ಕೊಯ್ನಾ ಜಲಾಶಯದಿಂದ ನೀರು; ಕರ್ನಾಟಕಕ್ಕೆ ತಪ್ಪಿಲ್ಲ ಪ್ರವಾಹದ ಆತಂಕ
ಬೆಳಗಾವಿ, ಆಗಸ್ಟ್ 14: ಮಹಾರಾಷ್ಟ್ರದಲ್ಲಿ ಭಾರೀ ಮಳೆಯಾಗುತ್ತಿದ್ದು, ಕೊಯ್ನಾ ಜಲಾಶಯಕ್ಕೆ ಗುರುವಾರ ರಾತ್ರಿ 8 ಗಂಟೆಗೆ 80 ಟಿಎಂಸಿ ನೀರು ಸಂಗ್ರಹ ಆಗಿದೆ. ಇಂದು ಬೆಳಗಿನ ವರದಿಯ ಪ್ರಕಾರ ನೀರಿನ ಸಂಗ್ರಹ 82.39 ಟಿಎಂಸಿ, ಅಂದರೆ ಕೇವಲ 10 ತಾಸಿನಲ್ಲಿ 2.39 ಏರಿಕೆ ಆಗಿದೆ.
ಇಂದು ಮುಂಜಾನೆ 11 ಗಂಟೆಯಿಂದ 2100 ಕ್ಯೂಸೆಕ್ ನೀರನ್ನು ಜಲಾಶಯದಿಂದ ಬಿಡುಗಡೆ ಮಾಡಲಾಗಿದೆ. ಹಿಡ್ಕಲ್ ಜಲಾಶಯ ಮುಕ್ಕಾಲು ಪಾಲು ಭರ್ತಿ ಆಗಿದೆ. ಇಂದಿನಿಂದ ಐದು ಸಾವಿರದಿಂದ ಹತ್ತು ಸಾವಿರಕ್ಕೆ ಹೊರಹರಿವು ಏರಿಕೆಯಾಗಿದೆ. ಇದು ಇಪ್ಪತ್ತು ಅಥವಾ ಮೂವತ್ತು ಸಾವಿರಕ್ಕೂ ಹೆಚ್ಚಾಗುವ ಸಾಧ್ಯತೆ ಇದೆ. ಇದು ಆತಂಕಕ್ಕೆ ಎಡೆಮಾಡಿಕೊಟ್ಟಿದೆ.
ಕೊಯ್ನಾ ಜಲಾನಯನ ಪ್ರದೇಶದಲ್ಲಿ ಮಳೆ
ಎರಡು ದಿನಕ್ಕೆ ಒಂದು ಟಿಎಂಸಿಯಷ್ಟು ನೀರು ಹೆಚ್ಚಳ ಕಂಡಿದ್ದ ಮಹಾರಾಷ್ಟ್ರದ ಸಾತಾರ ಜಿಲ್ಲೆಯ ಕೊಯ್ನಾ ಡ್ಯಾಂ ಪ್ರದೇಶದಲ್ಲಿ ಭಾರೀ ಮಳೆ ಸುರಿಯುತ್ತಿದ್ದು ಗುರುವಾರ ರಾತ್ರಿ 8 ಗಂಟೆಯ ಹೊತ್ತಿಗೆ 2141 ಅಡಿ 8 ಅಂಗುಲ ನೀರಿನ ಸಂಗ್ರಹವಾಗಿದೆ. ಮಳೆಯ ಪ್ರಮಾಣ ಹೆಚ್ಚಾದಂತೆ ನೀರಿನ ಒಳಹರಿವು ಏರಿಕೆಯಾಗಿದೆ. ಹೀಗಾಗಿ ನೀರು ಬಿಡದ ಹೊರತು ಕೊಯ್ನಾ ಜಲಾಶಯಕ್ಕೆ ಪರ್ಯಾಯ ಮಾರ್ಗ ಇಲ್ಲದಂತಾಗಿದೆ.
ಕರ್ನಾಟಕದಲ್ಲಿ ದಿಢೀರ್ ಪ್ರವಾಹಕ್ಕೆ ಮಹಾರಾಷ್ಟ್ರ ಕಾರಣ!
ಕರ್ನಾಟಕಕ್ಕೆ ತಪ್ಪಿಲ್ಲ ಪ್ರವಾಹದ ಆತಂಕ
ಕೊಯ್ನಾ ಜಲಾಶಯದಿಂದ ಹೊರ ಹರಿವು ಹೆಚ್ಚಾದಂತೆ ಕರ್ನಾಟಕಕ್ಕೆ ಪ್ರವಾಹದ ಆತಂಕ ತಪ್ಪಿದ್ದಲ್ಲ. ಜಲಾಶಯದ ಒಟ್ಟು ಸಾಮರ್ಥ್ಯ 105 ಟಿಎಂಸಿ ಇದೆ. ಈ ಹಿನ್ನೆಲೆಯಲ್ಲಿ ಶುಕ್ರವಾರ ಮುಂಜಾನೆ 11 ಗಂಟೆಗೆ ಡ್ಯಾಮಿನಿಂದ 2100 ಕ್ಯೂಸೆಕ್ ನೀರನ್ನು ಬಿಡುಗಡೆ ಮಾಡಲಾಗುವುದೆಂದು ಅಧಿಕೃತ ಪ್ರಕಟಣೆಯಲ್ಲಿ ಮುನ್ಸೂಚನೆ ನೀಡಲಾಗಿದೆ.
ಜಲಾಶಯ ತುಂಬಲು 23 ಟಿಎಂಸಿ ನೀರು ಬಾಕಿ
ಆದರೆ ಇದೀಗ ಆ ಪ್ರಮಾಣವೂ ಹೆಚ್ಚಾಗುವ ಸಾಧ್ಯತೆ ಇದೆ. ಕೊಯ್ನಾ ಜಲಾಶಯ ಪೂರ್ತಿ ತುಂಬಲು ಇನ್ನು ಕೇವಲ 23 ಟಿಎಂಸಿ ನೀರು ಸಾಕು. ಸದ್ಯದ ಪ್ರಮಾಣದಲ್ಲಿ ಮಳೆಯು ಮುಂದುವರೆದಲ್ಲಿ ಒಂದೇ ವಾರದಲ್ಲಿ ಪೂರ್ಣ ತುಂಬುವ ಸಾಧ್ಯತೆ ಇದ್ದು, ಮುನ್ನೆಚ್ಚರಿಕೆಯ ಕ್ರಮವಾಗಿ ನಾಳೆಯಿಂದ ನೀರು ಬಿಡುಗಡೆ ಮಾಡಲಾಗುತ್ತಿದೆ.
ಬೆಳಗಾವಿಯಲ್ಲಿ ಬಿರುಸು ಪಡೆದ ಮಳೆ; ಜಲಾಶಯಗಳ ನೀರಿನ ಮಟ್ಟ ಏರಿಕೆ
ಮುಂದಿನ ದಿನಗಳಲ್ಲಿ ನೀರು ಹೆಚ್ಚಾಗುವ ಸಾಧ್ಯತೆ
ಇತ್ತ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಹಿಡ್ಕಲ್ ಜಲಾಶಯ 95 ಪ್ರತಿಶತ ಭರ್ತಿಯಾಗಿದೆ. ಸದ್ಯ ಒಳಹರಿವು 15122 ಕ್ಯೂಸೆಕ್ ಇದ್ದು, ಹೊರಹರಿವು ಐದು ಸಾವಿರ ಕ್ಯೂಸೆಕ್ ಇದೆ. ಇಂದಿನಿಂದ ಅದನ್ನು ಹತ್ತು ಸಾವಿರದಿಂದ ಇಪ್ಪತ್ತು ಸಾವಿರಕ್ಕೆ ಹೆಚ್ಚಿಸುವ ಸಾಧ್ಯತೆಯಿದೆ. ಮಳೆಯ ಪ್ರಮಾಣದಲ್ಲಿ ಏರಿಳಿತ ಕಂಡು ಬರುತ್ತಿದ್ದು ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಳ ಕಾಣುವ ಸಾದ್ಯತೆ ಇದೆ.