಮಯ್ಯ
"ಯಾವತ್ತೂ ಪಪ್ಪಿ ಪಾಟೀಲ್ ಗೆ ಬೆಂಬಲ ನೀಡಿಲ್ಲ"
ಚಂದಗಡ ಎನ್ ಸಿಪಿ ಶಾಸಕ, ರಾಜೇಶ ಪಾಟೀಲ ಬೆಂಬಲ ವಿಚಾರವಾಗಿ ಮಾತನಾಡಿದ ಸತೀಶ ಜಾರಕಿಹೊಳಿ, ಚಂದಗಡದಲ್ಲಿ ಬೆಂಬಲ ಕೊಡೋದು ಹೊಸ ಬೆಳವಣಿಗೆಯೇನಲ್ಲ. ಕಳೆದ 4 ಚುನಾವಣೆಯಲ್ಲಿಯೂ ನಾನು ಅನೇಕರಿಗೆ ಬೆಂಬಲ ನೀಡಿದ್ದೇನೆ. ಯಮಕನಮರಡಿ ಕ್ಷೇತ್ರ ಹಾಗೂ ಚಂದಗಡ ತಾಲೂಕು ಹೊಂದಿಕೊಂಡಿದೆ. ಹೀಗಾಗಿ ಅನೇಕ ಕೆಲಸಗಳನ್ನು ಇಬ್ಬರು ಸೇರಿ ಮಾಡುವ ಪ್ರಸಂಗ ಬರುತ್ತದೆ, ಅಭಿವೃದ್ಧಿ ಕೆಲಸ, ನೀರಾವರಿ ಯೋಜನೆ ಸಂಬಂಧ ಚರ್ಚೆ ಮಾಡಿದ್ದೇವೆ, ನಾವು ಚಂದಗಢದಲ್ಲಿ ಎನ್ ಸಿ ಪಿ ಅಭ್ಯರ್ಥಿಗೆ ಬೆಂಬಲ ನೀಡಿದ್ದೇವೆ. ಅನರ್ಹ ರಮೇಶ ಜಾರಕಿಹೊಳಿ ಅಳಿಯ ಪಪ್ಪಿ ಪಾಟೀಲ್ ಗೆ ನಾನು ಈ ಹಿಂದೆಯೂ ವಿರುದ್ಧ ಕೆಲಸ ಮಾಡಿದ್ದೇನೆ. ಜನ ಮಾತ್ರ ಜಾರಕಿಹೊಳಿ ಸಹೋದರರು ಒಂದೇ ಒಂದೇ ಎನ್ನುತ್ತಾರೆ. ನಾವು ಯಾವತ್ತು ಪಪ್ಪಿ ಪಾಟೀಲ್ ಗೆ ಬೆಂಬಲ ನೀಡಿಲ್ಲ. ಮೊದಲಿನಿಂದಲೂ ಎನ್ ಸಿ ಪಿಗೆ ಬೆಂಬಲ ನೀಡುತ್ತ ಬಂದಿದ್ದೇನೆ ಎಂದಿದ್ದಾರೆ.
ಒಟ್ಟಿನಲ್ಲಿ ಉಪಚುನಾವಣೆಗೆ ದಿನ ಎಣಿಕೆ ಶುರುವಾದಂತೆಲ್ಲ ಬೆಳಗಾವಿಯ ರಾಜಕೀಯ ಗರಿಗಳು ಒಂದೊಂದಾಗಿ ಬಿಚ್ಚುತ್ತಿವೆ. ನಾಳೆಯ ಕೋರ್ಟ್ ಆದೇಶದ ನಂತರ ರಾಜಕೀಯ ಯುದ್ಧ ಶುರುವಾಗಲಿದೆ. ಹೀಗಾಗಿ ಎಲ್ಲರ ಚಿತ್ತ ಈಗ ಕೋರ್ಟ್ ಆದೇಶದತ್ತ ನೆಟ್ಟಿದೆ.