ಬೆಳಗಾವಿ ಗ್ರಾಮೀಣ ಕ್ಷೇತ್ರಕ್ಕೆ ವಿಶೇಷ ಅನುದಾನ ನೀಡಿ: ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಮನವಿ
ಬೆಳಗಾವಿ, ಆಗಸ್ಟ್ 26: ಬೆಳಗಾವಿ ಗ್ರಾಮೀಣ ಕ್ಷೇತ್ರಕ್ಕೆ ಕಳೆದ ವರ್ಷದ ಪ್ರವಾಹ ಪರಿಹಾರ ಇನ್ನೂ ಬಾಕಿ ಇರುವಾಗಲೇ ಈ ಬಾರಿ ಪುನಃ ಪ್ರವಾಹ ಅಪ್ಪಳಿಸಿದೆ. ಹಾಗಾಗಿ ಬಾಕಿಯ ಜೊತೆಗೆ ವಿಶೇಷ ಅನುದಾನ ಬಿಡುಗಡೆ ಮಾಡಬೇಕು ಎಂದು ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಬಳಿ ಮನವಿ ಮಾಡಿದ್ದಾರೆ.
ಮಂಗಳವಾರ ಪ್ರವಾಹದ ವೈಮಾನಿಕ ಸಮೀಕ್ಷೆಗೆಂದು ಬೆಳಗಾವಿಗೆ ಆಗಮಿಸಿದ್ದ ಸಿಎಂ ಯಡಿಯೂರಪ್ಪ ಅವರಿಗೆ ಲಕ್ಷ್ಮಿ ಹೆಬ್ಬಾಳ್ಕರ್ ಈ ಕುರಿತು ಮನವಿ ಸಲ್ಲಿಸಿದರು.
ಮಲಪ್ರಭಾ ನದಿ ಪಾತ್ರದಲ್ಲಿ ಒತ್ತುವರಿಯಾಗಿದೆ; ಸಚಿವ ರಮೇಶ್ ಜಾರಕಿಹೊಳಿ
ಪ್ರಸ್ತುತ ಆಗಷ್ಟ ತಿಂಗಳಿನಲ್ಲಿ ವಾಡಿಕೆಗಿಂತ ಹೆಚ್ಚು ಮಳೆ ಸುರಿಯುತ್ತಿದ್ದು, ಇದಕ್ಕೆ ಬೆಳಗಾವಿ ಗ್ರಾಮೀಣ ಕ್ಷೇತ್ರವೂ ಹೊರತಾಗಿಲ್ಲ. ಹಿಂದಿನ ವರ್ಷದ ಅತಿವೃಷ್ಠಿಯಿಂದ ಸರಿಯಾದ ರೀತಿಯಲ್ಲಿ ಪರಿಹಾರ ಸಿಗದೇ ಕಂಗಾಲಾದ ಗ್ರಾಮಸ್ಥರು, ಇನ್ನೂ ಸುಧಾರಿಸುತ್ತಿರುವಾಗಲೇ ಈ ವರ್ಷವೂ ಅತೀ ಮಳೆ ಸುರಿಯುತ್ತಿದೆ ಎಂದು ತಿಳಿಸಿದರು.
ಮಳೆಹಾನಿಗೆ ಹೆಚ್ಚಿನ ಪರಿಹಾರ ಬಿಡುಗಡೆ ಮಾಡಬೇಕು
ಬೆಳಗಾವಿ ಗ್ರಾಮೀಣ ಕ್ಷೇತ್ರವು ಹೆಚ್ಚಾಗಿ ಕೃಷಿ ಆಧಾರಿತವಾಗಿದ್ದು, ರೈತರು ಬೆಳೆದ ಬೆಳೆಯು ಸಂಪೂರ್ಣ ಹಾಳಾಗಿದೆ. ಮಳೆ ನೀರಿನಿಂದ ಸಂಪೂರ್ಣ ಆವೃತವಾಗಿ ಯಾವುದೇ ಬೆಳೆಯನ್ನು ಬೆಳೆಯಲಾರದ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅಷ್ಟೇ ಅಲ್ಲದೇ ಗ್ರಾಮದಲ್ಲಿರುವ ಸಣ್ಣ ಕೆರೆ, ಅಣೆಕಟ್ಟು, ರಸ್ತೆಗಳು ಸಹ ಹಾಳಾಗಿವೆ. ರಸ್ತೆಗಳು ಮಳೆಯಿಂದ ಹಾಳಾಗಿದ್ದು, ಸಂಚಾರ ವ್ಯವಸ್ಥೆಗೆ ಅಡೆತಡೆಯಾಗಿದೆ. ಹಾಗಾಗಿ ಕ್ಷೇತ್ರದಲ್ಲಿ ಉಂಟಾಗಿರುವ ಹಾನಿಗೆ ಹೆಚ್ಚಿನ ಪರಿಹಾರ ಬಿಡುಗಡೆ ಮಾಡಬೇಕು ಎಂದು ಹೆಬ್ಬಾಳ್ಕರ್ ಕೋರಿದರು.
1000 ಸಂತ್ರಸ್ಥರಿಗೆ ಪರಿಹಾರ ನೀಡಲಾಗಿದೆ
2019 -20ನೇ ಸಾಲಿನಲ್ಲಿ ಸುರಿದ ಅತೀವ ಮಳೆಗೆ ಗ್ರಾಮೀಣ ಕ್ಷೇತ್ರದ ಸುಮಾರು 5 ಸಾವಿರಕ್ಕಿಂತಲೂ ಹೆಚ್ಚಿನ ಮನೆಗಳು ಕುಸಿದಿದ್ದು, ಅದರಲ್ಲಿ ಸುಮಾರು 1000 ಸಂತ್ರಸ್ಥರಿಗೆ ಪರಿಹಾರ ನೀಡಲಾಗಿದೆ. ಹೆಚ್ಚುವರಿ 1 ಸಾವಿರಕ್ಕಿಂತಲೂ ಹೆಚ್ಚಿನ ಸಂತ್ರಸ್ಥರಿಗೆ ಪರಿಹಾರ ಒದಗಿಸುವಂತೆ ಸಲ್ಲಿಸಿದ ಮನವಿಗೆ ಈವರೆಗೂ ಸ್ಪಂದನೆ ಸಿಕ್ಕಿಲ್ಲ. ಗ್ರಾಮೀಣ ಕ್ಷೇತ್ರದ ಒಟ್ಟಾರೆ 6 ಸಾವಿರಕ್ಕಿಂತಲೂ ಹೆಚ್ಚಿನ ಸಂತ್ರಸ್ಥರಿಗೆ ಪರಿಹಾರ ದೊರಕಬೇಕಿದೆ ಎಂದು ಮಾಹಿತಿ ತಿಳಿಸಿದರು.
ಈ ಸಲವಾದರೂ ರಾಮದುರ್ಗ ಸಂತ್ರಸ್ತರಿಗೆ ಪರಿಹಾರ ಕೊಡಿ; ಶಾಸಕ ಯಾದವಾಡ
ಫಲವತ್ತಾದ ಮಣ್ಣು ಹಾನಿಯಾಗಿದೆ
ಭೇಂಡಿಗೇರಿ ಗ್ರಾಮದ ಸಣ್ಣ ನೀರಾವರಿ ಇಲಾಖೆಯ ಇಂಗು ಕೆರೆಯು ಆಗಸ್ಟ್ 6 ಮತ್ತು 7ರಂದು ಸುರಿದ ಭಾರಿ ಮಳೆಗೆ ಸುಮಾರು 10 ಮೀಟರ್ ಕುಸಿದಿದೆ. ಇದರಿಂದ ಯಾವುದೇ ತರಹದ ಜೀವ ಹಾನಿಯಾಗದಿರುವುದು ಸಮಾಧಾನದ ಸಂಗತಿಯಾದರೂ ತಳಭಾಗ ಜಮೀನಿನಲ್ಲಿರುವ ಫಲವತ್ತಾದ ಮಣ್ಣು ಹಾಗೂ ಸುಮಾರು 20 ಎಕರೆಯಷ್ಟು ಬೆಳೆಗಳು ಹಾನಿಯಾಗಿರುತ್ತವೆ ಎಂದು ಸಿಎಂ ಅವರಿಗೆ ಮನವರಿಕೆ ಮಾಡಿದರು.
ಆಗಸ್ಟ್ ಮಾಹೆಯಲ್ಲಿ ವಾಡಿಕೆಗಿಂತ ಹೆಚ್ಚು ಮಳೆ
ಕೆರೆಯ ಏರಿಯನ್ನು ಮರು ನಿರ್ಮಾಣ ಮಾಡಲು ಅಂದಾಜು 40 ಲಕ್ಷ ರೂ.ಗಳ ಅವಶ್ಯಕತೆ ಇದೆಯೆಂದು ಇಲಾಖೆಯವರು ವರದಿ ಮಾಡಿದ್ದಾರೆ. ಆದ್ದರಿಂದ ಶೀಘ್ರ ಇಲಾಖೆಗೆ ಅನುದಾನ ಮಂಜೂರು ಮಾಡಬೇಕು. ಈ ವರ್ಷದ ಆಗಸ್ಟ್ ಮಾಹೆಯಲ್ಲಿ ವಾಡಿಕೆಗಿಂತ ಹೆಚ್ಚು ಮಳೆ ಸುರಿಯುತ್ತಿದ್ದು, ಗ್ರಾಮೀಣ ಕ್ಷೇತ್ರವನ್ನು ಸಂಕಷ್ಟಕ್ಕೀಡುಮಾಡಿದೆ. ಬಾಕಿ ಇರುವ ಸಂತ್ರಸ್ಥರಿಗೆ ಶೀಘ್ರ ಪರಿಹಾರವನ್ನು ಒದಗಿಸಬೇಕು ಎಂದು ಶಾಸಕಿ ಮನವಿ ಮಾಡಿದ್ದಾರೆ.