ವಿಡಿಯೋ: ಕಬ್ಬಿನ ಬಾಕಿ ಬಿಲ್ ಪಾವತಿಸದ ಕಾರ್ಖಾನೆ ವಿರುದ್ಧ ರೈತನ ಆಕ್ರೋಶ
ಬೆಳಗಾವಿ, ಅಕ್ಟೋಬರ್ 9: ಕಬ್ಬಿನ ಬಾಕಿ ಬಿಲ್ ಪಾವತಿಸದ ಕಾರ್ಖಾನೆ ವಿರುದ್ಧ ರೈತನು ವಿನೂತನವಾಗಿ ಪ್ರತಿಭಟಿಸುತ್ತಿರುವ ದೃಶ್ಯ ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ಎಂ.ಕೆ ಹುಬ್ಬಳ್ಳಿಯಲ್ಲಿ ಕಂಡುಬಂದಿದೆ.
ಜೀವಂತ ಸಮಾಧಿಗಾಗಿ ತಾನೇ ತೋಡಿಕೊಂಡ ಕುಣಿಯಲ್ಲಿ ಕುಳಿತು ರೈತನು ಕಾರ್ಖಾನೆ ವಿರುದ್ಧ ಆಕ್ರೋಶ ಹೊರಹಾಕಿದ್ದಾನೆ. ಬೆಳಗಾವಿ ಜಿಲ್ಲೆಯ ಎಂ.ಕೆ ಹುಬ್ಬಳ್ಳಿ ಗ್ರಾಮದ ರೈತ ಶಿವಾನಂದ ಗೋಗಾರ ಎಂಬ ರೈತನೇ ಪ್ರತಿಭಟನೆ ಮಾಡುತ್ತಿದ್ದಾರೆ.
ಬೆಳಗಾವಿ: ಎಂ.ತಿಮ್ಮಾಪುರ ಗ್ರಾಮದಲ್ಲಿ 23 ವಿದ್ಯಾರ್ಥಿಗಳಿಗೆ ಕೊರೊನಾ ಪಾಸಿಟಿವ್
ಕಳೆದ ವರ್ಷ ಮಲಪ್ರಭಾ ಸಕ್ಕರೆ ಕಾರ್ಖಾನೆಗೆ 114 ಟನ್ ಕಬ್ಬು ಕಳಿಸಿದ್ದ ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ಎಂ.ಕೆ ಹುಬ್ಬಳ್ಳಿ ಗ್ರಾಮದ ರೈತನಿಗೆ ವರ್ಷ ಕಳೆದರೂ ಕಬ್ಬಿನ ಬಿಲ್ ನ್ನು ಕಾರ್ಖಾನೆ ಆಡಳಿತ ಮಂಡಳಿ ಪಾವತಿಸಿಲ್ಲ ಎಂಬ ಆರೋಪ ಕೇಳಿಬಂದಿದೆ.
ಕಬ್ಬಿನ ಬಾಕಿ ಬಿಲ್ ಗಾಗಿ ಹಲವು ಬಾರಿ ಕಾರ್ಖಾನೆಗೆ ಸುತ್ತಾಡಿದ್ದೇನೆ, ಆದರೂ ಆಡಳಿತ ಮಂಡಳಿ ಸದಸ್ಯರು ಕ್ಯಾರೆ ಎನ್ನುತ್ತಿಲ್ಲ ಎಂದು ನೊಂದ ರೈತನ ಆರೋಪವಾಗಿದೆ.
ಹಣವಿಲ್ಲದೇ ಮಕ್ಕಳಿಗೆ ಶಿಕ್ಷಣ ಕೊಡಿಸಲು ಆಗುತ್ತಿಲ್ಲ, ಕುಟುಂಬದ ಜೀವನ ಸಾಗಿಸಲು ಸಾಧ್ಯವಾಗುತ್ತಿಲ್ಲವೆಂದು ನೋವು ಹೊರಹಾಕುತ್ತಿದ್ದಾನೆ.
ಹರಿದ ಬಟ್ಟೆಯನ್ನೇ ಧರಿಸುವ ಅನಿವಾರ್ಯತೆ ಎದುರಾಗಿದ್ದು, ಬಾಕಿ ಇರುವ ಹಣ ಕೊಡದಿದ್ದರೆ ಅಂತ್ಯಸಂಸ್ಕಾರಕ್ಕೆ ಬನ್ನಿ ಎಂದು ರೈತನು ಜೀವಂತ ಸಮಾಧಿಯಾಗಲು ಯತ್ನಿಸುತ್ತಿದ್ದಾನೆ.
ನಾನೀಗ ಕುಣಿಯಲ್ಲಿ ಕುಳಿತಿದ್ದೇನೆ, ಮಣ್ಣಾದರೂ ಹಾಕಿ ಎಂದು ಕಾರ್ಖಾನೆ ಆಡಳಿತ ಮಂಡಳಿಗೆ ರೈತ ರೋಧಿಸುತ್ತಿರುವ ವಿಡಿಯೋ ವೈರಲ್ ಆಗಿದೆ.