ಮಾತಿನಲ್ಲೇ ಎಲ್ಲವನ್ನೂ ಮಾಡುವ ರಾಜಕಾರಣ ನಿಮ್ಮದು; ಡಿಸಿಎಂ ವಾಗ್ದಾಳಿ
ಬೆಳಗಾವಿ, ಅಕ್ಟೋಬರ್ 24: ಉತ್ತರ ಕರ್ನಾಟಕದಲ್ಲಿ ಭೀಕರ ಜಲಪ್ರಳಯವಾದರೂ ಪರಿಹಾರ ನೀಡಿಲ್ಲ ಎಂಬ ಕಾಂಗ್ರೆಸ್ ಆರೋಪದ ವಿಚಾರವಾಗಿ ಇಂದು ಬೆಳಗಾವಿಯಲ್ಲಿ ಪ್ರತಿಕ್ರಿಯೆ ನೀಡಿರುವ ಡಿಸಿಎಂ ಅಶ್ವಥ್ ನಾರಾಯಣ್, "ವಿಪಕ್ಷದವರು ತಮ್ಮ ಅಧಿಕಾರಾವಧಿಯಲ್ಲಿ ಉತ್ತಮವಾದ ಕಾರ್ಯ ನಿರ್ವಹಿಸಿಲ್ಲ. ಅತಿವೃಷ್ಟಿ, ಅನಾವೃಷ್ಟಿಯಲ್ಲಿ ಜನರ ಮಧ್ಯೆ ಬಂದು ಕೆಲಸ ಮಾಡಿಲ್ಲ" ಎಂದಿದ್ದಾರೆ.
ಬೆಳಗಾವಿಗೆ ಇಂದು ಭೇಟಿ ನೀಡಿರುವ ಅವರು, ಮಾಧ್ಯಮದವರೊಂದಿಗೆ ಮಾತನಾಡಿ, "ಎಲ್ಲದರಲ್ಲೂ ರಾಜಕೀಯ ಮಾಡುವ ಹವ್ಯಾಸ, ಅಭ್ಯಾಸ ಕಾಂಗ್ರೆಸ್ಗಿದೆ. ಮಾತಿನಲ್ಲೇ ಎಲ್ಲವನ್ನೂ ಮಾಡುವಂಥ ರಾಜಕಾರಣವನ್ನು ಅವರು ಮಾಡುತ್ತಾ ಬಂದಿದ್ದಾರೆ. ನಮ್ಮ ಸರ್ಕಾರ ಜನರ ಕೈ ಹಿಡಿಯುವ ಕೆಲಸ ಮಾಡುತ್ತಿದೆ. ಮನೆ ಬಿದ್ದವರಿಗೆ, ಬೆಳೆ ಹಾನಿಯಾದವರಿಗೆ ಪರಿಹಾರ ನೀಡುವ ಕೆಲಸವಾಗುತ್ತಿದೆ. ಸಿಎಂ, ಸಂಬಂಧಪಟ್ಟ ಸಚಿವರು, ಎಲ್ಲಾ ಜಿಲ್ಲಾಧಿಕಾರಿಗಳಿಂದ ಉತ್ತಮ ಕೆಲಸವಾಗುತ್ತಿದೆ. ಆದರೆ ವಿಪಕ್ಷಗಳು ಸುಮ್ಮನೆ ರಾಜಕೀಯ ಮಾಡುತ್ತಿದ್ದಾರೆ" ಎಂದು ಟೀಕಿಸಿದರು.
ಬಿಬಿಎಂಪಿಯಿಂದ ಮತ್ತಷ್ಟು ಕೆಲಸ ಆಗಬೇಕು
ಬೆಂಗಳೂರಿನಲ್ಲಿ ಭಾರೀ ಮಳೆಯಿಂದ ಉಂಟಾಗಿರುವ ಅವಾಂತರಗಳ ಕುರಿತು ಪ್ರಸ್ತಾಪಿಸಿದ ಅವರು, "ಬಿಬಿಎಂಪಿ ಸಾಕಷ್ಟು ಕೆಲಸ ಮಾಡಿದೆ. ಆದರೆ ಅದು ಸಾಲಲ್ಲ, ಇನ್ನೂ ಕೆಲಸಗಳು ಆಗಬೇಕು. ನಗರ ಪ್ರದೇಶದಲ್ಲಿ ಬಯಲು ಪ್ರದೇಶ ಇರಲ್ಲ, ಕಟ್ಟಡ ನಿರ್ಮಾಣವಾಗಿರುತ್ತೆ. ಹಾಗಾಗಿ ನಗರದಲ್ಲಿ ಮಳೆ ಬಂದಾಗ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿರುತ್ತದೆ. ರಾಜಕಾಲುವೆ, ಕೆರೆಗಳ ಅಕ್ಕಪಕ್ಕ ಸಾಕಷ್ಟು ಸಮಸ್ಯೆ ಆಗಿರುತ್ತದೆ. ಬಿಬಿಎಂಪಿ ಇನ್ನಷ್ಟು ಕೆಲಸ ಮಾಡಬೇಕು. ಮಳೆ ನೀರು ಹರಿವನ್ನು ಅಲ್ಲಲ್ಲಿ ತಡೆಗಟ್ಟಬೇಕು. ಹರಿಯೋಕೆ ಅವಕಾಶ ಕೊಡಬಾರದು. ಮಳೆನೀರು ಶೇಖರಣೆ ಆದಾಗ ಮಾತ್ರ ಸಮಸ್ಯೆ ಬಗೆಹರಿಸಲು ಸಾಧ್ಯ. ಈ ನಿಟ್ಟಿನಲ್ಲಿ ಎಲ್ಲಾ ಪ್ರಯತ್ನಗಳು ಪ್ರಾರಂಭವಾಗಿವೆ. ಮುಂದಿನ ದಿನಗಳಲ್ಲಿ ಶಾಶ್ವತ ಪರಿಹಾರಕ್ಕೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.
ಡಿಸಿಎಂ ಡಾ. ಅಶ್ವಥ್ ನಾರಾಯಣ್ ಯಾರು? 'ಮೀರ್ ಸಾದಿಕ್' ಅಲ್ವೇ?
"ಎಲ್ಲದಕ್ಕೂ ವಿರೋಧಿಸೋದು ಕಾಂಗ್ರೆಸ್ ಪಕ್ಷಕ್ಕೆ ಅಭ್ಯಾಸ"
ರಾಜ್ಯದಲ್ಲಿ ಕಾಲೇಜು ಆರಂಭದ ಕುರಿತು ಮಾಜಿ ಸಿಎಂ ಸಿದ್ದರಾಮಯ್ಯ ವಿರೋಧ ವ್ಯಕ್ತಪಡಿಸುತ್ತಿರುವ ಕುರಿತು ಮಾತನಾಡಿದ ಅವರು, "ಅಸೂಕ್ಷ್ಮವಾಗಿ, ಯೋಚನೆ ಮಾಡದೇ ಅವರು ಹೇಳಿಕೆ ಕೊಟ್ಟಿದ್ದಾರೆ. ಈ ವಿಚಾರದಲ್ಲಿ ಸಿದ್ದರಾಮಯ್ಯ ಹೇಳಿಕೆ ಕೊಡೋದು ಅವರ ಸ್ಥಾನಕ್ಕೆ ಸೂಕ್ತವಲ್ಲ. ಎಲ್ಲದಕ್ಕೂ ವಿರೋಧಿಸೋದು ಕಾಂಗ್ರೆಸ್ ಗೆ ಅಭ್ಯಾಸವಾಗಿದೆ. ವಿರೋಧಿಸಬೇಕು ಅಂತಾ ವಿರೋಧಿಸುತ್ತಾರೆಯೇ ಹೊರತು ಸಮಸ್ಯೆಗೆ ಪರಿಹಾರ ಏನು ಅಂತ ನೋಡಲ್ಲ. ವಿದ್ಯಾರ್ಥಿಗಳ ಭವಿಷ್ಯ, ಅವರ ಕಷ್ಟ ಸುಖಗಳನ್ನು ಅರಿತುಕೊಳ್ಳಬೇಕು ಎಂದು ವಾಗ್ದಾಳಿ ನಡೆಸಿದರು.
"ಕೊರೊನಾ ಲಸಿಕೆ ಫ್ರೀ" ಭರವಸೆ ಸಮರ್ಥಿಸಿಕೊಂಡ ಡಿಸಿಎಂ
ಕರ್ನಾಟಕದ ಜನರಿಗೆ ಉಚಿತ ಕೊರೊನಾ ಲಸಿಕೆ ಕೊಡಿಸುವ ಧಮ್ ಇದೆಯಾ ಎಂಬ ಸಿದ್ದರಾಮಯ್ಯ ಟ್ವೀಟ್ ವಿಚಾರವಾಗಿಯೂ ಪ್ರಸ್ತಾಪಿಸಿ, "ಕೊರೊನಾ ಲಸಿಕೆ ಬಂದಾಗ ಈ ವಿಚಾರದಲ್ಲಿ ಸಿಎಂ ಬಿಎಸ್ ವೈ ಘೋಷಣೆ ಮಾಡ್ತಾರೆ. ಇಂದು ಕೊರೊನಾ ವಿಚಾರದಲ್ಲಿ ಎಲ್ಲವೂ ಫ್ರೀಯಾಗಿಯೇ ನಡೆಯುತ್ತಿದೆ. ಸರ್ಕಾರದಿಂದಲೇ ಎಲ್ಲಾ ರೀತಿಯ ಉಚಿತ ಆರೋಗ್ಯ ವ್ಯವಸ್ಥೆ ಮಾಡಲಾಗುತ್ತಿದೆ. ಮುಂದೆ ಕೊರೊನಾ ಲಸಿಕೆ ಬಂದಾಗ ಸರ್ಕಾರದಿಂದ ಕೊಡುವ ಕೆಲಸ ಆಗುತ್ತದೆ ಎಂದರು.
ಹಳ್ಳಿ ಹಳ್ಳಿಗೂ ಟೆಲಿ ಮೆಡಿಸನ್ ಸೇವೆ: ಡಿಸಿಎಂ ಅಶ್ವಥ್ ನಾರಾಯಣ
ಇದೇ ಸಂದರ್ಭ, ಬಿಹಾರ ಚುನಾವಣೆಯ ಬಿಜೆಪಿ ಪ್ರಣಾಳಿಕೆಯಲ್ಲಿ ಕೊರೊನಾ ಲಸಿಕೆ ಫ್ರೀ ನೀಡುವ ಭರವಸೆ ವಿಚಾರವನ್ನು ಸಮರ್ಥಿಸಿಕೊಂಡ ಅವರು, "ಅದರಲ್ಲಿ ತಪ್ಪೇನಿಲ್ಲ. ನಾವು ಮಾಡೋಕೆ ತಯಾರಿದ್ದೀವಿ ಅಂತ ಜನರಿಗೆ ವಿಶ್ವಾಸ ಮೂಡಿಸಿದ್ದಾರೆ. ನಮ್ಮ ಸರ್ಕಾರದಲ್ಲಿ ಉಚಿತ ಲಸಿಕೆ ಕೊಡ್ತೀವಿ ಅಂತಾ ಹೇಳಿದ್ದಾರೆ. ಫ್ರೀ ಲಸಿಕೆ ಕೊಡ್ತಾರೋ ಬಿಡ್ತಾರೋ ಅಂತ ಜನರಿಗೆ ಗೊತ್ತಿರಲ್ಲ. ಅದನ್ನು ಕೊಡಲು ನಾವು ಸಿದ್ಧ ಅಂತ ಹೇಳುತ್ತಿದ್ದಾರೆ ಅಷ್ಟೆ" ಎಂದರು.
"ಯಾವುದೇ ಕಾರಣಕ್ಕೂ ಭ್ರಷ್ಟಾಚಾರಕ್ಕೆ ಅವಕಾಶವಿಲ್ಲ"
ಶಾಸಕರು ಲಂಚ ನೀಡಿ ಅನುದಾನ ತರುವ ಸ್ಥಿತಿ ಇದೆ ಎಂಬ ಸಿದ್ದರಾಮಯ್ಯ ಆರೋಪ ವಿಚಾರವಾಗಿ ಪ್ರತಿಕ್ರಿಯಿಸಿ, "ಭ್ರಷ್ಟಾಚಾರ ಎಲ್ಲಾ ಕಾಲದಲ್ಲಿತ್ತು ಅಂತ ಹೇಳಿ ಭ್ರಷ್ಟಾಚಾರ ಸ್ವೀಕರಿಸಿಬಿಟ್ಟಿದ್ದಾರೆ. ಭ್ರಷ್ಟಾಚಾರ ಸ್ವೀಕರಿಸಿ ಸಮಾಜದಲ್ಲಿ ಬೆಳೆದುಬಿಟ್ಟಿದೆ ಎಂದು ಬಿಂಬಿಸುವ ಕೆಲಸವನ್ನು ಪ್ರತಿಪಕ್ಷಗಳು ಮಾಡುತ್ತಿವೆ. ಪ್ರತಿಪಕ್ಷಗಳು ಭ್ರಷ್ಟಾಚಾರ ವ್ಯವಸ್ಥೆಯಲ್ಲಿ ಬದುಕಿ ಬಂದಂಥವರು. ನಮ್ಮ ಪಕ್ಷ ಭ್ರಷ್ಟಾಚಾರ ರಹಿತ ಸಮಾಜ ಕಟ್ಟಲು ತಂತ್ರಜ್ಞಾನ ತಂದಿದೆ. ಜಿಎಸ್ ಟಿ ಆಧಾರ್ ತಂದಿದೆ, ಇನ್ಕಮ್ ಟ್ಯಾಕ್ಸ್ ನಲ್ಲಿ ಸುಧಾರಣೆ ತಂದಿದೆ. ಆಧಾರ್ ಲಿಂಕ್ ಇಲ್ಲದ ಪಾನ್ ಕಾರ್ಡ್ ವಿಥ್ ಡ್ರಾ ಮಾಡಿದ್ದೇವೆ. ಈ ರೀತಿ ಎಲ್ಲಾ ಹಂತದಲ್ಲೂ ಭ್ರಷ್ಟಾಚಾರ ರಹಿತ ಸಮಾಜ ಕಟ್ಟಲು ಪ್ರಯತ್ನ ಮಾಡುತ್ತಿದ್ದೇವೆ. ಯಾವುದೇ ಕಾರಣಕ್ಕೂ ಭ್ರಷ್ಟಾಚಾರ ಬೆಳೆಯುವ ಅವಕಾಶ ಕೊಡಲ್ಲ" ಎಂದು ಹೇಳಿದರು.