ಮಹದಾಯಿ ಒಂದು ಹನಿ ನೀರು ವ್ಯರ್ಥವಾಗಲು ಬಿಡಲ್ಲ : ಡಿ.ಕೆ.ಶಿವಕುಮಾರ್
ಬೆಳಗಾವಿ, ಸೆಪ್ಟೆಂಬರ್ 27 : 'ಮಹದಾಯಿ ನದಿಯ ಒಂದು ಹನಿ ನೀರು ವ್ಯರ್ಥವಾಗಲು ಬಿಡುವುದಿಲ್ಲ. ನ್ಯಾಯಾಧೀಕರಣದ ತೀರ್ಪು ಬಂದ ಮೇಲೆ ಸರ್ಕಾರ ಸುಮ್ಮನೆ ಕುಳಿತಿಲ್ಲ. ಕಾವೇರಿ ವಿಚಾರದಲ್ಲಿ ಇರುವ ಕಾಳಜಿ ಮಹದಾಯಿ ವಿಚಾರದಲ್ಲೂ ಇದೆ' ಎಂದು ಸಚಿವ ಡಿ.ಕೆ.ಶಿವಕುಮಾರ್ ಹೇಳಿದರು.
ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರು ಬುಧವಾರ ಕಳಸಾ-ಬಂಡೂರಿ ನಾಲಾ ಪ್ರದೇಶ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಕಣಕುಂಬಿಗೆ ಭೇಟಿ ನೀಡಿದ್ದರು. ಅಧಿಕಾರಿಗಳ ಜೊತೆ ಯೋಜನೆ ಬಗ್ಗೆ ಚರ್ಚಿಸಿದರು, ರೈತ ಮುಖಂಡರ ಜೊತೆ ಮಾತುಕತೆ ನಡೆಸಿದರು.
ಮಹದಾಯಿ ಅಂತಿಮ ತೀರ್ಪು : ಏನಿದು ಮೂರು ರಾಜ್ಯಗಳ ನಡುವಿನ ವಿವಾದ?
ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, 'ರಾಜ್ಯದ ಒಂದೇ ಒಂದು ಹನಿ ನೀರನ್ನು ವ್ಯರ್ಥವಾಗಿ ಸಮುದ್ರ ಸೇರಲು ಬಿಡುವುದಿಲ್ಲ. ಮಹದಾಯಿ ವಿವಾದದ ಬಗ್ಗೆ ಚರ್ಚೆ ನಡೆಸಲು ಶೀಘ್ರವೇ ಸರ್ವಪಕ್ಷಗಳ ಸಭೆಯನ್ನು ಕರೆಯಲಾಗುತ್ತದೆ ಎಂದರು.
ಮಹದಾಯಿ : ಕರ್ನಾಟಕದ ವಿರುದ್ಧ ಕೋರ್ಟ್ ಮೆಟ್ಟಿಲೇರಿದ ಗೋವಾ
'ರಾಜ್ಯ ಸರ್ಕಾರ ಕಳಸಾ-ಬಂಡೂರಿ ಕಾಮಗಾರಿಗೆ 250 ಕೋಟಿ ರೂ.ಗಳನ್ನು ಖರ್ಚು ಮಾಡಿದೆ. ನಾಲೆಯ ಸರ್ವೇ ಕಾರ್ಯಕ್ಕೆ 50 ಲಕ್ಷ ರೂ. ವೆಚ್ಚ ಮಾಡಿದೆ. ಇನ್ನೂ ಎಷ್ಟು ಕೋಟಿ ರೂ.ಗಳನ್ನು ಬೇಕಾದರೂ ಖರ್ಚು ಮಾಡಲು ಸಿದ್ಧವಿದೆ' ಎಂದು ತಿಳಿಸಿದರು.
ಮಹದಾಯಿ ವಿಚಾರದಲ್ಲಿ ರಾಜಕೀಯ ಆಟ ಬೇಡ: ಡಿಕೆಶಿ ಮನವಿ
ನ್ಯಾಯಮಂಡಳಿ ಒಪ್ಪಿಕೊಂಡಿದೆ
'ಮಹದಾಯಿ ನದಿಯಲ್ಲಿ 188 ಟಿಎಂಸಿ ಅಡಿ ನೀರು ಲಭ್ಯವಿದೆ ಎಂಬುದನ್ನು ನ್ಯಾಯಮಂಡಳಿ ಒಪ್ಪಿಕೊಂಡಿದೆ. ಈಗ ಲಭ್ಯವಿರುವ ನೀರಿನ ಪೈಕಿ ಕರ್ನಾಟಕಕ್ಕೆ 13.24 ಟಿಎಂಸಿ ಅಡಿ, ಗೋವಾಕ್ಕೆ 24 ಟಿಎಂಸಿ ಅಡಿ ಹಾಗೂ ಮಹಾರಾಷ್ಟ್ರಕ್ಕೆ 1.30 ಟಿಎಂಸಿ ಅಡಿ ನೀರು ಹಂಚಿಕೆ ಮಾಡಿದೆ. ಇನ್ನುಳಿದ ನೀರು ಸಮುದ್ರಕ್ಕೆ ಹೋಗುತ್ತಿದೆ. ಈ ನೀರಿನಲ್ಲಿ ನಮಗೆ ಪಾಲು ಕೊಡಿ ಎಂಬುದು ನಮ್ಮ ಬೇಡಿಕೆಯಾಗಿದೆ' ಎಂದು ಡಿ.ಕೆ.ಶಿವಕುಮಾರ್ ವಿವರಿಸಿದರು.
ಕುಡಿಯುವ ನೀರಿಗೆ ಉಪಯೋಗ
'ಬೇರೆ ರಾಜ್ಯದವರು ಎಷ್ಟಾದರೂ ನೀರು ಉಪಯೋಗ ಮಾಡಿಕೊಳ್ಳಲಿ. ಅದಕ್ಕೆ ನಮ್ಮ ಅಭ್ಯಂತರವಿಲ್ಲ. ಅಕ್ಕಪಕ್ಕದ ರಾಜ್ಯಗಳ ಜೊತೆ ಜಗಳವಾಡುವ ಅವಶ್ಯಕತೆಯೂ ನಮಗಿಲ್ಲ. ಸಮುದ್ರಕ್ಕೆ ಸೇರುವ ನೀರನ್ನು ಕಳಸಾ-ಬಂಡೂರು ನಾಲೆ ಮೂಲಕ ಮಲಪ್ರಭಾಗೆ ತಿರುಗಿಸಿದರೆ ಈ ಭಾಗದ ಜನರಿಗೆ ಕುಡಿಯುವ ನೀರು ಸಿಗುತ್ತದೆ ಎಂಬುದು ನಮ್ಮ ವಾದವಾಗಿದೆ' ಎಂದು ಡಿ.ಕೆ.ಶಿವಕುಮಾರ್ ಹೇಳಿದರು.
ರಾಜ್ಯ ಸರ್ಕಾರ ಸುಮ್ಮನೆ ಕುಳಿತಿಲ್ಲ
'ಮಹದಾಯಿ ನದಿ ನೀರಿನ ಹಂಚಿಕೆ ವಿಚಾರದಲ್ಲಿ ರಾಜ್ಯಕ್ಕೆ ಅನ್ಯಾಯವಾಗಿದೆ. ನ್ಯಾಯಮಂಡಳಿ ಆದೇಶದ ವಿರುದ್ಧ ಸುಪ್ರೀಂಕೋರ್ಟ್ಗೆ ಮೇಲ್ಮನವಿ ಸಲ್ಲಿಸುತ್ತೇವೆ. ಇನ್ನೂ ಒಂದೂವರೆ ತಿಂಗಳು ಸಮಯವಿದ್ದು, ಅಷ್ಟರೊಳಗೆ ರಾಜ್ಯ ಸರ್ಕಾರ ಮೇಲ್ಮನವಿ ಸಲ್ಲಿಸುತ್ತದೆ. ಅಷ್ಟರೊಳಗೆ ವಿವಾದದ ಕುರಿತು ಚರ್ಚೆ ನಡೆಸಲು ಸರ್ವಪಕ್ಷಗಳ ಸಭೆಯನ್ನು ಕರೆಯಲಾಗುತ್ತದೆ' ಎಂದು ಸಚಿವರು ತಿಳಿಸಿದರು.
431 ಹೆಕ್ಟೇರ್ ಜಮೀನು ಬೇಕು
'ಕಳಸಾ ಬಂಡೂರಿಗೆ 431 ಹೆಕ್ಟೇರ್ ಜಮೀನು ಬೇಕು. 191 ಹೆಕ್ಟೇರ್ ಖಾಸಗಿ ಜಮೀನು ಅವಶ್ಯಕತೆ ಇದೆ. ಖಾಸಗಿ ಜಮೀನು ಸ್ವಾಧೀನಕ್ಕೆ ಸಿದ್ಧತೆ ನಡೆಯುತ್ತಿದೆ. ರಾಜ್ಯದ ಹಿತ ಕಾಪಾಡಲು ಸರ್ಕಾರ ಬದ್ಧವಾಗಿದೆ. 148 ಟಿಎಂಸಿ ನೀರು ಸಮುದ್ರಕ್ಕೆ ಹರಿದು ಹೋಗುತ್ತಿದೆ. ಇದನ್ನು ಬಳಸಿಕೊಂಡು ಕುಡಿಯುವ ನೀರು ಪೂರೈಕೆ ಮಾಡುವುದು ರಾಜ್ಯದ ಉದ್ದೇಶವಾಗಿದೆ' ಎಂದು ಡಿ.ಕೆ.ಶಿವಕುಮಾರ್ ಹೇಳಿದರು.
ಯೋಜನೆ ಸ್ಥಗಿತಗೊಳ್ಳುವುದಿಲ್ಲ
'ರಾಜ್ಯ ಸರ್ಕಾರ ಯಾವುದೇ ಕಾರಣಕ್ಕೂ ಮಹದಾಯಿ ಯೋಜನೆಯನ್ನು ಸ್ಥಗಿತಗೊಳಿಸುವುದಿಲ್ಲ. ನಾವು ಪರಿಸರ ಪ್ರೇಮಿಗಳು. ಪರಿಸರಕ್ಕೆ ಧಕ್ಕೆ ಆಗದಂತೆ ನೋಡಿಕೊಳ್ಳುತ್ತೇವೆ. ಈ ಬಗ್ಗೆ ಯಾವುದೇ ಅನುಮಾನ ಬೇಡ' ಎಂದು ಡಿ.ಕೆ.ಶಿವಕುಮಾರ್ ಸ್ಪಷ್ಟಪಡಿಸಿದರು.