ಕೊರೊನಾ ವಿರುದ್ಧ ಹೋರಾಡಿದವರಿಗೆ ಅಭಿನಂದಿಸಿದ ಡಿಸಿಎಂ
ಬೆಳಗಾವಿ, ಮೇ 6: ಕಳೆದ ನಾಲ್ಕು ದಿನಗಳಿಂದ 3500 ಕೆಎಸ್ಆರ್ಟಿಸಿ ಬಸ್ ಗಳಲ್ಲಿ ಸುಮಾರು ಒಂದು ಲಕ್ಷ ವಲಸೆ ಕಾರ್ಮಿಕರನ್ನು ಬೆಂಗಳೂರಿನಿಂದ ಅವರ ಊರುಗಳಿಗೆ ಕಳುಹಿಸಲಾಗಿದೆ ಎಂದು ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದ್ದಾರೆ.
ಇದೇ ವೇಳೆ ಸಾರಿಗೆ ಸಿಬ್ಬಂದಿಗಳು ಭಯಪಡದೇ ಕಾರ್ಯನಿರ್ವಹಿಸುತ್ತಿದ್ದಾರೆ. ಕೊರೊನಾ ವೈರಸ್ ತಡೆಗಟ್ಟಲು ತಮ್ಮ ಜೀವದ ಹಂಗನ್ನು ತೊರೆದು ವೈದ್ಯರು, ಆಶಾ ಕಾರ್ಯಕರ್ತೆಯರು, ಸಾರಿಗೆ ಸಿಬ್ಬಂದಿಗಳು ಕೆಲಸ ಮಾಡಿದ್ದಾರೆ. ಅಂತಹ ಸಿಬ್ಬಂದಿಗಳಿಗೆ ಅಭಿನಂದನೆ ಸಲ್ಲಿಸುವ ಕೆಲಸವನ್ನು ಸರ್ಕಾರದ ವತಿಯಿಂದ ಮಾಡಿದ್ದೇವೆ ಎಂದು ತಿಳಿಸಿದರು.
ನಮ್ಮ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಅನೇಕ ಸಂಘ-ಸಂಸ್ಥೆಗಳು ಬ್ರೆಡ್ ಹಾಗೂ ಆಹಾರಗಳನ್ನು ಸಾಕಷ್ಟು ಜನರಿಗೆ ಕೊಟ್ಟಿದ್ದಾರೆ. ಅವರಿಗೂ ಈ ಸಂದರ್ಭದಲ್ಲಿ ಅಭಿನಂದನೆ ಸಲ್ಲಿಸುತ್ತೇನೆ. ಮಾಧ್ಯಮ ಮಿತ್ರರು ಕೂಡಾ ಹಗಲಿರುಳು ತಮ್ಮ ಕರ್ತವ್ಯ ನಿರ್ವಹಿಸಿದ್ದಾರೆ. ಅವರಿಗೆ ನಾನು ಸರ್ಕಾರದ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಸಾರಿಗೆ ಸಿಬ್ಬಂದಿಗೆ ಸಂಬಳವಾಗದ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಾರಿಗೆ ಸಚಿವರೂ ಆದ ಲಕ್ಷ್ಮಣ ಸವದಿ, ""ಸಾರಿಗೆ ಇಲಾಖೆಯ ಸಿಬ್ಬಂದಿಗಳು ಆತಂಕಕ್ಕೆ ಒಳಗಾಗುವ ಅವಶ್ಯಕತೆ ಇಲ್ಲ. ನಾನು ಮುಖ್ಯಮಂತ್ರಿಗಳ ಬಳಿ ಮಾತನಾಡಿದ್ದೇನೆ. ನೇರವಾಗಿ ಸರ್ಕಾರದಿಂದ 326 ಕೋಟಿ ರುಪಾಯಿಯನ್ನು ಪಡೆದುಕೊಂಡು ಸಂಬಳ ಕೊಡುವ ಕೆಲಸ ಮಾಡುತ್ತೇವೆ. ಈಗಾಗಲೇ ಈ ಬಾಬ್ತಿನಲ್ಲಿ ಸರ್ಕಾರ ಶೇ.50 ರಷ್ಟು ಹಣ ಬಿಡುಗಡೆ ಮಾಡಿದೆ. ಮೂರು ನಾಲ್ಕು ದಿನಗಳಲ್ಲಿ ನೌಕರರ ಅವರ ಖಾತೆಗೆ ಹಣ ತಲುಪಲಿದೆ'' ಎಂದು ಮಾಹಿತಿ ನೀಡಿದರು.