ಕಳಚಿದ ಉತ್ತರ ಕರ್ನಾಟಕ ರೈತ ಹೋರಾಟದ ಮತ್ತೊಂದು ಕೊಂಡಿ!
ಬೆಂಗಳೂರು, ಅ. 07: ಗಡಿ ಜಿಲ್ಲೆ ಬೆಳಗಾವಿ ಸೇರಿದಂತೆ ಉತ್ತರ ಕರ್ನಾಟಕ ಭಾಗದಲ್ಲಿ ರೈತ ಹೋರಾಟಗಳಲ್ಲಿ ಮುಂಚೂಣಿಯಲ್ಲಿರುತ್ತಿದ್ದ ಕಲ್ಯಾಣರಾವ್ ಮುಚಳಂಬಿ ಅವರ ಅಂತ್ಯಕ್ರಿಯೆ ಬೆಳಗಾವಿಯ ಸದಾಶಿವ ನಗರ ಸ್ಮಶಾನದಲ್ಲಿ ಸಕಲ ಗೌರವಗಳೊಂದಿಗೆ ಗುರುವಾರ ನೆರವೇರಿತು. ಬುಧವಾರ ಬೆಳಗ್ಗೆ ಬೆಳಗಾವಿ ಜಿಲ್ಲೆ ಗೋಕಾಕ ತಾಲೂಕಿನ ಸಾವಳಗಿ ಮಠಕ್ಕೆ ಪಾದಯಾತ್ರೆ ಹೋಗುವ ವೇಳೆ ತೀವ್ರ ಅಸ್ವಸ್ಥರಾಗಿ ಕಲ್ಯಾಣರಾವ್ ಮುಚಳಂಬಿ ಕೊನೆಯುಸಿರೆಳಿದಿದ್ದರು.
ರಾಜ್ಯದ ರೈತ ಹೋರಾಟದಲ್ಲೇ ತಮ್ಮ ಜೀವನದ ಬಹುತೇಕ ಸಮಯ ಕಳೆದಿದ್ದ ಮುಚಳಂಬಿ ಅವರು, ಪ್ರೊ. ನಂಜುಡಸ್ವಾಮಿ, ಬಾಬಾಗೌಡ ಪಾಟೀಲ್, ಪುಟ್ಟಣ್ಣಯ್ಯ ಸೇರಿದಂತೆ ರೈತ ಹೋರಾಟಗಾರರಿಗೆ ಜೊತೆಯಾಗಿದ್ದರು. ರೈತರ ಜ್ವಲಂತ ಸಮಸ್ಯೆಗಳ ಪರಿಹಾರಕ್ಕೆ ತಮ್ಮ ಆರೋಗ್ಯವನ್ನೂ ಲೆಕ್ಕಿಸದೇ ಗಡಿ ಜಿಲ್ಲೆಗಳಲ್ಲಿ ರೈತ ಹೋರಾಟ ಸಂಘಟನೆ ಮಾಡಿದ್ದರು.
ರೈತ ಹೋರಾಟಗಳ ಜೊತೆಗೆ ಮಠ ಮಾನ್ಯಗಳೊಂದಿಗೆ, ಮಠಾಧೀಶರೊಂದಿಗೆ, ಜನಪರ ಸಂಘಟನೆಗಳ ಜೊತೆಗೆ ನಿಕಟ ಸಂಪರ್ಕ ಹೊಂದಿದ್ದ ಕಲ್ಯಾಣರಾವ್ ಮುಚಳಂಬಿ ಅವರ ನಿಧನಕ್ಕೆ ರಾಜ್ಯದ ವಿವಿಧೆಡೆಯ ರೈತ, ಜನಪರ ಸಂಘಟನೆಗಳ ಪ್ರಮುಖರು, ಮಠಾಧೀಶರು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಚಿವ ಕೆ.ಎಸ್. ಈಶ್ವರಪ್ಪ ಸೇರಿದಂತೆ ಪಕ್ಷಾತೀತವಾಗಿ ಹಲವು ರಾಜಕೀಯ ನಾಯಕರು ಸಂತಾಪ ವ್ಯಕ್ತಪಡಿಸಿದ್ದರು.
ಪ್ರೊ. ನಂಜುಂಡಸ್ವಾಮಿ ಒಡನಾಟ ಹೊಂದಿದ್ದ ಮುಚಳಂಬಿ
ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, "ಜಿಲ್ಲೆಯ ಓರ್ವ ರೈತ ಹೋರಾಟಗಾರರು ಮತ್ತು ರೈತ ಚಿಂತಕರು ಆಗಿದ್ದ ಕಲ್ಯಾಣರಾವ್ ಮುಚಳಂಬಿ ಅವರು ನಿಧನರಾಗಿರುವುದು ತೀವ್ರ ಆಘಾತವಾಗಿದೆ. ರೈತ ಮುಖಂಡ ಪ್ರೊ. ಎಂ.ಡಿ. ನಂಜುಂಡಸ್ವಾಮಿ ಅವರ ಜೊತೆಗೆ ಉತ್ತಮ ಒಡನಾಟ ಹೊಂದಿದ್ದರು. ರೈತರ ಹೋರಾಟಗಳು ಜನರಿಗೆ ತಿಳಿಯಬೇಕು ಎಂಬ ಉದ್ದೇಶದಿಂದ ಹಸಿರು ಕ್ರಾಂತಿ ಪತ್ರಿಕೆಯನ್ನು ಹುಟ್ಟು ಹಾಕಿ ಓರ್ವ ಪತ್ರಕರ್ತರಾಗಿಯೂ ಯಶಸ್ವಿಯಾಗಿದ್ದರು" ಎಂದು ಸ್ಮರಿಸಿಕೊಂಡರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂತಾಪ!
ಬೆಳಗಾವಿಯ ರೈತ ಹೋರಾಟಗಾರ ಕಲ್ಯಾಣರಾವ್ ಮುಚಳಂಬಿ ನಿಧನಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಹಸಿರು ಕ್ರಾಂತಿ ಉತ್ತರ ಕರ್ನಾಟಕ ಭಾಗದ ಪ್ರಮುಖ ಪತ್ರಿಕೆ. ಈ ಪತ್ರಿಕೆ ರೈತರ ಜೀವನಾಡಿಯಾಗಿತ್ತು. ರೈತರ ಸಮಸ್ಯೆಗಳನ್ನು ಸರ್ಕಾರಕ್ಕೆ ತಲುಪಿಸುವ ಕೆಲಸವನ್ನು ಹಸಿರು ಕ್ರಾಂತಿ ಅಚ್ಚುಕಟ್ಟಾಗಿ ನಿರ್ವಹಿಸಿದೆ. ಈ ಪತ್ರಿಕೆಯನ್ನು ಕಟ್ಟಿಬೆಳೆಸಿದ ಕಲ್ಯಾಣರಾವ ಮುಚಳಂಬಿ ಅವರು ಇಂದು ನಿಧನರಾಗಿರುವುದು ಪತ್ರಿಕೋದ್ಯಮಕ್ಕೆ ತುಂಬಲಾರದ ನಷ್ಟ ಎಂದರೆ ತಪ್ಪಾಗಲಾರದು ಎಂದು ಸಿಎಂ ಬಸವರಾಜ ಬೊಮ್ಮಾಯಿ ಕಂಬನಿ ಮಿಡಿದಿದ್ದಾರೆ.
ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ ಸಂತಾಪ!
ನಾಡಿನ ರೈತ ಹೊರಾಟಗಾರ, ಹಿರಿಯ ಪತ್ರಕರ್ತರಾಗಿದ್ದ ಹಾಗೂ ರೈತ ಪರ ಚಳುವಳಿಗಳ ಸಂಘಟನಾಕಾರರೂ ಆಗಿದ್ದ ಕಲ್ಯಾಣರಾವ್ ಮುಚಳಂಬಿ ನಿಧನದಿಂದ ತುಂಬಾ ದುಃಖವಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಸಂತಾಪ ವ್ಯಕ್ತಪಡಿಸಿದ್ದಾರೆ. ದೇವರು ಕಲ್ಯಾಣರಾವ್ ಮುಚಳಂಬಿ ಅವರ ಆತ್ಮಕ್ಕೆ ಚಿರಶಾಂತಿ ನೀಡಲಿ. ಅವರ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿ ಅವರ ಕುಟುಂಬಕ್ಕೆ ಮತ್ತು ರೈತರಿಗೆ ಭಗವಂತ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಸಚಿವ ಈಶ್ವರಪ್ಪ ಸಂತಾಪ ಸೂಚಿಸಿದ್ದಾರೆ.
ಮುಚಳಂಬಿ ನಿಧನಕ್ಕೆ ರೈತರ ಕಂಬನಿ!
ಮಾಜಿ ಮುಖ್ಯಮಂತ್ರಿ ದಿ. ರಾಮಕೃಷ್ಣ ಹೆಗಡೆ ಸೇರಿದಂತೆ ಹಲವು ರಾಜಕೀಯ ನಾಯಕರಿಗೆ ಕೃಷಿ ಸಂಕಷ್ಟಗಳ ಬಗ್ಗೆ ಲೇಖನಗಳ ಮೂಲಕವೇ ಕಲ್ಯಾಣರಾವ್ ಮುಚಳಂಬಿ ಗಮನ ಸೆಳೆದಿದ್ದರು. ಜೊತೆಗೆ ರೈತರ ಹೋರಾಟಗಳು ಎಲ್ಲಿದ್ದರೂ ಭಾಗವಹಿಸುತ್ತಿದ್ದರು. ಉತ್ತರ ಕರ್ನಾಟಕ ಭಾಗದಲ್ಲಿ ರೈತಪರ ಹೋರಾಟಗಳನ್ನು ಸಂಘಟಿಸುತ್ತಿದ್ದರು. ಹೀಗಾಗಿ ಗುರುವಾರ ನಡೆದ ಅಂತ್ಯಕ್ರಿಯೆ ಸಂದರ್ಭದಲ್ಲಿ "ಕಲ್ಯಾಣರಾವ್ ಮುಚಳಂಬಿ ಅವರ ನಿಧನ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಇಡೀ ರೈತರಿಗೆ ದೊಡ್ಡ ಆಘಾತವಾಗಿದೆ. ದೇವರು ಅವರ ಆತ್ಮಕ್ಕೆ ಶಾಂತಿ ಕರುಣಿಸಲಿ' ಎಂದು ರೈತರು ಪ್ರಾರ್ಥಿಸಿದರು.