ಬಿಜೆಪಿಯಿಂದ ಯಾರೇ ಕಣಕ್ಕಿಳಿದರೂ ಗೋಕಾಕ್ ನಲ್ಲಿ ಲಖನ್ v/s ಅಂಬಿರಾವ್
ಬೆಳಗಾವಿ, ಸೆಪ್ಟೆಂಬರ್ 26: ಈಗಾಗಲೇ ಉಪಚುನಾವಣೆಯ ಹುಮ್ಮಸ್ಸಿನಲ್ಲಿರುವ ಕಾಂಗ್ರೆಸ್ ಪಕ್ಷ 10 ಕ್ಷೇತ್ರದ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ಸಿದ್ಧಪಡಿಸಿದೆ. ಈಗಾಗಲೇ ಬೆಳಗಾವಿ ಜಿಲ್ಲೆಯ ಗೋಕಾಕ್ ಕ್ಷೇತ್ರಕ್ಕೆ ಲಖನ್ ಜಾರಕಿಹೊಳಿ ಹೆಸರು ಅಂತಿಮಗೊಳ್ಳುವ ಸಾಧ್ಯತೆಯೇ ಹೆಚ್ಚು.
ದೆಹಲಿಗೆ ಹೊರಡುವ ಮುನ್ನ ಸೋದರ ಲಖನ್ ಬಗ್ಗೆ ರಮೇಶ್ ಪ್ರೀತಿಯ ಮಾತು
ರಮೇಶ್ ಜಾರಕಿಹೊಳಿ ಅವರ ಅನರ್ಹತೆಯಿಂದ ನಡೆದಿರುವ ಉಪಚುನಾವಣೆಗೆ ಕಾಂಗ್ರೆಸ್ ಪಕ್ಷ ಶತಾಯಗತಾಯ ರಮೇಶ್ ಅವರನ್ನು ಸೋಲಿಸುವ ತಂತ್ರಗಾರಿಕೆ ನಡೆಸಿದೆ. ಮೈತ್ರಿ ಪಕ್ಷ ಬೀಳಲು ಪ್ರಮುಖ ಕಾರಣ ರಮೇಶ್ ಅವರೇ ಎನ್ನುವ ಅಸಮಾಧಾನ ಕಾಂಗ್ರೆಸ್ ಮುಖಂಡರಿಗಿದೆ. ಆದರೆ ಕ್ಷೇತ್ರದಲ್ಲಿ ಬಿಜೆಪಿಯಿಂದ ಯಾರೇ ಸ್ಪರ್ಧಿಸಿದರೂ ಮೇಲ್ನೋಟಕ್ಕೆ ಕಾಂಗ್ರೆಸ್ ಹಾಗೂ ರಮೇಶ್ ವಿರುದ್ಧದ ಸಮರ ಕಣವಾಗುವಂತೆ ಕಾಣುತ್ತಿದೆ. ಆದರೆ ಆಂತರಿಕವಾಗಿ ಈ ಕ್ಷೇತ್ರ ರಮೇಶ್ ಗಿಂತ ಅವರ ಅಳಿಯ ಅಂಬಿರಾವ್ V/S ಲಖನ್ ಎನ್ನುವ ವಾತಾವರಣ ನಿರ್ಮಾಣವಾಗುತ್ತಿದೆ.
ಗೋಕಾಕ್ ಕ್ಷೇತ್ರದ ಉಪಚುನಾವಣೆ: ಕಣದಲ್ಲಿ ಅಚ್ಚರಿಯ ಹೆಸರು
ಬಹುತೇಕ ಕಾಂಗ್ರೆಸ್ ಟಿಕೆಟ್ ಅಂತಿಮವಾಗುವ ಉತ್ಸಾಹದಲ್ಲಿರುವ ಲಖನ್ ಕ್ಷೇತ್ರದ ಸ್ವಾತಂತ್ರ್ಯಕ್ಕಾಗಿ ನನಗೆ ಮತ ನೀಡಿ ಎಂದು ಮನವಿ ಮಾಡಿದ್ದಾರೆ. "ರಮೇಶ ಜಾರಕಿಹೊಳಿ ಅಳಿಯಂದಿರ ಭ್ರಷ್ಟಾಚಾರಕ್ಕೆ ಕೊನೆ ಹಾಡಲು ನಾನು ಸ್ಪರ್ಧಿಸಿದ್ದೇನೆ. ಗೋಕಾಕ್ ನಗರ ಸೇರಿ 71 ಗ್ರಾಮಗಳನ್ನು ಭ್ರಷ್ಟಾಚಾರ ಮುಕ್ತ ಮಾಡಬೇಕಿದೆ. ನನ್ನ ವಿರುದ್ಧ ರಮೇಶ ಅಥವಾ ಯಾರೇ ನಿಲ್ಲಲಿ ಚಿಂತಿಸಲ್ಲ. ರಮೇಶ ಜಾರಕಿಹೊಳಿ ಬಗ್ಗೆ ನನಗೆ ಇನ್ನೂ ಪ್ರೀತಿ ಇದೆ. ಆದರೆ ಅವರ ಅಳಿಯಂದಿರ ವಿರುದ್ಧ ನಮ್ಮ ಹೋರಾಟವಿದೆ" ಎನ್ನುವ ಮೂಲಕ ಸಹೋದರನ ಬಗ್ಗೆ ಅನುಕಂಪ ತೋರಿದ್ದಾರೆ.
"ನಾನು, ರಮೇಶ ಜಾರಕಿಹೊಳಿ ರೈಟ್, ಲೆಫ್ಟ್ ಹ್ಯಾಂಡ್ ರೀತಿ ಇದ್ದೆವು. ನಮ್ಮನ್ನು ಅವರೇ ಬೇರ್ಪಡಿಸಿದರು. ಆದರೆ ಭ್ರಷ್ಟಾಚಾರ ಮಿತಿ ಮೀರಿದ ಕಾರಣ ಚುನಾವಣೆಗೆ ಸ್ಪರ್ಧಿಸಬೇಕಾದ ಅನಿವಾರ್ಯತೆ ಇದೆ. ರಮೇಶ ಜಾರಕಿಹೊಳಿ ವಿರುದ್ಧ ನಾನು ಯಾವುದೇ ಆರೋಪ ಮಾಡಿಲ್ಲ. ನನಗೆ ಚುನಾವಣೆಯಲ್ಲಿ ಎದುರಾಳಿಯೇ ಅಂಬಿರಾವ್" ಎಂದು ರಮೇಶ್ ಅಳಿಯ ಅಂಬಿರಾವ್ ವಿರುದ್ಧ ಹರಿಹಾಯ್ದರು. ಈ ಕಾರಣದಿಂದ ಕ್ಷೇತ್ರದಲ್ಲಿ ಬಿಜೆಪಿಯಿಂದ ಯಾರೇ ಅಭ್ಯರ್ಥಿಯಾದರೂ ಕಾಂಗ್ರೆಸ್ ಪಾಲಿಗೆ ರಮೇಶ್ ಜಾರಕಿಹೊಳಿ ಗುರಿಯಾದರೆ, ಅಭ್ಯರ್ಥಿ ಲಖನ್ ಪಾಲಿಗೆ ಮಾತ್ರ ಅಂಬಿರಾಯ್ ಟಾರ್ಗೆಟ್ ಎನ್ನುವುದು ಸದ್ಯದ ಗೋಕಾಕ್ ಕ್ಷೇತ್ರದಲ್ಲಿ ಚಾಲ್ತಿಯಲ್ಲಿರುವ ಮಾತು.