ಕೊರೊನಾ, ಮಳೆ ಅಟ್ಟಹಾಸದ ನಡುವೆ ಬೆಳಗಾವಿಯಾದ್ಯಂತ ಗಣೇಶೋತ್ಸವ
ಬೆಳಗಾವಿ, ಆಗಸ್ಟ್ 22: ಕೊರೊನಾ ಅಟ್ಟಹಾಸ ಹಾಗೂ ಮಳೆಯ ಕಾರಣ ಗಡಿ ಜಿಲ್ಲೆ ಬೆಳಗಾವಿಯಲ್ಲಿ ಸರಳ ಗಣೇಶೋತ್ಸವ ಆಚರಿಸಲಾಯಿತು. ಕೊನೆ ಕ್ಷಣದಲ್ಲಿ ಸಾರ್ವಜನಿಕ ಗಣೇಶ ಪ್ರತಿಷ್ಠಾಪನೆಗೆ ಸರ್ಕಾರ ಅವಕಾಶ ನೀಡಿದೆ. ಹೀಗಾಗಿ ಈ ಸಲ ಸರಳವಾಗಿ ಗಣೇಶೋತ್ಸವ ಆಚರಿಸಲು ಜಿಲ್ಲೆಯ ಮಹಾಮಂಡಳಿಗಳು ನಿರ್ಧರಿಸಿದ್ದವು.
ಪ್ರತಿವರ್ಷವೂ ಬೆಳಗಾವಿಯಲ್ಲಿ ಅದ್ಧೂರಿಯಾಗಿ ಗಣೇಶೋತ್ಸವ ನಡೆಸಲಾಗುತ್ತಿತ್ತು. ಮುಂಬೈ ಮಾದರಿಯಲ್ಲಿ ನಡೆಯುತ್ತಿದ್ದ ಗಣೇಶೋತ್ಸವಕ್ಕೆ ಇದೀಗ ಬ್ರೇಕ್ ಬಿದ್ದಿದೆ. ಬೆಳಗಾವಿ ಮಹಾನಗರದಲ್ಲಿ ಸಾರ್ವಜನಿಕವಾಗಿ 400ಕ್ಕೂ ಅಧಿಕ ಹಾಗೂ ಜಿಲ್ಲೆಯಾದ್ಯಂತ ಸಾವಿರಕ್ಕೂ ಅಧಿಕ ಗಣೇಶನನ್ನು ಪ್ರತಿಷ್ಠಾಪನೆ ಮಾಡಲಾಗಿದೆ.
ಗಣೇಶ ಚತುರ್ಥಿ ವಿಶೇಷ: ಗಜಮುಖನಿಗ್ಯಾಕೆ ಇಷ್ಟೊಂದು ಹೆಸರು?
ಮನೆಗಳಲ್ಲಿ ಕೂಡ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಿದ್ದಾರೆ. ಮಧ್ಯಾಹ್ನದ ನಂತರತ್ರ ಮಹಾಮಂಡಳ ಪದಾಧಿಕಾರಿಗಳು ಗಣೇಶ ಮೂರ್ತಿ ತಂದು ಸಾರ್ವಜನಿಕವಾಗಿ ಪ್ರತಿಷ್ಠಾಪನೆ ಮಾಡುತ್ತಿದ್ದಾರೆ. ಮನೆಯಲ್ಲಿ ಗಣಪತಿಗಳನ್ನು ಐದನೇ ದಿನಕ್ಕೆ ಹಾಗೂ ಸಾರ್ವಜನಿಕ ಗಣಪತಿಗಳನ್ನು 11ನೇ ದಿನಕ್ಕೆ ವಿಸರ್ಜನೆ ಮಾಡುತ್ತಾರೆ. ಈ ಸಲ ವಿಸರ್ಜನೆ ಕೂಡ ಸರಳವಾಗಿ ನಡೆಸುವಂತೆ ಜಿಲ್ಲಾಡಳಿತ ಸೂಚನೆ ನೀಡಿದೆ.