ಬೆಳಗಾವಿಯಲ್ಲಿ ರೌಡಿಶೀಟರ್ ಬರ್ಬರ ಹತ್ಯೆ
ಬೆಳಗಾವಿ, ಅಕ್ಟೋಬರ್ 26: ಹುಟ್ಟುಹಬ್ಬದ ಪಾರ್ಟಿ ಮುಗಿಸಿಕೊಂಡು ವಾಪಸ್ಸಾಗುತ್ತಿದ್ದ ರೌಡಿಯನ್ನು ಬರ್ಬರಾಗಿ ಕೊಲೆ ಮಾಡಿರುವ ಘಟನೆ ಬೆಳಗಾವಿ ಮಹಾನಗರದ ಗ್ಯಾಂಗ್ ವಾಡಿ ಪ್ರದೇಶದಲ್ಲಿ ನಡೆದಿದೆ.
ಬೆಳಗಾವಿ ತಾಲೂಕಿನ ಕಾಕತಿ ಮೂಲದ ಶಹಬಾಜ್ ಪಠಾಣ್ ಮೃತಪಟ್ಟವನು. ಗಾಂಧಿನಗರದ ರೆಸಾರ್ಟ್ ನಲ್ಲಿ ಅ.25ಕ್ಕೆ ಸ್ನೇಹಿತನ ಜತೆಗೆ ಬರ್ತ್ ಡೇ ಪಾರ್ಟಿ ಮುಗಿಸಿ ಮನೆಗೆ ಹೊರಟಿದ್ದ ಶಹಬಾಜ್ ಮೇಲೆ ಗುಂಪೊಂದು ದಾಳಿ ನಡೆಸಿ ಕೊಲೆ ನಡೆಸಿದೆ. ಹಳೆಯ ವೈಷಮ್ಯ, ಹಣಕಾಸಿನ ವ್ಯವಹಾರಕ್ಕೆ ಸಂಬಂಧಿಸಿದಂತೆ ಕೊಲೆ ನಡೆದಿದೆ ಎಂದು ಪೊಲೀಸರು ಸಂಶಯ ವ್ಯಕ್ತಪಡಿಸಿದ್ದಾರೆ. ಈ ಆಯಾಮದಲ್ಲಿ ಹಂತಕರ ಶೋಧಕ್ಕೆ ಪೊಲೀಸರು ಮುಂದಾಗಿದ್ದಾರೆ.
ವಿಡಿಯೋ: ಮಚ್ಚು ತೋರಿಸಿ ಜನರನ್ನು ಲೂಟಿ ಮಾಡಿದ ಪುಡಿ ರೌಡಿ
ಕಾಕತಿ ಮೂಲದ ಶಹಬಾಜ್ ವಿರುದ್ಧ ಹಲವು ಮಾರಣಾಂತಿಕ ಹಲ್ಲೆ ಪ್ರಕರಣಗಳು ದಾಖಲಾಗಿದ್ದವು. ಹೀಗಾಗಿ ಶಹಬಾಜ್ ಕಾಕತಿ ಬಿಟ್ಟು ಅಝಂ ನಗರದಲ್ಲಿ ವಾಸವಾಗಿದ್ದನು. ನಿನ್ನೆ ರಾತ್ರಿ ಪಾರ್ಟಿ ಮುಗಿಸಿ ಮನೆಗೆ ಹೊರಟಾಗ ಗುಂಪೊಂದು ದಾಳಿ ನಡೆಸಿದೆ. ಮಾರಕಾಸ್ತ್ರಗಳಿಂದ ದಾಳಿ ಮಾಡಿ ಕೈ, ಕುತ್ತಿಗೆಗೆ ಹೊಡೆಯಲಾಗಿದೆ.
ಗಂಭೀರವಾಗಿ ಗಾಯಗೊಂಡಿದ್ದ ಶಹಬಾಜ್ ನನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೇ ಇಂದು ಶಹಬಾಜ್ ಮೃತನಾಗಿದ್ದಾನೆ. ಈ ಕುರಿತು ಮಾಳಮಾರುತಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಶೀಘ್ರವೇ ಆರೋಪಿಗಳನ್ನು ಪತ್ತೆಹಚ್ಚಿ ಬಂಧಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.