ಕೊಳವೆ ಬಾವಿಯಲ್ಲಿ ಬಿದ್ದ ಬಾಲಕಿ ಕಾವೇರಿ ಬದುಕಿ ಬರಲಿ
ಕಾವೇರಿ 20 ಅಡಿ ಆಳದಲ್ಲಿ ಸಿಲುಕಿದ್ದು, ಪಕ್ಕದ ಸ್ಥಳದಿಂದ ಮಣ್ಣನ್ನು ಜೆಸಿಬಿಗಳ ಮೂಲಕ ಗುಂಡಿ ತೆರೆದು ಆಕೆಯನ್ನು ತಲುಪಲು ಪ್ರಯತ್ನ ನಡೆದಿದೆ. ಇದೇ ಸಮಯದಲ್ಲಿ ಕೊಳವೆಬಾವಿಯೊಳಗೆ ಮಣ್ಣು ಬೀಳದಂತೆ ಎಚ್ಚರ ವಹಿಸಲಾಗುತ್ತಿದೆ.
ಅಥಣಿ (ಬೆಳಗಾವಿ), ಏಪ್ರಿಲ್ 23 : ಝಂಝರವಾಡ ಗ್ರಾಮದಲ್ಲಿ ತೆರೆದ ಕೊಳವೆಬಾವಿಯೊಳಗೆ ಬಿದ್ದ 6 ವರ್ಷದ ಕಂದಮ್ಮ ಕಾವೇರಿಯನ್ನು ಜೀವಂತ ಹೊರತೆಗೆಯುವ ಕಾರ್ಯ ಭಾನುವಾರ ಬೆಳಗ್ಗಿನಿಂದ ಭರದಿಂದ ಸಾಗಿದೆ.
ಇದೀಗ ಬಂದ ಸುದ್ದಿಯ ಪ್ರಕಾರ, ಕಾವೇರಿಯನ್ನು ಹುಕ್ ಮೂಲಕ ಮೇಲಕ್ಕೆತ್ತುವ 4ನೇ ಪ್ರಯತ್ನವೂ ವಿಫಲವಾಗಿದೆ. ಕ್ಯಾಮೆರಾದಲ್ಲಿ ಕಾವೇರಿಯ ಕೈಗಳು ಕಾಣಿಸುತ್ತಿದ್ದು, ಕಾವೇರಿ ಬದುಕಿ ಬರಬೇಕಿದ್ದರೆ ಸಮಯ ಕಡಿಮೆ ಇರುವುದರಿಂದ ಹುಕ್ ಮೂಲಕವೇ ಎತ್ತಬೇಕಾಗಿದೆ.
ಶನಿವಾರ ಸಂಜೆ ತನ್ನ ತಮ್ಮನೊಂದಿಗೆ ಆಟವಾಡುತ್ತಿದ್ದಾಗ ಕಾವೇರಿ ಅಕಸ್ಮಾತಾಗಿ ತೆರೆದ ಬಾವಿಯೊಳಗೆ ಬಿದ್ದಿದ್ದಳು. ಕೊಳವೆಬಾವಿಯನ್ನು ಸರಿಯಾಗಿ ಮುಚ್ಚಿರದಿದ್ದರಿಂದ ಈ ದುರಂತ ಸಂಭವಿಸಿದೆ. ಕಾವೇರಿ ಜೀವಂತ ಬರಲೆಂದು ಎಲ್ಲ ಪ್ರಯತ್ನ ನಡೆಸಲಾಗುತ್ತಿದೆ.
ಕಾವೇರಿ 20 ಅಡಿ ಆಳದಲ್ಲಿ ಸಿಲುಕಿದ್ದು, ಪಕ್ಕದ ಸ್ಥಳದಿಂದ ಮಣ್ಣನ್ನು ಜೆಸಿಬಿಗಳ ಮೂಲಕ ಗುಂಡಿ ತೆರೆದು ಆಕೆಯನ್ನು ತಲುಪಲು ಪ್ರಯತ್ನ ನಡೆದಿದೆ. ಇದೇ ಸಮಯದಲ್ಲಿ ಕೊಳವೆಬಾವಿಯೊಳಗೆ ಮಣ್ಣು ಬೀಳದಂತೆ ಎಚ್ಚರ ವಹಿಸಲಾಗುತ್ತಿದೆ. ಬಿದ್ದ ಅಲ್ಪ ಮಣ್ಣನ್ನು ಪುರಸಭೆಯ ಸಕ್ಕಿಂಗ್ ಮಷೀನ್ ಮೂಲಕ ತೆಗೆಯಲಾಗುತ್ತಿದೆ. [ಕೊಳವೆ ಬಾವಿ ದುರಂತ ತಡೆಯಲು ಖಡಕ್ ಮಾರ್ಗಸೂಚಿ]
ಕೊಳವೆಬಾವಿಯ ಬದಿಯಿಂದ ನೆಲ ಅಗೆಯುತ್ತಿರುವಾಗ ಬಂಡೆಯೊಂದು ಅಡ್ಡಬಂದಿದೆ ಎಂದು ತಿಳಿದುಬಂದಿದೆ. ಬಂಡೆ ಕೊರೆದು ನಡೆಸುವ ರಕ್ಷಣಾಕಾರ್ಯ ಜಾಸ್ತಿ ಸಮಯ ತೆಗೆದುಕೊಳ್ಳುವುದರಿಂದ ಹುಕ್ ಹಾಕಿ ಕೊಳವೆ ಬಾವಿಯಿಂದಲೇ ಕಾವೇರಿಯನ್ನು ಮೇಲೆತ್ತವ ಪ್ರಯತ್ನ ನಡೆಸಲಾಯಿತು. [ಸಾವು ಬಾಯ್ತೆರೆದು ಕಾಯುತಿದೆ... ಎಚ್ಚರ!]
ಕಾವೇರಿಯನ್ನು ಮೇಲಕ್ಕೆತ್ತಲು ನಾಲ್ಕು ಬಾರಿ ಪ್ರಯತ್ನಿಸಿದರೂ ಫಲ ನೀಡಲಿಲ್ಲ.
ಕಾವೇರಿಗೆ ಸತತವಾಗಿ ಆಮ್ಲಜನಕ ಪೂರೈಸಲಾಗುತ್ತಿದ್ದು ಆಕೆ ಜೀವಂತವಿರುವಂತೆ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಹುಕ್ ಹಾಕಿ ತೆಗೆಯುವ ಕಾರ್ಯ ಅತ್ಯಂತ ಸೂಕ್ಷ್ಮವಾಗಿದ್ದರಿಂದ ತಜ್ಞರ ಸಲಹೆಯ ಮೇರೆಗೆ ಕಾರ್ಯಾಚರಣೆ ನಡೆಸಲಲಾಗುತ್ತಿದೆ. [ಕೊಳವೆ ಬಾವಿಯಲ್ಲಿಯೇ ಮಣ್ಣಾದ ತಿಮ್ಮಣ್ಣ]
ಮೂವರು ಮಕ್ಕಳ ತಾಯಿಯಾಗಿರುವ ಸವಿತಾ ಅವರು 'ನನ್ನ ಮಗಳನ್ನು ಬದುಕಿಸಿಕೊಡಿ, ನನಗೆ ಬೇರೆ ಏನೂ ಬೇಡ, ನನ್ನ ಮಗಳು ಬೇಕು' ಎಂದು ಅತ್ತು ಅತ್ತು ಸುಸ್ತಾಗಿ ಪ್ರಜ್ಞೆತಪ್ಪಿ ಬೀಳುತ್ತಿದ್ದಾರೆ. ಅವರನ್ನು ಸಮಾಧಾನಪಡಿಸಲು ಸಂಬಂಧಿಕರು ಹರಸಾಹಸಪಡುತ್ತಿದ್ದಾರೆ. ಸವಿತಾ ಅವರ ಎರಡನೇ ಮಗಳೇ ಕಾವೇರಿ. [ಅಥಣಿಯಲ್ಲಿ ಕೊಳವೆ ಬಾವಿಗೆ ಬಿದ್ದ ಬಾಲಕಿ]
ಸದ್ಯ ಸವಿತಾ ಆರೋಗ್ಯದಲ್ಲಿ ಏರು ಪೇರಾಗಿದ್ದು ಅವರಿಗೆ ಕುಕ್ಕಟನೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನು ಹಲವು ಕಡೆಗಳಲ್ಲಿ ಕಾವೇರಿ ಬದುಕಿ ಬರಲಿ ಎಂದು ಪ್ರಾರ್ಥನೆ ನಡೆಸಲಾಗುತ್ತಿದೆ.