ಕುಮಾರಸ್ವಾಮಿ ಸುಳ್ಳು ಹೇಳುವುದರಲ್ಲಿ ನಿಸ್ಸೀಮ: ಸಿದ್ದರಾಮಯ್ಯ ತಿರುಗೇಟು
ಬೆಳಗಾವಿ, ಡಿಸೆಂಬರ್ 5: ಕಾಂಗ್ರೆಸ್ ಪಕ್ಷದಿಂದ ಸರ್ವನಾಶ ಆದೆ ಎಂಬ ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಅವರು ಮೈಸೂರಿನಲ್ಲಿ ನೀಡಿದ ಹೇಳಿಕೆಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ತಿರುಗೇಟು ನೀಡಿದ್ದಾರೆ.
ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಾತಾಡಿದ ಮಾಜಿ ಸಿಎಂ ಸಿದ್ದರಾಮಯ್ಯ, ""ಕುಮಾರಸ್ವಾಮಿಗೆ ಗುಡ್ ವಿಲ್ ಇದ್ದರೆ ತಾನೇ ಹಾಳಾಗೋಕೆ ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.
"ಸಿಎಂ ಆಗಿದ್ದಾಗ ಒಳ್ಳೇ ಹೆಸರಿತ್ತು; ಸಿದ್ದರಾಮಯ್ಯ ಅಂಡ್ ಟೀಂ ಹಾಳು ಮಾಡಿತು''
ಕುಮಾರಸ್ವಾಮಿ ಸುಳ್ಳು ಹೇಳುವುದರಲ್ಲಿ ನಿಸ್ಸೀಮರು, ಅವರ ಮಾತಿನಲ್ಲಿ ಯಾವುದೇ ಸತ್ಯ ಇಲ್ಲ. ಇವರನ್ನು ಸಿಎಂ ಮಾಡಿದ್ದೇ ತಪ್ಪು ಆಯ್ತಾ? ಇವರಿಗೆ ಸೀಟು ಕಮ್ಮಿ ಇದ್ದರೂ ಇವರನ್ನೇ ಸಿಎಂ ಮಾಡಿದ್ದೇವೆ. ಕಾಂಗ್ರೆಸ್ ಸೀಟು ಹೆಚ್ಚಿಗೆ ಇದ್ದರೂ ಇವರನ್ನು ಮುಖ್ಯಮಂತ್ರಿ ಮಾಡಿದೆವು ಎಂದರು.
ನಮ್ಮ ನಿರ್ಧಾರದಿಂದ ಅವರಿಗೆ ಉಪಯೋಗ ಆಗಿತ್ತು. ಎಚ್.ಡಿ ಕುಮಾರಸ್ವಾಮಿ ಅವರನ್ನು ಸಿಎಂ ಮಾಡಿದ್ದೇ ತಪ್ಪಾಯ್ತಾ? ಎಂದು ಪ್ರಶ್ನಿಸಿದರು.
ಯಾವಾಗಲೂ ಕಣ್ಣೀರು ಹಾಕುವುದು ಕುಮಾರಸ್ವಾಮಿ ಅವರ ಸಂಸ್ಕೃತಿ. ಕಣ್ಣೀರು ಹಾಕುವುದು ದೇವೇಗೌಡರ ಸಂಸ್ಕೃತಿ. ಇವರು ಒಳ್ಳೆಯದಕ್ಕೂ ಹಾಕ್ತಾರೆ, ಕೆಟ್ಟದಕ್ಕೂ ಹಾಕ್ತಾರೆ. ಓಲೈಕೆಗೂ ಕಣ್ಣೀರು ಹಾಕ್ತಾರೆ. ಆ ಕಣ್ಣೀರಿಗೆ ಬೆಲೆ ಇಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಬೆಳಗಾವಿಯಲ್ಲಿ ತಿರಗೇಟು ನೀಡಿದರು.
ಎಚ್.ಡಿ ಕುಮಾರಸ್ವಾಮಿ ಸಿಎಂ ಆಗಿದ್ದಾಗ ಆಡಳಿತ ನಡೆಸಿದ್ದು ಎಲ್ಲಿಂದ ಗೊತ್ತಾ? ವೆಸ್ಟೆಂಡ್ ಹೋಟೆಲ್ ನಿಂದ ಆಡಳಿತ ನಡೆಸಿದ್ದಾರೆ. ಕಾಂಗ್ರೆಸ್ ಶಾಸಕರಿಗೆ ಅನುದಾನ ನೀಡಿದ್ದೇವೆ ಅಂತಾ ಹೇಳಿದ್ದಾರಲ್ಲ, ಅವರ ಮನೆಯಿಂದ ಕೊಟ್ಟಿದ್ದಾರಾ? ಎಂದು ಪ್ರಶ್ನಿಸಿದರು.
ನಾವು ಅವರನ್ನು ಸಿಎಂ ಮಾಡಿದ್ದರಿಂದ ಅನುದಾನ ಕೊಟ್ಟಿದ್ದಾರೆ ಅಷ್ಟೇ. ಅದೇನು ದೊಡ್ಡಸ್ತಿಕೆಗೆ ಹೇಳ್ತಾರೆ, ನಮ್ಮ ಶಾಸಕರು ಸಪೋರ್ಟ್ ಮಾಡಿದ್ದರಿಂದ ಸಿಎಂ ಆಗಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರು ಎಚ್.ಡಿ ಕುಮಾರಸ್ವಾಮಿ ವಿರುದ್ಧ ಕಿಡಿಕಾರಿದ್ದಾರೆ.