ರಜೆಯ ಮಜಾ: ಬೆಳಗಾವಿಯಲ್ಲಿ ತಂದೆ ಮಗನ ಸಾವು
ಬೆಳಗಾವಿ, ಎಪ್ರಿಲ್ 01: ಲಾಕ್ ಡೌನ್ ಹಿನ್ನೆಲೆಯಲ್ಲಿ ರಜೆ ಇತ್ತು ಎಂದು ಈಜಲು ಹೋಗಿದ್ದ ತಂದೆ-ಮಗ ಇಬ್ಬರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಬೆಳಗಾವಿ ಜಿಲ್ಲೆ ಮೂಡಲಗಿ ತಾಲೂಕು ರಾಜಾಪೂರ ಗ್ರಾಮದಲ್ಲಿ ನಡೆದಿದೆ. ಲಾಕ್ ಡೌನ್ ನಿಯಮ ಪಾಲಿಸಿ ಮನೆಯಲ್ಲಿ ಇದ್ದಿದ್ದರೆ ಜೀವ ಉಳಿಯುತ್ತಿತ್ತು.
ಮಗ ಪರುಶರಾಮ ಸತ್ತೇಪ್ಪ ಕಮತಿ (15) ಗೆ ಈಜು ಕಲಿಸಲು ತಂದೆ ಸತ್ತೇಪ್ಪ ರಾಮಪ್ಪ ಕಮತಿ (75) ಎಂಬುವವರು ಕಮತಿ ತೋಟದ ಬಾವಿಗೆ ಹೋಗಿದ್ದರು. ತಂದೆಯು ಮಗ ನೀರಿನಲ್ಲಿ ಮುಳುಗಬಾರದೆಂದು ದಿಂಡಿ ಕಟ್ಟಿ ಬಾವಿಗೆ ಇಳಿಸಿದ್ದನು.
ಒಮ್ಮೆಲೆ ದಿಂಡಿ ಹರಿದು ನೀರಿನಲ್ಲಿ ಮುಳುಗುತಿದ್ದ ಮಗ ಪರುಶುರಾಮನನ್ನು ರಕ್ಷಿಸಲು ತಂದೆ ಸತ್ತೇಪ್ಪ ಬಾವಿಗೆ ಜಿಗಿದಿದ್ದಾನೆ. ಈಜಲು ಬಾರದಂತೆ ತಂದೆಯನ್ನು ಬಿಗಿಯಾಗಿ ಹಿಡಿದಿದ್ದರಿಂದ, ತಂದೆ-ಮಗ ಇಬ್ಬರೂ ನೀರುಪಾಲಾಗಿದ್ದಾರೆ.
ಬಾವಿ ತೀರದಲ್ಲಿ ಮತ್ತೊಬ್ಬ ಕಿರಿಯ ಮಗ ಕುಳಿತಿದ್ದನು. ಜನರನ್ನು ಕೂಗಿ ಕರೆಯುವಷ್ಟರಲ್ಲಿ ಇಬ್ಬರು ಜೀವ ಕಳೆದುಕೊಂಡಿದ್ದರು. ಮೊದಲ ಹೆಂಡತಿಗೆ ಐದು ಹೆಣ್ಣು ಮಕ್ಕಳು ಹುಟ್ಟಿದ ಕಾರಣಕ್ಕೆ 55 ವರ್ಷದ ಸಮಯದಲ್ಲಿ ಮತ್ತೊಂದು ಮದುವೆಯಾಗಿ ಎರಡು ಗಂಡು ಮಕ್ಕಳಿಗೆ ತಂದೆ ಸತ್ತೇಪ್ಪ ಜನುಮ ನೀಡಿದ್ದನು.