ಮಹಾರಾಷ್ಟ್ರ ಗಡಿ ಕ್ಯಾತೆ ಬೆನ್ನಲ್ಲೆ ಗೋವಾದಿಂದ ಮಹಾದಾಯಿ ಕ್ಯಾತೆ
ಬೆಳಗಾವಿ, ಜನವರಿ 30: ಮಹಾರಾಷ್ಟ್ರ ರಾಜ್ಯದ ಗಡಿ ಕ್ಯಾತೆ ಬೆನ್ನಲ್ಲೆ, ಈಗ ಗೋವಾದಿಂದ ಮಹಾದಾಯಿ ಕ್ಯಾತೆ ತೆಗೆಯಲಾಗಿದೆ. ಒಂದೇ ಬಾರಿಗೆ ಕರ್ನಾಟಕದ ವಿರುದ್ಧ ನೆರೆ ರಾಜ್ಯಗಳು ತಿರುಗಿ ಬಿದ್ದಿವೆ.
ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಉದ್ಧಟತನ ಬೆನ್ನಲ್ಲೇ ಈಗ ಗೋವಾ ಸಿಎಂ ಪ್ರಮೋದ್ ಸಾವಂತ ಕೂಡಾ ಕಿರಿಕ್ ಮಾಡಿದ್ದಾರೆ. ಮಹಾದಾಯಿ ವಿಚಾರದಲ್ಲಿ ಕರ್ನಾಟಕದ ವಿರುದ್ಧ ಗೋವಾ ಸಿಎಂ ಪ್ರಮೋದ್ ಸಾವಂತ್ ತೊಡೆ ತಟ್ಟಿ ನಿಂತಂತಿದೆ.
ಮಹಾದಾಯಿ ನನ್ನ ತಾಯಿ, ಈ ವಿಚಾರದಲ್ಲಿ ರಾಜಿಯೇ ಇಲ್ಲ: ಗೋವಾ ಸಿಎಂ
ಗೋವಾ ಅಧಿವೇಶನದಲ್ಲಿ ಮಹಾದಾಯಿ ವಿಷಯ ಪ್ರಸ್ತಾಪಿಸಿದ ಸಿಎಂ ಪ್ರಮೋದ್ ಸಾವಂತ್, ಪಕ್ಷವನ್ನೂ ಬದಿಗಿಟ್ಟು ಮಹಾದಾಯಿ ನೋಡುವೆ ಎಂದಿದ್ದು, ತಮ್ಮದೇ ಪಕ್ಷದ ವಿರುದ್ಧವೂ ಗುಟುರು ಹಾಕಿದ್ದಾರೆ.
ಕೇಂದ್ರ ಸರ್ಕಾರ, ಕರ್ನಾಟಕ ಹಾಗೂ ಗೋವಾದಲ್ಲಿ ಬಿಜೆಪಿಯದ್ದೆ ಸರ್ಕಾರ ಇದ್ದು, ಹೀಗಾಗಿ ಮಹಾದಾಯಿ ವಿವಾದ ಸುಲಲಿತ ಎಂದು ಭಾವಿಸಿರುವಾಗಲೇ ಗೋವಾ ಸಿಎಂ ಉಲ್ಟಾ ಹೊಡೆದಿರುವುದು ಕರ್ನಾಟಕಕ್ಕೆ ಎಚ್ಚರಿಕೆ ಘಂಟೆ ಎಂದೇ ಭಾವಿಸಬೇಕಾಗಿದೆ.
ಮಹಾರಾಷ್ಟ್ರ ಗಡಿ ಕ್ಯಾತೆ ಬೆನ್ನಲ್ಲೆ ಗೋವಾದಿಂದ ಮಹದಾಯಿ ಕ್ಯಾತೆ. ಒಂದೇ ಸಲಕ್ಕೆ ಕರ್ನಾಟಕದ ವಿರುದ್ಧ ತಿರುಗಿ ಬಿದ್ದ ನೆರೆ ರಾಜ್ಯಗಳು.
— oneindiakannada (@OneindiaKannada) January 30, 2021
ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಉದ್ಧಟತನ ಬೆನ್ನಲ್ಲೇ ಈಗ ಗೋವಾ ಸಿಎಂ ಪ್ರಮೋದ್ ಸಾವಂತ ಕಿರಿಕ್. ಕರ್ನಾಟಕದ ವಿರುದ್ಧ ತೊಡೆ ತಟ್ಟಿ ನಿಂತ ಗೋವಾ ಸಿಎಂ. ಗೋವಾ ಅಧಿವೇಶನದಲ್ಲಿ ಮಹದಾಯಿ ವಿಷಯ ಪ್ರಸ್ತಾಪ pic.twitter.com/sCsoX1zkea
ಮಹಾದಾಯಿ ವಿಷಯದಲ್ಲಿ ಪಕ್ಷದ ಮಾತು ಕೇಳುವುದಿಲ್ಲ ಎಂದಿರುವ ಗೋವಾ ಸಿಎಂ, ಮಹಾದಾಯಿ ನಂಗೆ ತಾಯಿ ಸಮಾನ, ಮಹಾದಾಯಿ ಗೋವಾದ ಜೀವನದಿ. ಈ ಜೀವನದಿಗಾಗಿ ನಾನು ಪಕ್ಷ ಮತ್ತು ರಾಜಕೀಯ ಬದಿಗಿಡುವೆ ಎಂದು ಹೇಳಿದ್ದಾರೆ.
ಕರ್ನಾಟಕದಲ್ಲಿ ನಮ್ಮದೇ ಬಿಜೆಪಿ ಸರ್ಕಾರ ಇದೆ. ಹಾಗಂತ ನಾನು ಪಕ್ಷದ ಮಾತು ಕೇಳಿ ರಾಜೀ ಆಗೋದಿಲ್ಲ. ಮಹಾದಾಯಿ ವಿಷಯದಲ್ಲಿ ಯಾರ ಒತ್ತಡಕ್ಕೂ ಮಣಿಯುವುದಿಲ್ಲ. ಪಕ್ಷದಿಂದ ಯಾವ ಒತ್ತಡ ಬಂದರೂ ಒಪ್ಪಲಾರೆ ಎಂದು ಗೋವಾದಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಿ ಸಿಎಂ ಪ್ರಮೋದ್ ಸಾವಂತ್ ಹೇಳಿಕೆ ನೀಡಿದ್ದಾರೆ.
ಗೋವಾ ಸಿಎಂ ಪ್ರಮೋದ್ ಸಾವಂತ್ ಹೇಳಿಕೆ ಕುರಿತು ಕರ್ನಾಟಕದ ಮುಖ್ಯಮಂತ್ರಿಯಾಗಲಿ, ಜಲಸಂಪನ್ಮೂಲ ಸಚಿವರಾಗಲೀ ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.