ರಾಜ್ಯಸಭಾ ಸದಸ್ಯರಾದ ಬಳಿಕ ಬೆಳಗಾವಿಗೆ ಆಗಮಿಸಿದ ಈರಣ್ಣ ಕಡಾಡಿ
ಬೆಳಗಾವಿ, ಜೂನ್ 13: ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾದ ಬಳಿಕ ಬಿಜೆಪಿಯ ಮುಖಂಡ ಈರಣ್ಣ ಕಡಾಡಿ ಅವರು ಪ್ರಥಮವಾಗಿ ಬೆಳಗಾವಿಗೆ ಆಗಮಿಸಿದರು. ಬೆಳಗಾವಿ ಜಿಲ್ಲೆಯ ನೂರಾರು ಕಾರ್ಯಕರ್ತರು ಈರಣ್ಣ ಕಡಾಡಿ ಅವರನ್ನು ಸುವರ್ಣ ವಿಧಾನಸೌಧದ ಬಳಿ ತಡೆದು ಅವರನ್ನು ಆತ್ಮೀಯವಾಗಿ ಬೆಳಗಾವಿಗೆ ಬರಮಾಡಿಕೊಂಡರು.
Recommended Video
ರಾಜ್ಯಸಭಾ ಸದಸ್ಯ ಈರಣ್ಣಾ ಕಡಾಡಿ ಅವರು ಬೆಳಗಾವಿಯಲ್ಲಿರುವ ವೀರ ರಾಣಿ ಕಿತ್ತೂರು ಚನ್ನಮ್ಮನ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು.
ರಾಜ್ಯಸಭೆ ಚುನಾವಣೆ ಹೊತ್ತಲ್ಲಿ ಭೋಜನಕೂಟ ಆಯೋಜಿಸಿದ ರಮೇಶ್ ಜಾರಕಿಹೊಳಿ
ಈ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಾಮಾನ್ಯ ಕಾರ್ಯಕರ್ತ ರಾಜ್ಯಸಭಾ ಪ್ರವೇಶ ಮಾಡಲು ಬಿಜೆಪಿ ಅವಕಾಶ ಕೊಟ್ಟಿದೆ, ಕಾರ್ಯಕರ್ತರ ಬಲ, ನಾಯಕರ ಸಹಕಾರದ ಮೂಲಕ ಕೆಲಸ ಮಾಡಲು ಅವಕಾಶ ಸಿಕ್ಕಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ನಡುವೆ ಕೊಂಡಿಯಾಗಿ ಕೆಲಸ ಮಾಡುತ್ತೇನೆ ಎಂದು ಹೇಳಿದರು.
ಕಾರ್ಯಕರ್ತರು, ನಾಯಕರ ಆಪೇಕ್ಷೆಯಂತೆ ಕೆಲಸ ಮಾಡುವ ಸಂಕಲ್ಪದೊಂದಿಗೆ ಪ್ರವಾಸ ಆರಂಭಿಸಿದ್ದೇನೆ, ಇಲ್ಲಿಯವರೆಗೆ ರಾಜ್ಯಸಭೆ ಎಂದರೆ ಬೇರೆಯದೇ ಕಲ್ಪನೆ ಇತ್ತು, ಸಾಮಾನ್ಯರೂ ರಾಜ್ಯಸಭೆ ಪ್ರವೇಶಿಸಬಹುದೆಂಬ ಕಲ್ಪನೆಯನ್ನು ಬಿಜೆಪಿ ಹರಿಬಿಟ್ಟಿದೆ, ಉಳಿದ ಪಕ್ಷಗಳಲ್ಲಿಯೂ ಈ ಚರ್ಚೆ ಬಿರುಸಿನಿಂದ ಪ್ರಾರಂಭವಾಗಿದೆ ಎಂದರು.
ಈ ಪರಂಪರೆ ನೀವು ತರಬೇಕೆಂದು ಕಾಂಗ್ರೆಸ್, ಜೆಡಿಎಸ್ ಕಾರ್ಯಕರ್ತರು ಒತ್ತಾಯಿಸುತ್ತಿದ್ದಾರೆ. ನಾನು ಕಳೆದ ಹಲವು ದಶಕಗಳಿಂದ ಸಾಮಾನ್ಯ ಕಾರ್ಯಕರ್ತನಾಗಿ ಜನರ ಮಧ್ಯೆ ಬೆಳೆದಂತವನು, ಸಾಮಾನ್ಯ ಜನರ, ಕಟ್ಟಕಡೆಯ ವ್ಯಕ್ತಿಯ ಕನಸೇನು ಎಂಬ ಕಲ್ಪನೆ ನನಗಿದೆ. ನಮ್ಮ ರಾಜ್ಯಕ್ಕೆ ಸಮರ್ಪಕ ಅನುದಾನ ತರುವುದು, ಬಳಕೆ ಮಾಡುವುದರಲ್ಲಿ ಬಹಳಷ್ಟು ಸಲ ವಿಫಲರಾಗಿದ್ದೇವೆ, ಅದು ಆಗದಂತೆ ನಾನು ಪ್ರಯತ್ನಿಸುವೆ ಎಂದು ಈರಣ್ಣ ಕಡಾಡಿ ಹೇಳಿದರು.
ವಿಧಾನ ಪರಿಷತ್ ಆಯ್ಕೆಯಲ್ಲೂ ಸಾಮಾನ್ಯ ಕಾರ್ಯಕರ್ತರಿಗೆ ಅವಕಾಶ ಬಗ್ಗೆ ಪಕ್ಷ ತೀರ್ಮಾನಿಸುತ್ತದೆ. ನಮ್ಮ ಪಕ್ಷ ಕಾರ್ಯಕರ್ತರ ಆಧಾರಿತ ಪಕ್ಷವಾಗಿದೆ. ಕೊಟ್ಟಿರುವ ಅವಕಾಶ ಸಮರ್ಪಕವಾಗಿ ಬಳಕೆ ಮಾಡಿಕೊಳ್ಳುತ್ತೇವೆ ಎಂದರು.
ಬೆಳಗಾವಿ ಬಿಜೆಪಿಯಲ್ಲಿ ಯಾವುದೇ ಬಣಗಳು ಇಲ್ಲ, ಎಲ್ಲರೂ ಒಟ್ಟಾಗಿ ಕೆಲಸ ಮಾಡುತ್ತೇವೆ, ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ನಮ್ಮ ಪಕ್ಷದವರೇ ಅಧ್ಯಕ್ಷರು ಆಗ್ತಾರೆ ಎಂದು ಈರಣ್ಣ ಕಡಾಡಿ ವಿಶ್ವಾಸ ವ್ಯಕ್ತಪಡಿಸಿದರು. ಈ ಸಂಧರ್ಭದಲ್ಲಿ ಬೆಳಗಾವಿ ಜಿಲ್ಲೆಯ ಬಿಜೆಪಿ ನಾಯಕರು, ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು.