ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆ ಮೇಲೆ ಪ್ರಭಾಕರ್ ಕೋರೆ ಕಣ್ಣು
ಬೆಳಗಾವಿ, ಅಕ್ಟೋಬರ್ 11: ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆ ಬಿಜೆಪಿ ಟಿಕೆಟ್ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ರಾಜ್ಯಸಭಾ ಸದಸ್ಯ ಪ್ರಭಾಕರ್ ಕೋರೆ ಪರೋಕ್ಷವಾಗಿ ತಾವು ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ.
ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಕೊಟ್ಟರೆ ಸ್ಪರ್ಧಿಸುತ್ತೀರಾ? ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಪ್ರಭಾಕರ ಕೋರೆ, ನಾನು ರಾಜಕಾರಣದೊಳಗೆ ಇನ್ನೂ ನಿವೃತ್ತಿಯಾಗಿಲ್ಲ, ನಿವೃತ್ತಿಯಾದ ಮೇಲೆ ಅದನ್ನೆಲ್ಲಾ ವಿಚಾರ ಮಾಡೋಣ ಎಂದರು.
"ನೀವು ಬಂಡೆ.. ಎಲ್ಲವನ್ನೂ ಎದುರಿಸೋರು ಸಿಬಿಐ ಎದುರಿಸಕ್ಕಾಗಲ್ವಾ?"
ಬೆಳಗಾವಿ ಉಪ ಚುನಾವಣೆಯಲ್ಲಿ ಯಾರಾದರೂ ಯುವಕರಿಗೆ ಟಿಕೆಟ್ ಕೊಟ್ಟರೂ ತೊಂದರೆ ಇಲ್ಲ, ಪ್ರತಿಯೊಂದು ವಿಷಯ ಬಂದರೆ ಪ್ರಭಾಕರ ಕೋರೆ ಹೆಸರು ಬರುತ್ತದೆ. ಬೆಳಗಾವಿ ಲೋಕಸಭಾ ಉಪ ಚುನಾವಣೆ ಟಿಕೆಟ್ ನೀಡುವುದು ಬಿಜೆಪಿ ಹೈಕಮಾಂಡ್ ಗೆ ಬಿಟ್ಟ ವಿಚಾರ ಎಂದು ಬೆಳಗಾವಿಯಲ್ಲಿ ರಾಜ್ಯಸಭಾ ಮಾಜಿ ಸದಸ್ಯ ಪ್ರಭಾಕರ್ ಕೋರೆ ಹೇಳಿದರು.
ಇದೇ ವೇಳೆ ಬೆಳಗಾವಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮಾತನಾಡಿ, ರಾಜರಾಜೇಶ್ವರಿನಗರ ಹಾಗೂ ಶಿರಾ ಕ್ಷೇತ್ರಗಳ ಉಪ ಚುನಾವಣಾ ಬಿಜೆಪಿ ಅಭ್ಯರ್ಥಿಗಳ ಪಟ್ಟಿಯನ್ನು ಇನ್ನೆರಡು ದಿನಗಳಲ್ಲಿ ಘೋಷಣೆ ಮಾಡಲಾಗುವುದು ಎಂದು ತಿಳಿಸಿದರು.
ನಮ್ಮ ಹಿರಿಯ ನಾಯಕರು, ಹೈಕಮಾಂಡ್ ಚರ್ಚೆ ಮಾಡಿ ಅಭ್ಯರ್ಥಿ ಘೋಷಿಸುತ್ತಾರೆ ಎಂದ ಕಟೀಲ್, ಬೆಳಗಾವಿ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ವಿಚಾರವಾಗಿ ಪ್ರತಿಕ್ರಿಯಿಸಿ, ಚುನಾವಣೆ ಘೋಷಣೆ ಆದ ಮೇಲೆ ನಾವು ಅದಕ್ಕೆ ತಯಾರಿ ಮಾಡುತ್ತೇವೆ ಎಂದು ಹೇಳಿದರು.
ಬೆಳಗಾವಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಗಳ ಆಕಾಂಕ್ಷಿಗಳು ಹೆಚ್ಚಿರುವ ವಿಚಾರವಾಗಿ, ಆಕಾಂಕ್ಷಿಗಳು ಜಾಸ್ತಿ ಇದ್ದಾರೆ ಅಂದರೆ ಪಕ್ಷ ಬೆಳೆದಿದೆ ಎಂದು ಅರ್ಥ. ಆಕಾಂಕ್ಷಿಗಳನ್ನು ಸಮತೋಲನದಲ್ಲಿ ಇಟ್ಟುಕೊಂಡು ಅಭ್ಯರ್ಥಿ ಘೋಷಣೆ ಮಾಡಲಾಗುವುದು ಎಂದರು.
ಟಿಕೆಟ್ ಆಕಾಂಕ್ಷಿಗಳನ್ನೆಲ್ಲಾ ಸಮಾಧಾನ ಮಾಡುವ ಶಕ್ತಿ ಬಿಜೆಪಿ ಪಕ್ಷಕ್ಕಿದೆ, ಆಕಾಂಕ್ಷಿಗಳನ್ನೆಲ್ಲಾ ಸಮಾಧಾನ ಮಾಡಿ ಬೆಳಗಾವಿ ಲೋಕಸಭಾ ಉಪ ಚುನಾವಣೆ ಗೆಲ್ಲುತ್ತೇವೆ ಎಂದು ಬೆಳಗಾವಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಪ್ರತಿಕ್ರಿಯಿಸಿದರು.