ಬೆಳಗಾವಿಯಲ್ಲಿ ಸುರಿದ ಮಳೆಯಿಂದ ಅಪಾರ ಹಾನಿ: ಜಿಲ್ಲಾಧಿಕಾರಿ ಮಾಹಿತಿ
ಬೆಳಗಾವಿ, ಅಕ್ಟೋಬರ್ 16: ಮಹಾರಾಷ್ಟ್ರ ಮತ್ತು ಕೃಷ್ಣಾ ಜಲಾನಯನ ಭಾಗದಲ್ಲಿ ಸುರಿದ ಕುಂಭದ್ರೋಣ ಮಳೆಯ ಅಬ್ಬರಕ್ಕೆ ಬೆಳಗಾವಿ ಜಿಲ್ಲೆ ನಲುಗಿಹೋಗಿದೆ. ಇಂದು ಬೆಳಗಾವಿ ಜಿಲ್ಲಾಧಿಕಾರಿ ಹಾನಿ ಪ್ರಮಾಣದ ಮಾಹಿತಿ ನೀಡಿದ್ದಾರೆ.
ಈ ಮಳೆ ಅವಾಂತರಕ್ಕೆ ನೂರಾರು ಕೋಟಿ ಆಸ್ತಿ, ಬೆಳೆ ಹಾನಿಯಾಗಿದ್ದು, ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆಗೆ ಓರ್ವ ವ್ಯಕ್ತಿ, ಆರು ಜಾನುವಾರು ಮೃತರವಾಗಿವೆ ಎಂದು ಬೆಳಗಾವಿಯಲ್ಲಿ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಮಾಹಿತಿ ನೀಡಿದರು.
ಮಹಾರಾಷ್ಟ್ರದಲ್ಲಿ ಭಾರಿ ಮಳೆ: ಬೆಳಗಾವಿಯಲ್ಲಿ ಉಕ್ಕಿ ಹರಿಯುತ್ತಿರುವ ನದಿಗಳು
ಮಹಾಮಳೆಗೆ ಬೆಳಗಾವಿ ಜಿಲ್ಲೆಯಾದ್ಯಂತ 270 ಮನೆಗಳು ಕುಸಿತ, 62 ಮನೆಗಳು ಭಾಗಶಃ ಹಾನಿಯಾಗಿದ್ದು, ಮಳೆ ಅಬ್ಬರಕ್ಕೆ ಕಟಾವಿಗೆ ಬಂದಿದ್ದ ನೂರಾರು ಕೋಟಿ ರೂ. ಬೆಳೆ ಹಾನಿಯಾಗಿದೆ. ಕೃಷಿ ಇಲಾಖೆ ವ್ಯಾಪ್ತಿಯಲ್ಲಿ 35,238 ಹೆಕ್ಟರ್ ಬೆಳೆ ಹಾನಿಯಾಗಿದ್ದು, ಕಬ್ಬು, ಸೋಯಾ ಸೇರಿದಂತೆ ಅಂದಾಜು 315 ಕೋಟಿ ಹಾನಿಯಾಗಿದೆ.
35.55 ಹೆಕ್ಟರ್ ಪ್ರದೇಶದ ತೋಟಗಾರಿಕೆ ಬೆಳೆ ಹಾನಿಯಾಗಿದ್ದು, ಅಂದಾಜು 4 ಕೋಟಿ ತೋಟಗಾರಿಕೆ ಬೆಳೆ ಮಳೆಗೆ ಆಹುತಿಯಾಗಿದೆ. ಸಮೀಕ್ಷೆಗೆ ಸೂಚಿಸಲಾಗಿದ್ದು ಶೀಘ್ರವೇ ಸರ್ಕಾರಕ್ಕೆ ಬೆಳೆ ಹಾನಿ ವರದಿ ಸಲ್ಲಿಸಲಾಗುವುದು ಎಂದು ಬೆಳಗಾವಿ ಜಿಲ್ಲಾಧಿಕಾರಿ ತಿಳಿಸಿದರು.
ಮಹಾರಾಷ್ಟ್ರದಲ್ಲಿ ಮಳೆ ಪ್ರಮಾಣ ಕ್ಷೀಣವಾಗಿದ್ದು, ಜಿಲ್ಲೆಯ ನದಿಗಳು ಒಳಹರಿವು ತಗ್ಗಿದೆ. ಮಹಾರಾಷ್ಟ್ರದ ನೀರಾವರಿ ಅಧಿಕಾರಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ. ಕೊಯ್ನಾ, ರಾಜಾಪುರ ಡ್ಯಾಂನಿಂದ ಕೃಷ್ಣೆಗೆ ನೀರು ಬಿಡುವುದಿಲ್ಲ ಎಂದು ಮಹಾರಾಷ್ಟ್ರದ ಅಧಿಕಾರಿಗಳು ಹೇಳಿದ್ದಾರೆ ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಮಾಹಿತಿ ನೀಡಿದರು.
ಕಳೆದ ನಾಲ್ಕು ದಿನಗಳ ಹಿಂದೆ ವಾಯುಭಾರ ಕುಸಿತದ ಪರಿಣಾಮ ಬೆಳಗಾವಿ ನಗರ ಸೇರಿದಂತೆ ಹುಕ್ಕೇರಿ, ಖಾನಾಪುರ, ಕಿತ್ತೂರು, ಸವದತ್ತಿ, ಬೈಲಹೊಂಗಲ, ಅಥಣಿ ಸೇರಿದಂತೆ ವಿವಿಧ ಭಾಗಗಳಲ್ಲಿ ಅಪಾರ ಪ್ರಮಾಣದಲ್ಲಿ ಮಳೆಯಾಗಿತ್ತು.
ಹಲವೆಡೆ ಮನೆಗಳು ಕುಸಿದಿದ್ದು, ರಸ್ತೆ-ಸೇತುವೆಗಳೆಲ್ಲ ಜಲಾವೃತಗೊಂಡಿವೆ. ಘಟಪ್ರಭಾ, ಮಲಪ್ರಭಾ, ವೇದಗಂಗಾ, ದೂದಗಂಗಾ, ಮಾರ್ಕಂಡೇಯ ನದಿಗಳು ಕೂಡ ಉಕ್ಕಿ ಹರಿಯುತ್ತಿವೆ. ಎರಡು ದಿನಗಳಿಂದ ಮಳೆ ಅಬ್ಬರ ಕಡಿಮೆ ಆಗಿದ್ದು, ಕಬ್ಬು ಬೆಳೆಗಾರರು ನಿರಾಳರಾಗಿದ್ದಾರೆ.