ಬೆಳಗಾವಿಯಲ್ಲಿ ನೂಪೂರ್ ಶರ್ಮಾ ಪ್ರತಿಕೃತಿ ನೇತುಹಾಕಿ ವಿಕೃತಿ
ಬೆಳಗಾವಿ, ಜೂನ್ 10: ಪ್ರವಾದಿ ಮೊಹಮ್ಮದ್ ಪೈಗಂಬರ್ ಕುರಿತು ಅವಹೇಳನಕಾರಿ ಹೇಳಿಕೆ ನೀಡಿ ವಿವಾದಕ್ಕೀಡಾಗಿರುವ ಬಿಜೆಪಿಯ ನೂಪೂರ್ ಶರ್ಮಾ ಪ್ರತಿಕೃತಿಯನ್ನು ನಡುರಸ್ತೆಯಲ್ಲಿ ಗಲ್ಲಿಗೇರಿಸುವ ರೀತಿಯಲ್ಲಿ ನೇತುಹಾಕಿ ಪ್ರತಿಭಟಿಸಲಾಗಿದೆ. ಪ್ರತಿಕೃತಿಗೆ ನೂಪೂರ್ ಶರ್ಮಾರ ಫೋಟೋಗಳನ್ನು ಅಂಟಿಸಲಾಗಿದೆ.
ಬೆಳಗಾವಿಯ ಪೋರ್ಟ್ ರಸ್ತೆಯಲ್ಲಿ ಗುರುವಾರ ರಾತ್ರಿ ನೂಪುರ್ ಶರ್ಮಾ ಪ್ರತಿಕೃತಿಯನ್ನು ನೇತು ಹಾಕಲಾಗಿದೆ. ಇದನ್ನು ಶುಕ್ರವಾರ ಬೆಳಗ್ಗೆ ಪೊಲೀಸರು ಕೆಳಗಿಳಿಸಿದ್ದಾರೆ. ಜೊತೆಗೆ ಈ ಕೃತ್ಯವನ್ನು ಎಸಗಿರುವವರನ್ನು ಕಂಡು ಹಿಡಿಯುವ ಪ್ರಯತ್ನದಲ್ಲಿದ್ದು, ತನಿಖೆ ಮುಂದುವರಿಸಿದ್ದಾರೆ.
ಪರಿಚಯ; ಬಿಜೆಪಿಯಿಂದ ಅಮಾನತುಗೊಂಡಿರುವ ನೂಪುರ್ ಶರ್ಮಾ ಯಾರು?
ಈ ಘಟನೆ ಬೆಳಕಿಗೆ ಬರುತ್ತಿದ್ದಂತೆ ಹಿಂದೂ ಜಾಗರಣ ವೇದಿಕೆ, ಶ್ರೀರಾಮ ಸೇನೆ ಹಾಗೂ ಕೆಲವು ಪಾಲಿಕೆ ಸದಸ್ಯರು ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಆಕ್ರೋಶ ವ್ಯಕ್ತಪಡಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ. ಹೆಚ್ಚಿನ ಜನ ಸೇರುತ್ತಿದ್ದಂತೆ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗುತ್ತಿದ್ದಂತೆ ಪೊಲೀಸರು ದೌಡಾಯಿಸಿದ್ದಾರೆ.
ಶಂಕರ್ ಪಾಟೀಲ್ ಆಕ್ರೋಶ; ಘಟನೆ ಬಗ್ಗೆ ತಿಳಿಯುತ್ತಿದ್ದಂತೆಯೇ ಸ್ಥಳಕ್ಕಾಗಮಿಸಿದ ಮಹಾನಗರ ಪಾಲಿಕೆ ಸದಸ್ಯ ಶಂಕರ ಪಾಟೀಲ ಕಿಡಿ ಕಾರಿದ್ದು, ಇದು ತಾಲಿಬಾನ್ ಅಲ್ಲ, ಪ್ರಜಾಪ್ರಭುತ್ವ ದೇಶ. ಇಲ್ಲಿ ನಡುರಸ್ತೆಯಲ್ಲಿ ಗಲ್ಲಿಗೇರಿಸುವ ಪದ್ದತಿ ಇಲ್ಲ.
ಧಾರ್ಮಿಕ ವೈಷಮ್ಯ: ನುಪೂರ್ ಜೊತೆ ಪತ್ರಕರ್ತೆ ಮೇಲೂ ಕೇಸು
ಗಲ್ಲಿಗೇರಿಸುವ ಶಿಕ್ಷೆ ನೀಡುವ ಅಧಿಕಾರ ನ್ಯಾಯಾಂಗಕ್ಕೆ ಮಾತ್ರ ಇದೆ. ನೂಪೂರ್ ಶರ್ಮಾ ಹೇಳಿಕೆಯಲ್ಲಿ ತಪ್ಪಿದ್ದರೆ ಕಾನೂನು ಪ್ರಕಾರ ಕ್ರಮವಹಿಸಲಾಗುತ್ತದೆ. ಕೇಸ್ ದಾಖಲಿಸಿ ಬಂಧಿಸಲಿ, ಆದರೆ ಈ ರೀತಿ ಗಲ್ಲಿಗೇರಿಸಿ ಸಮಾಜದಲ್ಲಿ ಭಯದ ವಾತಾವರಣ ನಿರ್ಮಾಣ ಮಾಡುವುದು ಸರಿಯಲ್ಲ. ಇಂತಹ ವ್ಯವಸ್ಥೆಯನ್ನು ಸಹಿಸಲಾಗಲ್ಲ ಎಂದು ಅಸಮಧಾನ ಹೊರ ಹಾಕಿದ್ದಾರೆ.
Effigy of @NupurSharmaBJP was found hanging at Ford road area of #Belagavi #Karnataka.Cops have brought down the effigy and are trying to ascertain who did it.Investigation is on. Local corporator Shankar Patil brought this to notice of police. Local RW groups demanded action. pic.twitter.com/aglYl7TkuI
— Imran Khan (@KeypadGuerilla) June 10, 2022
ರಸ್ತೆಯ ಎರಡೂ ಬದಿಯ ಕಟ್ಟಡಗಳಿಗೆ ದಾರವನ್ನು ಕಟ್ಟಲಾಗಿದ್ದು, ಪ್ರತಿಕೃತಿಗೆ ಕೇಸರಿ ಬಣ್ಣದ ಸೀರೆಯನ್ನುಡಿಸಿ ನೇತುಹಾಕಲಾಗಿದೆ. ಈ ಫೋಟೋಗಳು ಸಾಮಾಜಿಕ ಜಾಲಾತಾಣದಲ್ಲಿ ವೈರಲ್ ಆಗುತ್ತಿದೆ.
ಬಿಜೆಪಿಯಿಂದ ನೂಪೂರ್ ಶರ್ಮಾ ಅಮಾನತು; ಟಿವಿ ಕಾರ್ಯಕ್ರಮದಲ್ಲಿ ಪ್ರವಾದಿ ಮಹಮದ್ ಅವರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದರು. ಈ ಹೇಳಿಕೆಗ ದೇಶಾದ್ಯಂತ ತೀವ್ರ ಟೀಕೆ ಕೇಳಿಬಂದ ಹಿನ್ನಲೆ ಬಿಜೆಪಿ ರಾಷ್ಟ್ರೀಯ ವಕ್ತಾರ ನೂಪೂರ್ ಶರ್ಮಾರನ್ನು ಪಕ್ಷದಿಂದ ವಜಾಮಾಡಲಾಗಿದೆ. ನೂಪೂರ್ ಶರ್ಮಾ ಹೇಳಿಕೆ ವಿಶ್ವದಾದ್ಯಂತ ಭಾರಿ ಚರ್ಚೆಯಾಗುತ್ತಿದ್ದು, ಕೆಲವು ಮುಸ್ಲಿಂ ರಾಷ್ಟ್ರಗಳು ಭಾರತ ಕ್ಷಮೆ ಕೇಳಬೇಕೆಂದು ಆಗ್ರಹಿಸುತ್ತಿವೆ.