'ರೈತರನ್ನು ನಿರ್ಲಕ್ಷಿಸಿದರೆ ಸಿದ್ದರಾಮಯ್ಯಗೆ ಉಳಿಗಾಲ ಇಲ್ಲ'
ಬೆಳಗಾವಿ, ನವೆಂಬರ್ 21: ಸುವರ್ಣ ಸೌಧದಲ್ಲಿ ಸೋಮವಾರ ಅಧಿವೇಶನ ಪ್ರಾರಂಭವಾಗಲಿದೆ ಆದರೆ ಅಧಿವೇಶನಕ್ಕೆ ಮುನ್ನವೇ ರೈತರು ಸುವರ್ಣ ಸೌಧವನ್ನು ಮುತ್ತಿಗೆ ಹಾಕಲು ಮುಂದಾಗಿದ್ದಾರೆ. ಸರ್ಕಾರದ ವಿರುದ್ಧ ಆಕ್ರೋಶವನ್ನೂ ವ್ಯಕ್ತಪಡಿಸಿದ್ದಾರೆ.
ಸುವರ್ಣ ಸೌಧದಲ್ಲಿ ಸೋಮವಾರ ಚಳಿಗಾಲದ ಅಧಿವೇಶನ ಪ್ರಾರಂಭಗೊಳ್ಳಲಿದ್ದು, ರಾಜ್ಯದ ವಿವಿಧ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಯಲಿದೆ. ಆದರೆ ರೈತಸಂಘವು ಬೆಳಗಾವಿಯಲ್ಲಿ ಸುವರ್ಣಸೌಧಕ್ಕೆ ಮುತ್ತಿಗೆ ಹಾಗು ವಿವಿಧ ಬೇಡಿಕೆ ಈಡೇರಿಕೆಗಾಗಿ ಪ್ರತಿಭಟನೆ ಪ್ರಾರಂಭಿಸಿದೆ.
ಇನ್ನು ರೈತರು ಐವತ್ತಕ್ಕೂ ಹೆಚ್ಚು ವಾಹನಗಳಲ್ಲಿ ಆಗಮಿಸಿದ್ದು, ಸುವರ್ಣ ಸೌಧದ ಬಳಿ ಧರಣಿ ಕುಳಿತಿದ್ದಾರೆ. ಸೌಧದ ಒಂದು ಕಿಲೋಮೀಟರ್ ವ್ಯಾಪ್ತಿಯಲ್ಲಿ ನಿಷೇದಾಜ್ಞೆ ಜಾರಿಯಾಗಿರುವ ಹಿನ್ನೆಲೆ ಪ್ರತಿಭಟನಾಕಾರರನ್ನು ಪೊಲೀಸರು ತಡೆದಿದ್ದಾರೆ.[ಈ ಬಾರಿ ಬೆಳಗಾವಿ ಅಧಿವೇಶನದಲ್ಲಿ ಐಷಾರಾಮಕ್ಕೆ ಕತ್ತರಿ]
ರೈತಸಂಘದ ಮುಖ್ಯಸ್ಥ ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸುತ್ತಿರುವುದಾಗಿ ರೈತರು ತಿಳಿಸಿದ್ದು, ಬೆಳೆಗಳಿಗೆ ಸೂಕ್ತ ಬೆಲೆ, ಸಾಲ ಮನ್ನಾ, ಕಬ್ಬಿನ ಬೆಳೆಗೆ ಪರಿಹಾರ, ಬೆಳೆ ಬಾಕಿ ಇತ್ಯಾದಿ ಅನೇಕ ಬೇಡಿಕೆಗಳ ಈಡೇರಿಕೆಗೆ ರೈತರು ಒತ್ತಾಯಿಸಿದ್ದಾರೆ.
ತಮ್ಮ ಬೇಡಿಕೆ ಈಡೇರಿಸುವವರೆಗೆ ಯಾವುದೇ ಕಾರಣಕ್ಕೂ ಅಧಿವೇಶನಕ್ಕೆ ಅವಕಾಶ ಕೊಡುವುದಿಲ್ಲ ಎಂಬುದು ರೈತರ ವಾದವಾಗಿದೆ. 'ರೈತರನ್ನು ನಿರ್ಲಕ್ಷಿಸಿದರೆ ಸಿದ್ದರಾಮಯ್ಯಗೆ ಉಳಿಗಾಲ ಇಲ್ಲ' ಎಂದು ರೈತರು ಕಿಡಿಕಾರಿದ್ದಾರೆ.
ವಿವಿಧೆಡೆಯಿಂದ ಬರುತ್ತಿರುವ ರೈತರನ್ನು ಹಲ್ಯಾಳ ಗ್ರಾಮದ ಬಳಿ ಕೆಲ ರೈತರನ್ನು ಪೊಲೀಸರು ತಡೆಹಿಡಿದಿದ್ದಾರೆ, ಇದರ ವಿರುದ್ಧ ರೈತರು ಅಕ್ರೋಶ ವ್ಯಕ್ತ ಪಡಿಸಿದ್ದಾರೆ.