ನಗು ಜಗಳಗಳ ನಡುವೆ ಸದನದಲ್ಲಿ ಸ್ವಾರಸ್ಯಕರ ಚರ್ಚೆ
ಬೆಳಗಾವಿ, ನವೆಂಬರ್ 22 : ಸದಾ ಒಬ್ಬರನ್ನೊಬ್ಬರು ಮೂದಲಿಸಿಕೊಂಡು, ಒಬ್ಬರ ಹುಳುಕನ್ನೊಬ್ಬರು ಎತ್ತಿ ತೋರಿಸುತ್ತಾ ಜಗಳದಲ್ಲೇ ನಿರತರಾಗಿದ್ದ ಬಿಜೆಪಿ ಮುಖಂಡ ಕೆ.ಎಸ್.ಈಶ್ವರಪ್ಪ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಡುವೆ ಸ್ವಾರಸ್ಯಕರ ಚರ್ಚೆ, ನಗುವಿಗೆ ಕಲಾಪ ಇಂದು (ನವೆಂಬರ್ 22) ಸಾಕ್ಷಿಯಾಯಿತು.
ಈಶ್ವರಪ್ಪ ಬುದ್ಧಿಮಾಂದ್ಯ ; ಮುಖ್ಯಮಂತ್ರಿ ಸಿದ್ದರಾಮಯ್ಯ
ಬಹುಮುಖ್ಯ ಮೌಡ್ಯ ನಿಷೇಧ ಕಾಯ್ದೆಯ ಬಗ್ಗೆ ಪ್ರಶ್ನೋತ್ತರ ವೇಳೆಯಲ್ಲಿ ಜಯಚಂದ್ರ ಅವರು 'ಮೌಢ್ಯ ನಿಷೇಧ ಕಾಯ್ದೆ ಯಾವುದೇ ಹರಕೆಗೆ ಬಾಧಕ ಇಲ್ಲ. ಆದರೆ, ನಂಬಿಕೆಗಳನ್ನು ಬಂಡವಾಳ ಮಾಡಿಕೊಳ್ಳುವವರಿಗೆ ಇದು ಕಡಿವಾಣ ಹಾಕುತ್ತೆ' ಎಂದರು. ಈ ಸಮಯದಲ್ಲಿ ಮುಖ್ಯಮಂತ್ರಿಗಳ ಕಾಲೆಳೆದ ಈಶ್ವರಪ್ಪ "ಸಿಎಂ ಅವರಿಗೆ ಇತ್ತೀಚಿನ ಮಾತ್ರ ದೇವರ ಮೇಲೆ ನಂಬಿಕೆ ಬಂದಿದೆ. ದೇವಸ್ಥಾನಗಳಿಗೆ ಜಾಸ್ತಿ ಹೋಗ್ತಾ ಇದ್ದಾರೆ' ಎಂದರು.
ಇದಕ್ಕೆ ತಮಾಷೆಯ ಮೂಡ್ ನಲ್ಲಿಯೇ ಉತ್ತರ ನೀಡಿದ ಮುಖ್ಯ ಮಂತ್ರಿಗಳು "ನಾನು ನಾಸ್ತಿಕ ಅಂತ ಎಲ್ಲೂ ಹೇಳಿಲ್ಲ. ಆದರೆ ಈ ಮೊದಲು ನಾನು ದೇವಸ್ಥಾನಕ್ಕೆ ಹೋಗ್ತಾ ಇರಲಿಲ್ಲ. ಆದರೆ, ಎಂ.ಎಲ್.ಎ ಆದ ಮೇಲೆ ಹೋಗ್ತಾ ಇದೀನಿ. ಆದರೆ ಗುಡಿಯಲ್ಲೇ ದೇವರು ಇದ್ದಾನೆ ಅಂತ ನಾನು ನಂಬಿಲ್ಲ. ದೇವರು ಎಲ್ಲೆಲ್ಲೂ ಇದ್ದಾನೆ. ಅವನು ಈಶ್ವರಪ್ಪ ನವರಲ್ಲೂ ಇದ್ದಾನೆ' ಎಂದಾಗ ಕಲಾಪವೆಲ್ಲಾ ನಗೆ ನಗಡಲಲ್ಲಿ ತೇಲಿತು.
ಸಿದ್ದರಾಮಯ್ಯ ಗಂಡೋ, ಹೆಣ್ಣೋ ಎಂಬ ಸಂಶಯ: ಈಶ್ವರಪ್ಪ ವ್ಯಂಗ್ಯ
ಮಾತು ಮುಂದುವರೆಸಿದ ಮುಖ್ಯಮಂತ್ರಿಗಳು 'ಕಾಲೇ ಕಂಬ, ದೇಹವೇ ದೇಗುಲ, ಆಚಾರವೇ ಸ್ವರ್ಗ ಅನಾಚಾರವೇ ನರಕ' ಎಂದು ವಚನ ಹೇಳಿ, 'ನಿಮ್ಮ ನಂಬಿಕೆಗೆ ನಾನು ಅಡ್ಡ ಬರಲ್ಲ, ನಂಬಿಕೆ ಮನುಕುಲದ ಉದ್ಧಾರಕ್ಕೆ, ವಿಕಾಸಕ್ಕೆ ಅನುಕೂಲವಾಗಿರಬೇಕು ನಂಬಿಕೆ ವೈಚಾರಿಕತೆಯಿಂದ ಕೂಡಿರಬೇಕು' ಎಂದು ಪಕ್ಕಾ ವೇದಾಂತಿಯಂತೆ ಮಾತನಾಡಿ ಸದನದ ಚಪ್ಪಾಳೆ ಗಿಟ್ಟಿಸಿಕೊಂಡರು.
ಉಡುಪಿ ಮಠಕ್ಕೆ ಹೋಗಲಿಲ್ವಾ ಅಂತ ಮಾಧ್ಯಮದವರು ನನ್ನನ್ನು ಕೇಳಿದ್ರು, ಕರೆದಿರಲಿಲ್ಲ ಅದಕ್ಕೆ ಹೋಗಲಿಲ್ಲ ಅಂದೆ, ಇತ್ತೀಚೆಗೆ ಹಂಪಿಗೆ ಹೋದಾಗ ವಿರೂಪಾಕ್ಷ ದೇವಸ್ಥಾನಕ್ಕೆ ಹೋಗಿಲ್ಲ, ಆದರೆ ಈ ಹಿಂದೆ ಹೋಗಿದ್ದೆ, ಪ್ರತಿ ಸಲ ಹೋಗಬೇಕು ಎನ್ನುವ ನಿಯಮವಿಲ್ಲ, ನಂಬಿಕೆಗಳು ಮನುಷ್ಯರ ಒಳಿತಿಗೆ ಇರಬೇಕು, ಅಪನಂಬಿಕೆಗಳು ಬೇಡ' ಎನ್ನುವ ಮೂಲಕ ದೇವಸ್ಥಾನಕ್ಕೆ ಹೋಗದಿದ್ದಕ್ಕೆ ಎದ್ದಿದ್ದ ವಿವಾದಗಳಿಗೆ ತೆರೆ ಎಳೆದರು.
ಈ ನಡುವೆ ಮಾತನಾಡಿದ ಬಿ.ಜೆ.ಪಿ ಸದಸ್ಯ ಎಂ.ಕೆ.ಪ್ರಾಣೇಶ್ 'ರಾಜಕಾರಣಿಗಳೇ ರಾಹುಕಾಲ ಗುಳಿಕಾಲ ನೋಡಿ ನಾಮಪತ್ರ ಸಲ್ಲಿಸುತ್ತಾರೆ ಹೀಗಾದರೆ ನಾವು ಜನಗಳಿಗೆ ಮೌಢ್ಯ ಬಿಡುವಂತೆ ಹೇಗೆ ಹೇಳುವುದು ಮೊದಲು ನಾವು ಸರಿಹೋಗಬೇಕು' ಎಂದು ಸ್ವಯಂವಿಮರ್ಶೆಯ ಮಾತನಾಡಿದರು.
ಪ್ರಾಣೇಶ್ ಅವರ ಮಾತಿಗೆ ಧನಿ ಗೂಡಿಸಿದ ಕೆ.ಎಸ್.ಈಶ್ವರಪ್ಪ ಅವರು ಮೌಢ್ಯ ನಿಷೇಧ ಪರವಾಗಿರುವುದಾಗಿ ಹೇಳಿದರೂ ಕಾಯ್ದೆ ರೂಪಿಸುವಲ್ಲಿ ಸರ್ಕಾರ ಎಡವಿದೆ ಎಂದು ತಗಾದೆ ತೆಗೆದರು.
ಮೂಡನಂಬಿಕೆ ಹೋಗಲಾಡಿಸಬೇಕು ಎಂಬುದರ ಬಗ್ಗೆ ನನಗೆ ಅಭ್ಯಂತರ ಇಲ್ಲ. ಆದರೆ ಎಲ್ಲರನ್ನೂ ಕರೆದು ಚರ್ಚೆ ಮಾಡಬೇಕಿತ್ತು. ಕಾನೂನು ಪರಿಣಿತರು, ಸಾಮಾಜಿಕ ಬುದ್ದಿ ಜೀವಿಗಳನ್ನು ಕರೆದು ಚರ್ಚೆ ಮಾಡಬೇಕಿತ್ತು, ಹಿಂದೂ ಸಮಾಜದ ಸ್ವಾಮಿಗಳು, ಮುಸ್ಲಿಂ ಸಮಾಜದ ಮುಲ್ಲಾಗಳನ್ನು ಕರೆದು ಮಾತಾಡಬೇಕಿತ್ತು ಈ ಮಸೂದೆ ಅಪ್ರಾಯೋಗಿಕ, ಜಾರಿಗೆ ಬರುವುದು ಕಷ್ಟ ಎಂದ ಈಶ್ವರಪ್ಪ. ಈ ವಿಧೇಯಕವನ್ನು ನಾನು ಖಂಡಿತ ಸ್ವಾಗತಿಸಲ್ಲ ಎಂದು ಕಂಡಾತುಂಡವಾಗಿ ಹೇಳಿದರು.