ಧಾರವಾಡ-ಬೆಳಗಾವಿ ನೇರ ರೈಲು ಮಾರ್ಗ ಮತ್ತಷ್ಟು ವಿಳಂಬ?
ಬೆಳಗಾವಿ, ಅಕ್ಟೋಬರ್ 14; ಬಹುನಿರೀಕ್ಷಿತ ಧಾರವಾಡ-ಬೆಳಗಾವಿ ಹೊಸ ರೈಲು ಮಾರ್ಗ ಯೋಜನೆ ಮತ್ತಷ್ಟು ವಿಳಂಬವಾಗಲಿದೆ. ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವರಾಗಿದ್ದ ದಿ. ಸುರೇಶ್ ಅಂಗಡಿ ಕನಸಿನ ಯೋಜನೆ ಇದಾಗಿದೆ. ಬೆಳಗಾವಿ ಜಿಲ್ಲೆಯಲ್ಲಿನ ಭೂ ಸ್ವಾಧೀನ ಪ್ರಕ್ರಿಯೆಯ ಕಾರಣದಿಂದಾಗಿ ಯೋಜನೆ ವಿಳಂಬವಾಗಲಿದೆ.
ನೈಋತ್ಯ ರೈಲ್ವೆ ಧಾರವಾಡ-ಬೆಳಗಾವಿ ಹೊಸ ನೇರ ರೈಲು ಮಾರ್ಗ ಯೋಜನೆಯ ಅಲೈನ್ ಮೆಂಟ್ ಬದಲಾವಣೆ ಮತ್ತು ಮರು ಸಮೀಕ್ಷೆ ಕೈಗೊಳ್ಳಲಿದ್ದು, ಇದರಿಂದಾಗಿ ಯೋಜನೆ ವಿಳಂಬವಾಗಲಿದೆ ಎಂದು ಅಂದಾಜಿಸಲಾಗಿದೆ. ಹೊಸ ಸಮೀಕ್ಷೆ ಬಳಿಕ ಯೋಜನಾ ವೆಚ್ಚ 250 ಕೋಟಿ ಹೆಚ್ಚಾಗಲಿದೆ ಎಂದು ಅಂದಾಜಿಸಲಾಗಿದೆ. ಇದಕ್ಕೆ ಆಕ್ಷೇಪವೂ ವ್ಯಕ್ತವಾಗಿದೆ.
ಕರ್ನಾಟಕದಲ್ಲಿ ಶೀಘ್ರವೇ ಓಡಲಿದೆ; ವಂದೇ ಭಾರತ್ ಎಕ್ಸ್ಪ್ರೆಸ್ ರೈಲು
ಧಾರವಾಡ-ಬೆಳಗಾವಿ ನೇರ ರೈಲು ಮಾರ್ಗ ಯೋಜನೆ ಕುರಿತು ವಿಸ್ತೃತ ಯೋಜನೆ (ಡಿಪಿಆರ್) ಅಂತಿಮಗೊಂಡಿತ್ತು. 927 ಕೋಟಿ ವೆಚ್ಚದ ಯೋಜನಾ ವೆಚ್ಚಕ್ಕೆ ಕೇಂದ್ರ ಸರ್ಕಾರವೂ ಒಪ್ಪಿಗೆ ನೀಡಿತ್ತು. ಭೂ ಸ್ವಾಧೀನದ ವಿಚಾರದಲ್ಲಿ ಕೆಲವು ಬದಲಾವಣೆ ಆಗಬೇಕಿದ್ದು, ಆದ್ದರಿಂದ ಮರು ಸಮೀಕ್ಷೆ ನಡೆಸಲಾಗುತ್ತದೆ.
ಬೆಂಗಳೂರು-ಧಾರವಾಡ ನಡುವೆ ವಂದೇ ಭಾರತ್ ರೈಲು ಸಂಚಾರ
ರಾಜ್ಯಸಭಾ ಸದಸ್ಯರಾದ ಈರಣ್ಣ ಕಡಾಡಿ ಈ ಕುರಿತು ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ. "ರೈಲು ಮಾರ್ಗ ಯೋಜನೆಗೆ ಕೆಕೆ ಕೊಪ್ಪ ಬಳಿ ಹೆಚ್ಚುವರಿ ಭೂಮಿ ಕಳೆದುಕೊಳ್ಳಬೇಕಾಗುತ್ತದೆ. ಆದ್ದರಿಂದ ಪಕ್ಕದ ಸರ್ಕಾರಿ ಭೂಮಿ ಬಳಕೆ ಮಾಡಿಕೊಂಡರೆ ಆರ್ಥಿಕವಾಗಿಯೂ ಉಳಿತಾಯವಾಗುತ್ತದೆ. ರೈತರಿಗೂ ಅನುಕೂಲವಾಗುತ್ತದೆ. ಈ ಬಗ್ಗೆ ಮರುಪರಿಶೀಲನೆ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ" ಎಂದು ಹೇಳಿದ್ದಾರೆ.
ಧಾರವಾಡ-ಬೆಳಗಾವಿ ರೈಲು ಮಾರ್ಗಕ್ಕೆ 335 ಹೆಕ್ಟೇರ್ ಭೂ ಸ್ವಾಧೀನ
73 ಕಿ. ಮೀ. ಉದ್ದದ ನೇರ ಮಾರ್ಗ
73 ಕಿ. ಮೀ. ಉದ್ದದ ಧಾರವಾಡ-ಬೆಳಗಾವಿ ರೈಲು ಮಾರ್ಗದ ಯೋಜನೆಗೆ 827.78 ಎಕರೆ ಭೂಮಿ ಬೇಕಾಗಬಹುದು ಎಂದು ಅಂದಾಜಿಸಲಾಗಿದೆ. ಧಾರವಾಡ ಜಿಲ್ಲೆ ವ್ಯಾಪ್ತಿಯಲ್ಲಿ 255.93 ಎಕರೆ ಮತ್ತು ಬೆಳಗಾವಿ ಜಿಲ್ಲೆಯಲ್ಲಿ 601 ಎಕರೆ ಭೂಮಿ ಅಗತ್ಯವಿದೆ ಎಂದು ಅಂದಾಜಿಸಲಾಗಿತ್ತು. ಈಗ ನೈಋತ್ಯ ರೈಲ್ವೆ ಕೆಕೆ ಕೊಪ್ಪ ಬಳಿ ಮರು ಸಮೀಕ್ಷೆ ನಡೆಸಿದರೆ ಎಷ್ಟು ಭೂಮಿ ಅಗತ್ಯವಿದೆ? ಎಂದು ಸ್ಪಷ್ಟವಾದ ಚಿತ್ರಣ ಲಭ್ಯವಾಗಲಿದೆ.
ಮರು ಸಮೀಕ್ಷೆ ಏಕೆ?
ಬೆಳಗಾವಿ ತಾಲೂಕಿನ ಕೆಕೆ ಕೊಪ್ಪ ಗ್ರಾಮದ ವ್ಯಾಪ್ತಿಯಲ್ಲಿ ಧಾರವಾಡ-ಬೆಳಗಾವಿ ರೈಲು ಮಾರ್ಗ ಹಾದು ಹೋಗಲಿದೆ. ಇದಕ್ಕೆ ಸಾಕಷ್ಟು ಕೃಷಿ ಭೂಮಿ ಬಳಕೆಯಾಗಲಿದೆ. ಜನಪ್ರತಿನಿಧಿಗಳು ಕೃಷಿ ಭೂಮಿ ಕೈ ಬಿಟ್ಟು ಪಕ್ಕದ ಸರ್ಕಾರಿ ಭೂಮಿ ಬಳಕೆಗೆ ಸಲಹೆ ನೀಡಿದ್ದರು. ಇದರಿಂದ ರೈಲು ಮಾರ್ಗದ 5 ರಿಂದ 6 ಕಿ. ಮೀ. ಅಂತರ ಕಡಿಮೆಯಾಗಲಿದೆ ಎಂದು ಹೇಳಿದ್ದರು. ಇದಕ್ಕೆ ಸ್ಪಂದಿಸಿದ್ದ ರೈಲ್ವೆ ಇಲಾಖೆ ಮರು ಸಮೀಕ್ಷೆ ಮಾಡಿತ್ತು. ಆದರೆ ಒಟ್ಟು ಯೋಜನಾ ವೆಚ್ಚ ಸುಮಾರು 250 ಕೋಟಿ ಹೆಚ್ಚಾಗಲಿದೆ ಎಂದು ಹೇಳಿತ್ತು.
ಹೆಚ್ಚುವರಿ ವೆಚ್ಚಕ್ಕೆ ಮತ್ತೆ ಆಕ್ಷೇಪ
ಪ್ರಸ್ತಾವಿತ ರೈಲು ಮಾರ್ಗ 5 ರಿಂದ 6 ಕಿ. ಮೀ. ಕಡಿಮೆಯಾಗಲಿದೆ. ಕೃಷಿ ಬಳಕೆ ಮಾಡದ ಕಾರಣ ರೈತರಿಗೆ ಕೊಡಬೇಕಾದ ಪರಿಹಾರವೂ ಉಳಿತಾಯವಾಗಲಿದೆ. ಆದರೆ ಯೋಜನಾ ವೆಚ್ಚ 250 ಕೋಟಿ ಹೆಚ್ಚಾಗುವುದು ಹೇಗೆ? ಎಂದು ಆಕ್ಷೇಪ ವ್ಯಕ್ತಪಡಿಸಲಾಗಿದೆ. ಆದ್ದರಿಂದ ಮರು ಸಮೀಕ್ಷೆ ಕೈಗೊಂಡು ವೆಚ್ಚ ಹೆಚ್ಚಳವಾಗದಂತೆ ನೋಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಜನಪ್ರತಿನಿಧಿಗಳು ಸಲಹೆ ಕೊಟ್ಟಿದ್ದಾರೆ. ಇದಕ್ಕೆ ನೈಋತ್ಯ ರೈಲ್ವೆ ಒಪ್ಪಿಗೆ ಕೊಟ್ಟಿದ್ದು, ಪುನಃ ಸಮೀಕ್ಷೆ ಮಾಡುವುದಾಗಿ ಹೇಳಿದೆ. ಆದರೆ ಸಮೀಕ್ಷೆ ಕಾರ್ಯ ಇನ್ನೂ ಆರಂಭವಾಗಿಲ್ಲ.
ಯೋಜನೆ ಮತ್ತಷ್ಟು ವಿಳಂಬ
ಹೊಸ ಸಮೀಕ್ಷೆ ನಡೆದರೆ ಅದಕ್ಕೆ ತಕ್ಕಂತೆ ಮಾರ್ಗದ ವಿನ್ಯಾಸ ಮತ್ತು ಮರು ಅಲೈನ್ಮೆಂಟ್ ಆಗಬೇಕು. ಬಳಿಕ ಭೂ ಸ್ವಾಧೀನ ಪಡಿಸಿಕೊಳ್ಳಬೇಕು. ಬಳಿಕ ಭೂಮಿ ರೈಲ್ವೆಗೆ ಹಸ್ತಾಂತರಗೊಳ್ಳಬೇಕು. ಬಳಿಕ ಟೆಂಡರ್ ಕರೆದು ಕಾಮಗಾರಿ ಆರಂಭಿಸಬೇಕಿದೆ. ಧಾರವಾಡ ಜಿಲ್ಲೆಯಲ್ಲಿ ರೈಲು ಮಾರ್ಗಕ್ಕೆ ಬೇಕಾದ ಭೂ ಸ್ವಾಧೀನ ಸಮೀಕ್ಷೆ ಪೂರ್ಣಗೊಂಡಿದೆ. ಆದರೆ ಬೆಳಗಾವಿ ಜಿಲ್ಲೆಯಲ್ಲಿಯೇ ಸಮಸ್ಯೆ ಉಂಟಾಗಿದೆ. ಹೊಸ ಸಮೀಕ್ಷೆಯ ಕಾರಣ ಧಾರವಾಡ-ಬೆಳಗಾವಿ ರೈಲು ಯೋಜನರ ಮತ್ತಷ್ಟು ವಿಳಂಬವಾಗಲಿದೆ.