ನೇಣಿಗೆ ಕೊರಳು ಒಡ್ಡಿದ ಬೆಳಗಾವಿ ಜಿಲ್ಲೆ ಹಲಗತ್ತಿಯ ಪ್ರವಾಹ ಸಂತ್ರಸ್ತ
ಬೆಳಗಾವಿ, ಸೆಪ್ಟೆಂಬರ್ 15: ಬೆಳಗಾವಿಯಲ್ಲಿ ನೆರೆ ನಷ್ಟಕ್ಕೆ ಮತ್ತೊಂದು ಬಲಿಯಾಗಿದೆ. ಕುಸಿದು ಬಿದ್ದ ಮನೆಯಲ್ಲೇ ನೇಣು ಬಿಗಿದುಕೊಂಡು ನೇಕಾರರೊಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಕಳೆದ ತಿಂಗಳು ಮಲಪ್ರಭೆಯ ರುದ್ರನರ್ತನಕ್ಕೆ ಸಂತ್ರಸ್ತರಾದ ರಮೇಶ ನೀಲಕಂಠಪ್ಪ ಹವಳಕೋಡ (47) ಮೃತರು. ಅವರು ಮನೆ ಹಾಗೂ ಮಗ್ಗಗಳನ್ನು ಕಳೆದುಕೊಂಡಿದ್ದರು. ಇದೀಗ ಕುಟುಂಬಕ್ಕೆ ಆಸರೆಯಾಗಿದ್ದ ಯಜಮಾನನನ್ನೇ ಕಳೆದುಕೊಂಡು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಪ್ರವಾಹ, ಭೂ ಕುಸಿತದಿಂದ ಸಂಕಷ್ಟಕ್ಕೆ ಸಿಲುಕಿ, ಪರಿಹಾರವೂ ಸಿಗದೆ ಕಂಗಾಲಾಗಿರುವ ಜನರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಸುದ್ದಿ ಪದೇಪದೇ ವರದಿಯಾಗುತ್ತಿದೆ. ಈ ಸಾಲಿಗೆ ಇದೀಗ ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಹಲಗತ್ತಿ ಗ್ರಾಮದ ರಮೇಶ ನೀಲಕಂಠಪ್ಪ ಹವಳಕೋಡ ಸೇರ್ಪಡೆಯಾಗಿದ್ದಾರೆ.
ಪ್ರವಾಹದಲ್ಲಿ ಜಮೀನು ಕಳೆದುಕೊಂಡ ರೈತನಿಗೆ ಅರೆಸ್ಟ್ ವಾರೆಂಟ್ ಜಾರಿ
ಮಲಪ್ರಭಾ ನದಿ ಪ್ರವಾಹದ ನೀರು ರಮೇಶ್ ಮನೆಗೆ ನುಗ್ಗಿ, ಅಪಾರ ಪ್ರಮಾಣದಲ್ಲಿ ನಷ್ಟವಾಗಿತ್ತು. ಇದ್ದ ಒಂದು ಮನೆಯೂ ಕುಸಿದು ಬಿದ್ದಿತ್ತು. ಇದರಿಂದ ಮನನೊಂದು, ನೆರೆಗೆ ಕುಸಿದು ಬಿದ್ದಿರುವ ಮನೆಯಲ್ಲೇ ನೇಣು ಬಿಗಿದುಕೊಂಡು ರಮೇಶ್ ಶನಿವಾರ ತಡರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ನೇಕಾರರಾಗಿದ್ದ ರಮೇಶ್ ಅವರ ಮೂರು ಮಗ್ಗಗಳು ಕಳೆದ ತಿಂಗಳು ಬಂದ ಮಲಪ್ರಭಾ ನದಿ ಪ್ರವಾಹಕ್ಕೆ ಹಾಳಾಗಿದ್ದವು. ಜತೆಗೆ ಮನೆ ಕೂಡ ಕುಸಿದಿತ್ತು. ಇರಲು ಮನೆ ಇಲ್ಲದೆ ಪಕ್ಕದ ಇದ್ದೂರಿನಲ್ಲಿರುವ ಹೆಣ್ಣು ಕೊಟ್ಟ ಮಾವನ ಮನೆಯಲ್ಲಿ ವಾಸವಾಗಿದ್ದರು. ಮಗ್ಗಗಳು ನೀರಿಗೆ ಹಾಳಾಗಿದ್ದರಿಂದ ರಮೇಶ್ ಮಾನಸಿಕವಾಗಿ ಸಾಕಷ್ಟು ನೊಂದಿದ್ದರು.
ಅಂದಹಾಗೆ ಈಚೆಗಷ್ಟೇ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರು ರಾಮದುರ್ಗಕ್ಕೆ ಬಂದಾಗ ಕೂಡಲೇ ಸಂತ್ರಸ್ತರಿಗೆ ನೆರವು ನೀಡುವಂತೆ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದ್ದಾರೆ. ಮಗನ ಸಾವಿನಿಂದ ರಮೇಶ್ ಕುಟುಂಬದ ಸದಸ್ಯರು ಕಂಗಾಲಾಗಿದ್ದಾರೆ. ಮೃತರಿಗೆ ತಂದೆ, ಹೆಂಡತಿ ಹಾಗೂ ಮಗಳು ಇದ್ದು, ರಾಮದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.