ಘಟಪ್ರಭಾ ನದಿ ಪ್ರವಾಹ ಭೀತಿ; ಮನೆಬಿಟ್ಟು ಬೀದಿಯಲ್ಲೇ ಕುಟುಂಬದ ವಾಸ
ಬೆಳಗಾವಿ, ಆಗಸ್ಟ್ 20: ಬೆಳಗಾವಿ ಜಿಲ್ಲೆ ಗೋಕಾಕ ತಾಲೂಕಿನ ಹಡಗಿನಾಳ ಗ್ರಾಮದ ಹೊರವಲಯದಲ್ಲಿ ನೆರೆಯಿಂದ ತತ್ತರಿಸಿದ ಕುಟುಂಬವೊಂದು ಇದೀಗ ಟ್ರ್ಯಾಕ್ಟರ್ ಟ್ರ್ಯಾಲಿಯನ್ನೇ ಮನೆಯನ್ನಾಗಿಸಿಕೊಂಡು ಅದರಲ್ಲೇ ವಾಸವಾಗಿದೆ. ಕಳೆದ ವರ್ಷ ಪ್ರವಾಹದಿಂದಾಗಿ ಮನೆ ಕಳೆದುಕೊಂಡಿದ್ದ ಇವರು, ಈ ವರ್ಷ ಹೊಸ ಮನೆ ಕಟ್ಟಿಸುತ್ತಿದ್ದರು. ಆದರೆ ಮತ್ತೆ ಪ್ರವಾಹ ಎದುರಾಗಿದೆ.
ಇದೀಗ ಪುಟ್ಟ ಪುಟ್ಟ ಮಕ್ಕಳ ಜೊತೆ ರಸ್ತೆ ಬದಿ ಟ್ರ್ಯಾಕ್ಟರ್ ಟ್ರ್ಯಾಲಿಯಲ್ಲೇ ಈ ಕುಟುಂಬ ವಾಸವಾಗಿದೆ. ಘಟಪ್ರಭಾ ನದಿಯ ಪ್ರವಾಹದಿಂದ ಹಡಗಿನಾಳ ಗ್ರಾಮ ಸಂಪೂರ್ಣ ಜಲಾವೃತಗೊಂಡಿವೆ. ಜಿಲ್ಲೆಯಲ್ಲಿ ಮಳೆ ತಗ್ಗಿದರೂ ನೀರು ಹಿಂದೆ ಸರಿಯದ ಕಾರಣ ಸಂತ್ರಸ್ತರು ಮನೆ ಬಿಟ್ಟು ರಸ್ತೆ ಬದಿ ವಾಸಮಾಡಬೇಕಾದ ಪರಿಸ್ಥಿತಿ ಬಂದಿದೆ.
ಘಟಪ್ರಭಾ ನದಿ ನೀರು ಇಳಿಕೆ: ನಿಟ್ಟುಸಿರು ಬಿಟ್ಟ ಗೋಕಾಕ್ ಜನತೆ
ಘಟಪ್ರಭೆ ನೀರು ನುಗ್ಗಿ ಗ್ರಾಮದ ಬಹುತೇಕ ಮನೆಗಳು ಜಲಾವೃತಗೊಂಡಿವೆ. ಮನೆ ಬಿಟ್ಟು ಬಂದಿರುವ ಕುಟುಂಬ ಟ್ರ್ಯಾಕ್ಟರ್ ಟ್ರ್ಯಾಲಿಗೆ ತಾಡಪತ್ರಿ ಕಟ್ಟಿ ಆಶ್ರಯ ಪಡೆದಿದೆ. ಈ ಕುಟುಂಬ ಕಳೆದ ವರ್ಷದ ಪ್ರವಾಹದಲ್ಲಿ ಮನೆ ಕಳೆದುಕೊಂಡಿತ್ತು. ಈಗ ನಿರ್ಮಾಣ ಹಂತದ ಮನೆಯೂ ಜಲಾವೃತಗೊಂಡಿದೆ. ಹೀಗಾಗಿ ಅನಿವಾರ್ಯವಾಗಿಯೇ ಈ ಕುಟುಂಬದವರು ಹೀಗೆ ಆಸರೆ ಪಡೆದಿದ್ದಾರೆ.
ಕಾಳಜಿ ಕೇಂದ್ರ ತೆರೆದಿರುವ ಬಗ್ಗೆ ಮಾಹಿತಿಯೇ ಇಲ್ಲ ಎಂದು ಇವರು ಅಳಲು ತೋಡಿಕೊಂಡಿದ್ದಾರೆ. ಪರಿಹಾರ ಕೇಂದ್ರ ತೆರೆದಿದ್ದರೂ ಜನರಿಗೆ ಸೂಕ್ತ ಮಾಹಿತಿ ನೀಡದ ಅಧಿಕಾರಿಗಳ ವರ್ತನೆಗೆ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.