ಅಂದು ರೈತ ಮುಖಂಡ, ಇಂದು ಗೂಂಡಾ!: ಕುಮಾರಸ್ವಾಮಿ ವಿರುದ್ಧ ರೈತನ ಕೋಪ
ಬೆಳಗಾವಿ, ನವೆಂಬರ್ 21: ಎರಡು ವರ್ಷದ ಹಿಂದೆ ನಮ್ಮ ಮನೆಗೆ ಭೇಟಿ ನೀಡಿ ಉಪಾಹಾರ ಸೇವಿಸಿ, ಹಾಲು ಕುಡಿದಿದ್ದ ಎಚ್ ಡಿ ಕುಮಾರಸ್ವಾಮಿ ಅವರೇ ಇಂದು ನಮ್ಮನ್ನು ಗೂಂಡಾ ಎಂಬುದಾಗಿ ಕರೆದಿದ್ದಾರೆ ಎಂದು ಖಾನಾಪುರದ ರೈತ ಮುಖಂಡ ಅಶೋಕ್ ಯಮಕನಮರಡಿ ಕಿಡಿಕಾರಿದ್ದಾರೆ.
ರೈತ ಮುಖಂಡರು ಎಂದು ಅಭಿಮಾನದಿಂದ ನಮ್ಮೊಂದಿಗೆ ಕುಮಾರಸ್ವಾಮಿ ಮಾತನಾಡಿದ್ದರು. ಅದೆಲ್ಲದರ ಫೋಟೊಗಳು ಕೂಡ ಇವೆ. ಆದರೆ, ಈಗ ನಮ್ಮನ್ನು ಯಾವ ಆಧಾರದ ಮೇಲೆ ಗೂಂಡಾ ಎಂದು ಕರೆಯುತ್ತಿದ್ದಾರೆ.
ಸುವರ್ಣ ವಿಧಾನಸೌಧಕ್ಕೆ ಲಾರಿ ನುಗ್ಗಿಸಿದ ರೈತರ ಬಂಧನ, ಎಫ್ಐಆರ್
ಕಬ್ಬಿನ ಬೆಳೆಗೆ ಸೂಕ್ತ ಬೆಲೆ, ಸಕ್ಕರೆ ಕಾರ್ಖಾನೆ ಮಾಲೀಕರಿಂದ ಬರಬೇಕಾದ ಬಾಕಿ ಮೊತ್ತ ಬಿಡುಗಡೆಗೆ ಆಗ್ರಹಿಸಿ ಕಬ್ಬು ಬೆಳೆಗಾರರ ಪರವಾಗಿ ಹೋರಾಟ ನಡೆಸಲು ಸುವರ್ಣ ಸೌಧಕ್ಕೆ ತೆರಳಿದ್ದೆವು. ಅಲ್ಲಿನ ಗೇಟ್ಗೆ ಹಾಕಿದ್ದ ಬೀಗವನ್ನು ನಾವೇ ಒಡೆದಿದ್ದೆವು.
ಅದು ರೈತರ ಆಕ್ರೋಶದ ಪರಿ. ನಮಗೆ ಬರಬೇಕಾದ ದುಡ್ಡು ಕೇಳುವುದಕ್ಕಾಗಿ ಗೇಟು ಮುರಿಯುವುದರಲ್ಲಿ ತಪ್ಪೇನಿದೆ. ನಮ್ಮ ಹಕ್ಕು ಕೇಳಲು ಹೋದರೆ ಕುಮಾರಸ್ವಾಮಿ ನಮ್ಮನ್ನು ಗೂಂಡಾಗಳು ಎಂದು ಕರೆದಿದ್ದಾರೆ. ಮುಖ್ಯಮಂತ್ರಿಯ ಮಗ ಕೂಡ, ಗುಪ್ತಚರ ವರದಿ ಆಧಾರದಲ್ಲಿ ಅವರು ಗೂಂಡಾ ಎಂದು ಕರೆದಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ. ಹಾಗಾದರೆ ಆಗ ಯಾಕೆ ನಮ್ಮ ಮನೆಗಳಿಗೆ ಬರಬೇಕಿತ್ತು ಎಂದು ಅಶೋಕ್ ಯಮಕನಮರಡಿ ಪ್ರಶ್ನಿಸಿದ್ದಾರೆ.
ವಿಡಿಯೋ : ಕುಮಾರಸ್ವಾಮಿಯನ್ನು ತರಾಟೆಗೆ ತೆಗೆದುಕೊಂಡ ರೈತರು
ಖಾನಾಪುರ ತಾಲ್ಲೂಕಿನ ಗಂದಿಗವಾಡ ಗ್ರಾಮದಲ್ಲಿರುವ ಅಶೋಕ್ ಅವರ ಮನೆಗೆ ಕುಮಾರಸ್ವಾಮಿ ಭೇಟಿ ನೀಡಿದ್ದರು. ಆಗ ಅವರು ಜತೆಗೆ ತೆಗೆಸಿಕೊಂಡ ಚಿತ್ರಗಳು ಈಗ ಎಲ್ಲೆಡೆ ಹರಿದಾಡುತ್ತಿವೆ.