ಕೆ.ಕಲ್ಯಾಣ್ ಪತ್ನಿಯಿಂದ ಆಸ್ತಿ ವರ್ಗಾವಣೆ ಮಾಡಿಕೊಂಡಿದ್ದ ಶಿವಾನಂದ್ ವಾಲಿ
ಬೆಳಗಾವಿ, ಅಕ್ಟೋಬರ್ 12: ಗೀತಸಾಹಿತಿ ಕೆ.ಕಲ್ಯಾಣ್ ಅವರ ದಾಂಪತ್ಯ ಕಲಹ ಪ್ರಕರಣ ವಿಚಾರವಾಗಿ ಮಾಳಮಾರುತಿ ಠಾಣೆ ಪೊಲೀಸರಿಂದ ಕೆ.ಕಲ್ಯಾಣ್ ಪತ್ನಿ ಅಶ್ವಿನಿ, ಅತ್ತೆ ಹಾಗೂ ಮಾವನ್ನು ರಕ್ಷಣೆ ಮಾಡಲಾಗಿದ್ದು, ಆರೋಪಿ ಶಿವಾನಂದ ವಾಲಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಆಸ್ತಿ ವರ್ಗಾವಣೆ ಬೆಳಕಿಗೆ ಬಂದಿದೆ ಎಂದು ಡಿಸಿಪಿ ವಿಕ್ರಮ್ ಆಮ್ಟೆ ತಿಳಿಸಿದರು.
ಚಿತ್ರಸಾಹಿತಿ ಕೆ.ಕಲ್ಯಾಣ್ ಅವರ ದಾಂಪತ್ಯ ಕಲಹ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳಗಾವಿಯ ಮಾಳಮಾರುತಿ ಠಾಣೆಯಲ್ಲಿ ಡಿಸಿಪಿ ವಿಕ್ರಮ್ ಆಮ್ಟೆ ಸುದ್ದಿಗೋಷ್ಠಿ ನಡೆಸಿ, ಮಾತನಾಡಿದರು.
ಕೆ.ಕಲ್ಯಾಣ್ ಕುಟುಂಬ ಕಲಹ ವಿಚಾರ; ಶಿವಾನಂದ ವಾಲಿ ಪೊಲೀಸರ ವಶಕ್ಕೆ
ಸೆ.30 ರಂದು ಕೆ.ಕಲ್ಯಾಣ್ ಅವರ ದೂರಿನ ಮೇರೆಗೆ ಮಾಳಮಾರುತಿ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು, ಕೆ.ಕಲ್ಯಾಣ್ ಅವರು ಪತ್ನಿ, ಅತ್ತೆ, ಮಾವನ ಅಪಹರಣ ಹಾಗೂ ಆಸ್ತಿ ವರ್ಗಾವಣೆ ಆರೋಪ ಮಾಡಿದ್ದರು. ಮಾಳಮಾರುತಿ ಠಾಣೆ ಪೊಲೀಸರು 9 ಮ್ಯಾಕ್ಸಿ ಕ್ಯಾಬ್, 350 ಗ್ರಾಂ ಚಿನ್ನಾಭರಣ, 6 ಕೆ.ಜಿ ಬೆಳ್ಳಿ ಜಪ್ತಿ ಮಾಡಿಕೊಂಡಿದ್ದಾರೆ.
ಗಂಗಾ ಕುಲಕರ್ಣಿ ಹಾಗೂ ಶಿವಾನಂದ ವಾಲಿ ಷಡ್ಯಂತ್ರ
ಹುಬ್ಬಳ್ಳಿ ಧಾರವಾಡ, ಬೆಂಗಳೂರು, ಬೆಳಗಾವಿ ನಗರದಲ್ಲಿನ 5 ಕೋಟಿಗೂ ಹೆಚ್ಚು ಮೌಲ್ಯದ ಆಸ್ತಿ ವರ್ಗಾವಣೆ ಮಾಡಿಕೊಂಡಿದ್ದ ಶಿವಾನಂದ ವಾಲಿ, ಎರಡು ಆಸ್ತಿಗಳನ್ನು ತನ್ನ ಹೆಸರಿಗೆ ಖರೀದಿಸಿ ನಾಲ್ಕು ಆಸ್ತಿಗಳನ್ನು ಜಿಪಿಎ ಮಾಡಿಕೊಂಡಿದ್ದಾನೆ. ಈ ಷಡ್ಯಂತ್ರವನ್ನು ಕೆ.ಕಲ್ಯಾಣ್ ಮನೆ ಕೆಲಸದಾಕೆ ಗಂಗಾ ಕುಲಕರ್ಣಿ ಹಾಗೂ ಶಿವಾನಂದ ವಾಲಿ ಕೂಡಿ ಮಾಡಿದ್ದರು ಎಂದು ಡಿಸಿಪಿ ಹೇಳಿದರು.
ನಿಮ್ಮ ಹೆಸರಲ್ಲಿ ಆಸ್ತಿ ಇದ್ದರೆ ನಿಮ್ಮ ಜೀವಕ್ಕೆ ತೊಂದರೆ
ಮೊದಲು ಕೆ.ಕಲ್ಯಾಣ್ ದಂಪತಿ ಮಧ್ಯೆ ಮನಸ್ತಾಪ ಉಂಟು ಮಾಡುತ್ತಾರೆ, ಬಳಿಕ ಶಿವಾನಂದ ವಾಲಿ ತನ್ನ ಮೈಯಲ್ಲಿ ದೇವರು ಬಂದ ಹಾಗೇ ನಟಿಸುತ್ತಿದ್ದರು. ನಿಮ್ಮ ಹೆಸರಲ್ಲಿ ಆಸ್ತಿ ಇದ್ದರೆ ನಿಮ್ಮ ಜೀವಕ್ಕೆ ತೊಂದರೆ ಇದೆ ಎಂದು ಕೆ.ಕಲ್ಯಾಣ್ ಪತ್ನಿಗೆ ಪುಸಲಾಯಿಸಿ ಶಿವಾನಂದ ವಾಲಿ ಹಾಗೂ ಗಂಗಾ ಕುಲಕರ್ಣಿ ಆಸ್ತಿ ವರ್ಗಾವಣೆ ಮಾಡಿದ್ದರು.
ನಮ್ಮಿಬ್ಬರ ಮಧ್ಯೆ ಕಮ್ಯುನಿಕೇಷನ್ ಗ್ಯಾಪ್ ಆಗಿದೆ: ಪತ್ನಿ ಆರೋಪಕ್ಕೆ ಕೆ.ಕಲ್ಯಾಣ್ ಸ್ಪಷ್ಟನೆ
ಬೆಳಗಾವಿ ನಗರದಲ್ಲಿ ಪ್ರಥಮ ಬಾರಿಗೆ ವಾಮಾಚಾರ ಪ್ರಕರಣ
ಕರ್ನಾಟಕ ಅಮಾನವೀಯ ದುಷ್ಟ ಪದ್ಧತಿಗಳು ಹಾಗೂ ವಾಮಾಚಾರ ಇವುಗಳ ಪ್ರತಿಬಂಧ ಹಾಗೂ ನಿರ್ಮೂಲನೆ 2017 ರಡಿ ಪ್ರಕರಣ ದಾಖಲಿಸಿಕೊಳ್ಳಲು ಕ್ರಮ ಕೈಗೊಳ್ಳಲಾಗಿದ್ದು, ಬೆಳಗಾವಿ ನಗರದಲ್ಲಿ ಪ್ರಥಮ ಬಾರಿಗೆ ಈ ಪ್ರಕರಣ ಅಳವಡಿಸಿಕೊಳ್ಳಲಾಗುತ್ತಿದೆ ಎಂದು ಡಿಸಿಪಿ ವಿಕ್ರಮ್ ಆಮ್ಟೆ ತಿಳಿಸಿದರು.
ಗಂಗಾ ಕುಲಕರ್ಣಿ ಪತ್ತೆಗೆ ವಿಶೇಷ ತಂಡ ರಚನೆ
ಈಗಾಗಲೇ ಶಿವಾನಂದ್ ವಾಲಿಯನ್ನು ಬಂಧಿಸಿದ್ದು, ಇನ್ನು ಗಂಗಾ ಕುಲಕರ್ಣಿ ಪತ್ತೆಗೆ ವಿಶೇಷ ತಂಡವನ್ನು ರಚನೆ ಮಾಡಿದ್ದೇವೆ ಬೆಳಗಾವಿಯ ಮಾಳಮಾರುತಿ ಠಾಣೆಯಲ್ಲಿ ಡಿಸಿಪಿ ವಿಕ್ರಮ್ ಆಮ್ಟೆ ಸುದ್ದಿಗೋಷ್ಠಿಯ ವೇಳೆ ಮಾಹಿತಿ ನೀಡಿದರು.