ಗೋಕಾಕ: ಜಾರಕಿಹೊಳಿ ಬ್ರದರ್ಸ್ 'ತಲ್ಲಣ'ಗೊಳ್ಳುವ ಗ್ರೌಂಡ್ ರಿಪೋರ್ಟ್!
"ನಾನು ಏನು ಈಗ ಮುಖ್ಯಮಂತ್ರಿಯಾಗಿದ್ದೀನೋ, ಅದಕ್ಕೆ ಕಾರಣ ರಮೇಶ್ ಜಾರಕಿಹೊಳಿ" ಎನ್ನುವ ಅಭಿಮಾನದ ಮಾತನ್ನೇನೋ ಯಡಿಯೂರಪ್ಪ, ಗೋಕಾಕದ ಸಾರ್ವಜನಿಕ ಸಭೆಯಲ್ಲಿ ನುಡಿದಿದ್ದಾರೆ.
ಆದರೆ, ರಮೇಶ್ ಜಾರಕಿಹೊಳಿ ರಾಜೀನಾಮೆಯಿಂದ ತೆರವಾದ ಕ್ಷೇತ್ರಕ್ಕೆ ಉಪಚುನಾವಣೆಯಲ್ಲಿ ಮತ್ತೆ ಅವರೇ ಸ್ಪರ್ಧಿಸುತ್ತಿದ್ದಾರೆ. ಕಾಂಗ್ರೆಸ್ಸಿನಿಂದ ಗೆದ್ದಿದ್ದ ರಮೇಶ್, ಈಗ, ಬಿಜೆಪಿಯಲ್ಲಿ ತಮ್ಮ ಭವಿಷ್ಯವನ್ನು ಒರೆಗಚ್ಚಿದ್ದಾರೆ.
ಜಾರಕಿಹೊಳಿ ಸಹೋದರರ ಸ್ಪರ್ಧೆ, ಇದರ ಹಿಂದಿನ ಕಹಾನಿ ಏನು?
'ಸಾಹುಕಾರ'ಎಂದ ಮಾತ್ರಕ್ಕೆ, ಯಾವ ಪಕ್ಷದಲ್ಲಿ ಸ್ಪರ್ಧಿಸಿದರೂ, ರಮೇಶ್ ಜಾರಕಿಹೊಳಿ ಗೆಲ್ಲಲೇಬೇಕೆಂದು ಏನಾದರೂ ಇದೆಯಾ? ಸಹೋದರನೇ ತನ್ನ ಎದುರಾಳಿಯಾದಾಗ, ಜೊತೆಗೆ, ಪ್ರಬಲ ಜೆಡಿಎಸ್ ಅಭ್ಯರ್ಥಿ ಕಣದಲ್ಲಿರುವಾಗ, ರಮೇಶ್ ಗೆಲುವು ಸುಲಭವೇ?
ರಾಜ್ಯ ರಾಜಕೀಯದಲ್ಲಿ ಬಿರುಗಾಳಿ: ಸಿದ್ದರಾಮಯ್ಯ ಬೆಚ್ಚಿಬೀಳಿಸುವ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರಕಾರ?
ಬಿಜೆಪಿಯಿಂದ ರಮೇಶ್ ಜಾರಕಿಹೊಳಿ, ಕಾಂಗ್ರೆಸ್ಸಿನಿಂದ ಲಖನ್ ಜಾರಕಿಹೊಳಿ ಮತ್ತು ಜೆಡಿಎಸ್ಸಿನಿಂದ ಅಶೋಕ್ ಪೂಜಾರಿ ಕಣದಲ್ಲಿದ್ದಾರೆ. ಸದ್ಯದ ಗ್ರೌಂಡ್ ರಿಪೋರ್ಟ್ ಪ್ರಕಾರ, ಜಾರಕಿಹೊಳಿ ಸಹೋದರರಿಗೆ, ಗೆಲುವು ಕಟ್ಟಿಟ್ಟಬುತ್ತಿಯೇನೂ ಅಲ್ಲ...
ರಮೇಶ್ ಜಾರಕಿಹೊಳಿ ಗೆಲುವು ಪಡೆಯಲು ಸಾಕುಬೇಕಾಯಿತು
ಕಳೆದ ಅಸೆಂಬ್ಲಿ ಚುನಾವಣೆಯಲ್ಲಿ (2018) ಕಾಂಗ್ರೆಸ್ ಟಿಕೆಟ್ ನಿಂದ ಸ್ಪರ್ಧಿಸಿದ್ದ ರಮೇಶ್ ಜಾರಕಿಹೊಳಿ ಗೆಲುವು ಪಡೆಯಲು ಸಾಕುಬೇಕಾಯಿತು. ಕಾರಣ, ಬಿಜೆಪಿ ಒಡ್ಡಿದ್ದ ಸವಾಲು. 14,280 ಮತಗಳ ಅಂತರದಿಂದ ರಮೇಶ್ ಗೆದ್ದಿದ್ದರೂ, ಪ್ರತಿಸ್ಪರ್ಧಿ ಅಶೋಕ್ ಪೂಜಾರಿ ಒಡ್ಡಿದ್ದ ಸವಾಲು, ಇದು ಮುಂದಿನ ದಿನಗಳಲ್ಲಿ ಗೋಕಾಕಿನ ರಾಜಕೀಯ ಚಿತ್ರಣ ಎಂದೇ ವ್ಯಾಖ್ಯಾನಿಸಲಾಗುತ್ತಿತ್ತು.
ಅಶೋಕ್ ಪೂಜಾರಿ, ಈಗ ಜೆಡಿಎಸ್ಸಿನಿಂದ ಸ್ಪರ್ಧಿಸಿರುವುದು
ಆದರೆ, ಈಗಿನ ಉಪಚುನಾವಣೆಯಲ್ಲಿ ಬಿಜೆಪಿಗೆ ಭಾರೀ ಹಿನ್ನಡೆಯಾಗಿದ್ದು, ಕಳೆದ ಚುನಾವಣೆಯಲ್ಲಿ ಪಕ್ಷದ ಟಿಕೆಟಿನಿಂದ ಸ್ಪರ್ಧಿಸಿದ್ದ ಇದೇ ಅಶೋಕ್ ಪೂಜಾರಿ, ಈಗ ಜೆಡಿಎಸ್ಸಿನಿಂದ ಸ್ಪರ್ಧಿಸಿರುವುದು. ಬಿಜೆಪಿಗೆ ತೀವ್ರ ಪೆಟ್ಟು ಬೀಳುವ ಸಾಧ್ಯತೆ ಇಲ್ಲೇ ಇರುವುದು. ಯಡಿಯೂರಪ್ಪನವರೇ ಹೇಳಲಿ, ಸವದಿಯೇ ಹೇಳಲಿ, ಮೂಲ ಬಿಜೆಪಿ ಮತಬ್ಯಾಂಕ್, ರಮೇಶ್ ಪರ ಒಲವು ತೋರದೇ ಇರುವುದು, ಬಿಜೆಪಿಗಾಗುತ್ತಿರುವ ಹಿನ್ನಡೆ. ಯಾಕೆಂದರೆ, ಈ ಹಿಂದೆ ರಮೇಶ್ ಜಾರಕಿಹೊಳಿ ನಡೆದುಕೊಂಡ ರೀತಿ..
ಗೋಕಾಕ ಕ್ಷೇತ್ರದ ಸದ್ಯದ ಗ್ರೌಂಡ್ ರಿಪೋರ್ಟ್
ಬಿಜೆಪಿಗಾಗುತ್ತಿರುವ ಇನ್ನೊಂದು ಹಿನ್ನಡೆಯೆಂದರೆ, ಕಾಂಗ್ರೆಸ್ಸಿನಿಂದ ಸ್ಪರ್ಧಿಸುತ್ತಿರುವ ಸಹೋದರ ಲಖನ್. ಸಹೋದರರ ನಡುವಿನ ಮೇಲಾಟ/ಕಿತ್ತಾಟಕ್ಕೆ, ಕ್ಷೇತ್ರದ ಅಭಿವೃದ್ದಿಗೆ ಯಾಕೆ ತೊಂದರೆಯಾಗಬೇಕು ಎನ್ನುವ ನಿಲುವನ್ನು ಬಹಳಷ್ಟು ಮತದಾರರು ಹೊಂದಿರುವುದರಿಂದ (ಹೆಚ್ಚಾಗಿ ಯುವ ಮತದಾರರು), ಎರಡೂ ರಾಷ್ಟ್ರೀಯ ಪಕ್ಷಗಳಿಗೆ ಈ ಅಂಶ ಹಿನ್ನಡೆಯಾಗುವ ಸಾಧ್ಯತೆ ಸದ್ಯದ ಮಟ್ಟಕ್ಕೆ ದಟ್ಟವಾಗಿದೆ.
ಲಿಂಗಾಯತ ಸಮುದಾಯದ ಒಂದು ಮತವೂ ಆಚೀಚೆ ಆಗಬಾರದು" ಯಡಿಯೂರಪ್ಪ
"ವೀರಶೈವ/ಲಿಂಗಾಯತ ಸಮುದಾಯದ ಒಂದು ಮತವೂ ಆಚೀಚೆ ಆಗಬಾರದು" ಎನ್ನುವ ಹೇಳಿಕೆಯನ್ನು ಯಡಿಯೂರಪ್ಪ, ಎರಡು ದಿನಗಳ ಹಿಂದೆ ಹೇಳಿದ್ದರು. ಇದನ್ನೇ ಮೂಲವಾಗಿಟ್ಟುಕೊಂಡು, ಪಕ್ಢದ ಪ್ರಭಾವೀ ಮುಖಂಡ, ಪ್ರಭಾಕರ ಕೋರೆ ಕೂಡಾ ಸಮುದಾಯದ ಮುಖಂಡರ ಜೊತೆ ಮಾತುಕತೆ ನಡೆಸಿದ್ದರು. ಅಲ್ಲಿ, ಅವರಿಗೆ ಪೂರಕವಾದ ಕಮಿಟ್ಮೆಂಟ್ ಸಮುದಾಯದವರಿಂದ ಸಿಗಲಿಲ್ಲ.
ಜಾರಕಿಹೊಳಿ ಬ್ರದರ್ಸ್ ತಲ್ಲಣ ಮೂಡಿಸುವ ಗ್ರೌಂಡ್ ರಿಪೋರ್ಟ್?
ಗೋಕಾಕ್ ನಲ್ಲಿ ಪ್ರಚಾರದಲ್ಲಿದ್ದ ಮಾಜಿ ಸಿಎಂ ಕುಮಾರಸ್ವಾಮಿ, ನಮ್ಮ ಅಭ್ಯರ್ಥಿ ಗೆದ್ದರೆ, ಯಾವ ಪಕ್ಷದ ಸರಕಾರವಿದ್ದರೂ, ಸಚಿವರಾಗುವುದು ಗ್ಯಾರಂಟಿ ಎಂದು ಹೇಳಿದ್ದಾರೆ. ಒಂದೇ ಕುಟುಂಬದಿಂದ ಇಬ್ಬರ ಸ್ಪರ್ಧೆ, ಜೆಡಿಎಸ್ ಅಭ್ಯರ್ಥಿ ಅಶೋಕ್ ಪೂಜಾರಿಗೆ ವರವಾಗಿ ಪರಿಣಮಿಸುವ ಸಾಧ್ಯತೆಯಿದೆ ಎನ್ನುವುದು ಸದ್ಯದ ಗ್ರೌಂಡ್ ರಿಪೋರ್ಟ್. ಜಾರಕಿಹೊಳಿ ಸಹೋದರರು ಪರಸ್ಪರ ಅಭ್ಯರ್ಥಿಗಳಾಗಿದ್ದು, ಇದರ ಹಿಂದೆ ಮ್ಯಾಚ್ ಫಿಕ್ಸಿಂಗ್ ನಡೆಯುತ್ತಿದೆಯಾ ಎಂಬ ಗುಸುಗುಸು ಸುದ್ದಿ ಬೇರೆ ಹರಿದಾಡುತ್ತಿದೆ. ಆದರೆ, ಈ ಹಿಂದೆ ಕೂಡಾ ಹೇಳಿದಂತೆ, ಮತದಾನದ ಮುನ್ನಾದಿನ ನಡೆಯುವ ಬೆಳಗಾವಿಯ ರಾಜಕೀಯವೇ ಬೇರೆ..