ವಾಹನದಿಂದ ಇಳಿಯದ ಸಂಸದ, ಪಟ್ಟು ಬಿಡದ ರೈತರು; ಮುಂದೇನಾಯ್ತು?
ಬೆಳಗಾವಿ, ಆಗಸ್ಟ್ 18: ಸಂಸದ ಅನಂತಕುಮಾರ್ ಹೆಗಡೆ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿದ ಘಟನೆ ಇಂದು ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ಎಂಕೆ ಹುಬ್ಬಳ್ಳಿಯಲ್ಲಿ ನಡೆದಿದೆ.
ಕಿತ್ತೂರು ಬೈಲಹೊಂಗಲ ವಿಧಾನಸಭಾ ಕ್ಷೇತ್ರದಲ್ಲಿ ಪ್ರಧಾನ ಮಂತ್ರಿ ಗ್ರಾಮ ಸಡಕ ಯೋಜನೆ ಹಂತ -3ರ ಅಡಿಯಲ್ಲಿ ಬರುವ ವಿವಿಧ ಗ್ರಾಮೀಣ ರಸ್ತೆ ಅಭಿವೃದ್ಧಿ ಕಾಮಗಾರಿಗಳ ಶಂಕು ಸ್ಥಾಪನೆ ಸಮಾರಂಭಕ್ಕೆ ಸಂಸದ ಅನಂತಕುಮಾರ ಹೆಗಡೆ ಆಗಮಿಸಿದ್ದರು. ಕಾರ್ಯಕ್ರಮವು ಅಂತಿಮ ಹಂತ ತಲುಪುತ್ತಿದ್ದಂತೆ ಸಂಸದರು ಹಾಗೂ ಶಾಸಕ ಮಹಾಂತೇಶ ದೊಡಗೌಡರ ವೇದಿಕೆಯಿಂದ ಕೆಳಗೆ ಬರುತ್ತಿದ್ದರು. ಆಗ ರೈತ ಸಂಘಟನೆಯ ಗೌರವ ಅಧ್ಯಕ್ಷ ಶಶಿಕಾಂತ ಪಡಸಲಗಿ ಹಾಗೂ ಕಾರ್ಯಕರ್ತರು ತಮ್ಮ ಮನವಿ ನೀಡಲು ಸಂಸದರ ಬಳಿ ದೌಡಾಯಿಸಿದರು.
ಬಿಎಸ್ಎನ್ಎಲ್ನಲ್ಲಿ ದೇಶದ್ರೋಹಿಗಳೇ ತುಂಬಿದ್ದಾರೆ: ಅನಂತ್ ಕುಮಾರ್ ಹೆಗಡೆ ವಿವಾದಾತ್ಮಕ ಹೇಳಿಕೆ
ಸಂಸದ ಅನಂತಕುಮಾರ ಹೆಗಡೆ ಹಾಗೂ ಶಾಸಕರು ಇವರತ್ತ ಗಮನ ಹರಿಸದೆ ವಾಹನವನ್ನೇರಿ ಕುಳಿತ ಪರಿಣಾಮ ರೈತ ಸಂಘಟನೆಯವರು ಸಂಸದ ಹೆಗಡೆ ಇರುವ ವಾಹನವನ್ನು ಅಡ್ಡಗಟ್ಟಿ ಪ್ರತಿಭಟನೆ ಆರಂಭಿಸಿದರು. ಕೂಡಲೇ ಪೊಲೀಸರು ಆಗಮಿಸಿ ಸಂಸದರಿಗೆ ಹಾಗೂ ಶಾಸಕ ದೊಡಗೌಡರ ಅವರಿಗೆ ಅಲ್ಲಿಂದ ತೆರಳಲು ದಾರಿ ಮಾಡಿ ಕೊಟ್ಟರು. ಆದರೆ ರೈತರ ಸಮಸ್ಯೆ ಕೇಳದೇ ಕಾರಲ್ಲಿ ಹೊರಟ ಅನಂತಕುಮಾರ್ ಹೆಗಡೆ ಅವರ ವರ್ತನೆ ರೈತರ ಆಕ್ರೋಶಕ್ಕೆ ಕಾರಣವಾಯಿತು.
ಈ ಘಟನೆಯಿಂದ ಕುಪಿತಗೊಂಡ ರೈತ ಸಂಘಟನೆಯ ಕಾರ್ಯಕರ್ತರು ಸಂಸದರ ವಿರುದ್ಧ ದಿಕ್ಕಾರದ ಘೋಷಣೆಗಳನ್ನು ಕೂಗಿದರು.