"ಡಿಕೆಶಿ ಅಸಮರ್ಥರು ಅನ್ನುವ ಕಾರಣಕ್ಕೆ ಸಿದ್ದು 2 ವರ್ಷ ಮಂತ್ರಿ ಮಾಡಿರಲಿಲ್ಲ''
ಬೆಳಗಾವಿ, ಅಕ್ಟೋಬರ್ 14: ಸಚಿವ ಶ್ರೀರಾಮುಲು ಅವರ ಖಾತೆ ಅದಲು ಬದಲಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಬೆಳಗಾವಿಯಲ್ಲಿ ಡಿಸಿಎಂ ಲಕ್ಷ್ಮಣ ಸವದಿ ಅವರು ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ.
ಸಚಿವ ಖಾತೆಗಳನ್ನು ಅದಲು ಬದಲು ಮಾಡುವ ಅಧಿಕಾರ ಮುಖ್ಯಮಂತ್ರಿಗಳಿದೆ, ಅವರು ಅದನ್ನು ಮಾಡಿದ್ದಾರೆ. ಪಕ್ಷದ ವರಿಷ್ಠರ ಜೊತೆಗೆ ಮಾತುಕತೆ ಮಾಡಿಕೊಂಡು ಈ ತೀರ್ಮಾನ ಮಾಡಿದ್ದಾರೆ ಎಂದು ಸಚಿವ ಖಾತೆ ಮರು ಹಂಚಿಕೆ ಮಾಡಿರುವುದನ್ನು ಡಿಸಿಎಂ ಲಕ್ಷ್ಮಣ್ ಸವದಿ ಸಮರ್ಥಿಸಿಕೊಂಡರು.
ಕೆಲವರು ನನಗೆ ಸ್ಲೋ ಪಾಯ್ಸನ್ ಕೊಡ್ತಿದ್ದಾರೆ: ಡಿಕೆಶಿಗೆ ಟಾಂಗ್ ಕೊಟ್ಟ ಎಚ್ಡಿಕೆ
ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ಹೇಳಿಕೆಯಲ್ಲಿ ಯಾವುದೇ ಹರುಳಿಲ್ಲ, ರಾಜಕೀಯವಾಗಿ ಹೇಳಿಕೆ ನೀಡಿದ್ದಾರೆ. ಇಲಾಖೆ ಬದಲಾದರೆ ಅಸಮರ್ಥರು ಅಂತಾ ಅಲ್ಲ ಎಂದರು.
ಒಳ್ಳೆಯ ಕೆಲಸ ಆಗಬೇಕು ಅಂತಾ ಸಿಎಂ ಕೆಲ ತೀರ್ಮಾನ ಮಾಡಿದ್ದಾರೆ. ಸಿದ್ದರಾಮಯ್ಯ ಸಿಎಂ ಆದಾಗ ಎರಡು ವರ್ಷ ಡಿ.ಕೆ ಶಿವಕುಮಾರ್ ಗೆ ಮಂತ್ರಿ ಮಂಡಲಕ್ಕೆ ತೆಗೆದುಕೊಂಡಿರಲಿಲ್ಲ. ಡಿಕೆಶಿ ಅಸಮರ್ಥರು ಅನ್ನುವ ಕಾರಣಕ್ಕೆ ಬಿಟ್ಟಿದ್ದರು ಅನ್ನುವುದನ್ನು ಹೇಳಲಿ. ಕೆಲವು ಸನ್ನಿವೇಶದಲ್ಲಿ, ಸಂದರ್ಭದಲ್ಲಿ ಕೆಲವೊಂದು ಬದಲಾವಣೆ ಆಗುತ್ತವೆ ಎಂದು ತಿರುಗೇಟು ನೀಡಿದರು.
ಬೆಂಗಳೂರಿನ ರಾಜರಾಜೇಶ್ವರಿ ನಗರ ಮತ್ತು ತುಮಕೂರಿನ ಶಿರಾ ಉಪ ಚುನಾವಣೆ ವಿಚಾರವಾಗಿ ಮಾತನಾಡಿದ ಡಿಸಿಎಂ ಸವದಿ, ಎರಡು ಕ್ಷೇತ್ರದಲ್ಲಿ ಗೆಲ್ಲುವಂತಹ ಅವಕಾಶ ನಮಗೆ ಜಾಸ್ತಿ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಉಪ ಚುನಾವಣೆಗಳಲ್ಲಿ ಆಡಳಿತ ಪಕ್ಷದ ಅಭ್ಯರ್ಥಿಯನ್ನು ಆರಿಸಿ ಕೊಡುವ ಮನೋಭಾವ ನಮ್ಮ ರಾಜ್ಯದ ಜನರಿಗಿದೆ. ಬಿಜೆಪಿ ಕಾರ್ಯಕರ್ತರ ಪಡೆ ದೊಡ್ಡದಿದೆ, ಮತದಾರರ ಒಲವು ಬಿಜೆಪಿ ಕಡೆಯಿದ್ದು, ಎರಡು ಕಡೆ ಗೆಲ್ಲಲು ಅವಕಾಶ ಇದೆ ಎಂದು ಬೆಳಗಾವಿಯಲ್ಲಿ ಡಿಸಿಎಂ ಲಕ್ಷ್ಮಣ ಸವದಿ ಹೇಳಿದರು.