ಬಿಜೆಪಿ ಮುಖಂಡರ ಜೊತೆ ಕಾಣಿಸಿಕೊಂಡ ಅನರ್ಹ ಶಾಸಕ ಮಹೇಶ್ ಕುಮಟಳ್ಳಿ
ಅಥಣಿ, ಆಗಸ್ಟ್ 07: ಕಾಂಗ್ರೆಸ್ ಪಕ್ಷದಿಂದ ಗೆದ್ದು ನಂತರ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಪಕ್ಷಾಂತರ ನಿಷೇಧ ಕಾಯ್ದೆ ಅಡಿ ಅನರ್ಹತೆ ಶಿಕ್ಷೆಗೆ ಗುರಿಯಾಗಿರುವ ಮಹೇಶ್ ಕುಮಟಳ್ಳಿ ಅವರು ಇಂದು ಬಿಜೆಪಿ ಮುಖಂಡರ ಜೊತೆ ಕಾಣಿಸಿಕೊಂಡರು.
ಪ್ರವಾಹ ಪೀಡಿತರಿಗಾಗಿ ಅಥಣಿ ಕ್ಷೇತ್ರದ ರಡ್ಡೇರಹಟ್ಟಿಯಲ್ಲಿ ತೆರೆದಿದ್ದ ನಿರಾಶ್ರಿತರ ಕೇಂದ್ರಕ್ಕೆ ಇಂದು ಮಹೇಶ್ ಕುಮಟಳ್ಳಿ ಅವರು ಬಿಜೆಪಿ ಮುಖಂಡರ ಜೊತೆ ಆಗಮಿಸಿದ್ದರು.
ಪ್ರವಾಹ: ಮೃತರ ಕುಟುಂಬಕ್ಕೆ 5 ಲಕ್ಷ ಪರಿಹಾರ ಘೋಷಿಸಿದ ಯಡಿಯೂರಪ್ಪ
ಮೊದಲಿಗೆ ಕಾಂಗ್ರೆಸ್ ಪಕ್ಷದ ಮುಖಂಡರುಗಳು ನಿರಾಶ್ರಿತರ ಶಿಬಿರಕ್ಕೆ ಆಗಮಿಸಿ ಅಗತ್ಯ ವಸ್ತು ವಿತರಿಸಿ, ನಿರಾಶ್ರಿತರ ಕುಂದು ಕೊರತೆ ಆಲಿಸಿದರು. ಅದೇ ಸಮಯಕ್ಕೆ ಅಲ್ಲಿಗೆ ಬಿಜೆಪಿ ಮುಖಂಡ ಲಕ್ಷ್ಮಣ ಸವಧಿ ಅವರು ಪುತ್ರ ಚಿದಾನಂದ ಸವದಿ ಅವರೊಂದಿಗೆ ಆಗಮಿಸಿದರು.
ಅವರ ಆಗಮನದ ನಂತರ ಅನರ್ಹ ಶಾಸಕ ಮಹೇಶ್ ಕುಮಟಳ್ಳಿ ಅವರು ಅದೇ ನಿರಾಶ್ರಿತರ ಶಿಬಿರಕ್ಕೆ ಆಗಮಿಸಿದರು. ಅವರೊಂದಿಗೆ ಇನ್ನೂ ಕೆಲವು ಬಿಜೆಪಿ ಮುಖಂಡರುಗಳು ಸಹ ಇದ್ದರು. ಎಲ್ಲರೂ ಸೇರಿ ನಿರಾಶ್ರಿತರಿಗೆ ಹಣ್ಣು, ಬಿಸ್ಕೆಟ್, ಔಷಧಿಗಳನ್ನು ಹಂಚಿದರು.
ಮಹೇಶ್ ಕುಮಟಳ್ಳಿ ಅವರು ಬಿಜೆಪಿ ಮುಖಂಡರ ಜೊತೆ ಕಾಣಿಸಿಕೊಂಡಿರುವುದು ಕುತೂಹಲ ಕೆರಳಿಸಿದ್ದು, ಅವರು ಬಿಜೆಪಿ ಸೇರುತ್ತಾರೆ ಎಂಬ ಅನುಮಾನಕ್ಕೆ ಹೆಚ್ಚಿನ ಪುಷ್ಠಿ ನೀಡಿದೆ.
ಅನರ್ಹಗೊಂಡಿರುವ ಶಾಸಕರಲ್ಲಿ ಕೆಲವರು ಈಗಾಗಲೇ ಯಡಿಯೂರಪ್ಪ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಹಾಗಾಗಿ ಅವರಲ್ಲಿ ಬಹುತೇಕರು ಬಿಜೆಪಿ ಸೇರುತ್ತಾರೆ ಎಂಬುದು ಬಹುತೇಕ ಖಾತ್ರಿ ಆಗಿದೆ. ಈಗ ಮಹೇಶ್ ಕುಮಟಳ್ಳಿ ಅವರು ಬಹಿರಂಗವಾಗಿ ಬಿಜೆಪಿ ಮುಖಂಡರ ಜೊತೆ ಕಾಣಿಸಿಕೊಂಡಿರುವುದು ಇದಕ್ಕೆ ಇನ್ನಷ್ಟು ಪುಷ್ಠಿ ಒದಗಿಸಿದೆ.