ಕೊಯ್ನಾದಿಂದ ಲಕ್ಷ ಕ್ಯೂಸೆಕ್ ನೀರು ಬಿಡುಗಡೆ; ಬೆಳಗಾವಿಯಲ್ಲಿ ಮತ್ತೆ ತಲ್ಲಣ
ಬೆಳಗಾವಿ, ಸೆಪ್ಟೆಂಬರ್ 5: ಮಹಾರಾಷ್ಟ್ರದಲ್ಲಿ ಮತ್ತೆ ಮಳೆ ಅಬ್ಬರಿಸುತ್ತಿದೆ. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಕೊಯ್ನಾ ಜಲಾಶಯದಿಂದ 1 ಲಕ್ಷ ಕ್ಯೂಸೆಕ್ ನೀರನ್ನು ಹೊರಬಿಡಲಾಗಿದೆ.
ಮಹಾ ಮಳೆಗೆ ಉತ್ತರ ಕರ್ನಾಟಕದಲ್ಲಿ ಮತ್ತೆ ಶುರುವಾಗಿದೆ ಪ್ರವಾಹದ ಆತಂಕ
ನೀರು ಹರಿಬಿಟ್ಟಿರುವುದರಿಂದ ಕೃಷ್ಣಾ ನದಿ ಪಾತ್ರದ ಜನರಲ್ಲಿ ಆತಂಕ ಉಂಟಾಗಿದೆ. ಕಳೆದ ತಿಂಗಳು ಸುರಿದ ಭಾರಿ ಮಳೆಗೆ ಭೀಕರ ಪ್ರವಾಹ ಉಂಟಾಗಿ ಉತ್ತರ ಕರ್ನಾಟಕ ತತ್ತರಿಸಿತ್ತು. ಬೆಳಗಾವಿಯಲ್ಲಿ ಜನರ ಬದುಕೇ ಬೀದಿಗೆ ಬಂದು ನಿಂತಿತ್ತು. ಪ್ರವಾಹ ಇಳಿದು, ತಮ್ಮ ಬದುಕು ಕಟ್ಟಿಕೊಳ್ಳಲು ಜನ ಅಣಿಯಾಗುತ್ತಿರುವ ಈ ಹೊತ್ತಿನಲ್ಲಿ ಮಹಾರಾಷ್ಟ್ರದಲ್ಲಿ ಮತ್ತೆ ಮಳೆಯಾಗಿದೆ. ಕೊಯ್ನಾ ಜಲಾಶಯದಿಂದ ನೀರು ಬಿಟ್ಟಿರುವುದು ಮುಂದಿನ ಪರಿಸ್ಥಿತಿ ಬಗ್ಗೆ ತಲ್ಲಣ ಉಂಟಾಗುವಂತೆ ಮಾಡಿದೆ.
ಜಲಾಶಯದಿಂದ ನೀರು ಬಿಟ್ಟಿರುವ ಹಿನ್ನೆಲೆಯಲ್ಲಿ ಕೃಷ್ಣಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಕಲ್ಲೋಳ-ಯಡೂರು ಸೇತುವೆ ಜಲಾವೃತಗೊಂಡಿದೆ. ಸಂಪರ್ಕ ಕಡಿತಗೊಂಡಿದೆ. ಸೇತುವೆ ಮೇಲೆ ನದಿ ನೀರು ಹರಿಯುತ್ತಿದೆ. ಪ್ರಸ್ತುತ ಪ್ರವಾಹ ಭೀತಿ ಇಲ್ಲವಾದರೂ ಮಳೆ ಹೀಗೇ ಮುಂದುವರೆದರೆ ನೆರೆ ಸಂಭವಿಸುವ ಎಲ್ಲಾ ಲಕ್ಷಣಗಳೂ ಗೋಚರಿಸುತ್ತಿವೆ. ಹೀಗಾಗಿ ಬೆಳಗಾವಿ ಜನರು ಜೀವವನ್ನು ಕೈಯಲ್ಲಿ ಹಿಡಿದುಕೊಂಡಂತೆ ಬದುಕುತ್ತಿದ್ದಾರೆ.