ಪ್ರವಾಹದಲ್ಲಿ ಜಮೀನು ಕಳೆದುಕೊಂಡ ರೈತನಿಗೆ ಅರೆಸ್ಟ್ ವಾರೆಂಟ್ ಜಾರಿ
ಬೆಳಗಾವಿ, ಸೆಪ್ಟೆಂಬರ್ 14: ಕಳೆದ ತಿಂಗಳು ಭಾರೀ ಮಳೆಯಿಂದಾಗಿ ಬೆಳಗಾವಿ ಜಿಲ್ಲೆಯಲ್ಲಿ ಪ್ರವಾಹ ಸಂಭವಿಸಿ ನಷ್ಟವಾಗಿತ್ತು. ಎಷ್ಟೋ ರೈತರು ತಮ್ಮ ಜೀವನಕ್ಕೆ ಆಧಾರವಾಗಿದ್ದ ಜಮೀನನ್ನು ಕಳೆದುಕೊಂಡರು. ಹಾಗೆಯೇ ಸವದತ್ತಿ ತಾಲೂಕಿನ ಏಣಗಿ ಗ್ರಾಮದ ಈರಪ್ಪ ಎಂಬುವವರೂ ತಾವು ಬೆಳೆದಿದ್ದ ಬೆಳೆಯೆಲ್ಲವನ್ನೂ ಕಳೆದುಕೊಂಡಿದ್ದರು.
ಸಾಲಕ್ಕೆ ಹೆದರಿ ನೇಣು ಬಿಗಿದುಕೊಂಡು ಹುಣಸೂರು ರೈತ ಆತ್ಮಹತ್ಯೆ
ಮಲಪ್ರಭಾ ಪ್ರವಾಹದಲ್ಲಿ ಅವರು ಬೆಳೆದಿದ್ದ ಬೆಳೆ ಕೊಚ್ಚಿಕೊಂಡು ಹೋಗಿತ್ತು. ಆದರೆ ಬೆಳೆ ಕಳೆದುಕೊಂಡು ಮುಂದೇನು ಮಾಡುವುದು ಎಂದು ಯೋಚಿಸುತ್ತಿರುವ ಅವರಿಗೆ ಇನ್ನೂ ಒಂದು ಆಘಾತ ತಟ್ಟಿದೆ. ಸಾಲ ತೀರಿಸದ್ದಕ್ಕಾಗಿ ಹುಬ್ಬಳ್ಳಿ ಜೆ.ಎಂ.ಎಫ್.ಸಿ ನ್ಯಾಯಾಲಯದಿಂದ ಬಂಧನದ ವಾರೆಂಟ್ ಜಾರಿಯಾಗಿದೆ.
ಬೆಳೆಗೆಂದು ಈರಪ್ಪ ಅವರು ಬೈಲಹೊಂಗಲದ ಐಸಿಐಸಿಐ ಬ್ಯಾಂಕ್ ನಿಂದ 2 ಲಕ್ಷ 65 ಸಾವಿರ ಸಾಲ ಪಡೆದಿದ್ದರು. ಇದೀಗ ಬಡ್ಡಿ ಸೇರಿ ಆ ಮೊತ್ತ 4 ಲಕ್ಷ 65 ಸಾವಿರಕ್ಕೆ ಬಂದು ಮುಟ್ಟಿದೆ. ಆದರೆ ಜೀವನ ನಡೆಸಲೂ ಆಗುತ್ತಿಲ್ಲದ ಈ ಸಮಯದಲ್ಲಿ ಸಾಲವಾದರೂ ತೀರಿಸುವುದು ಹೇಗೆ ಎಂಬ ಚಿಂತೆ ಈರಪ್ಪ ಅವರದ್ದು. ನ್ಯಾಯಾಲಯದಿಂದ ವಾರೆಂಟ್ ಜಾರಿ ಮಾಡಿರುವುದು ಗಾಯದ ಮೇಲೆ ಬರೆ ಎಳೆದಂತೆ ಆಗಿದೆ.