ಡಿಸಿಎಂ ಲಕ್ಷ್ಮಣ್ ಸವದಿ ಶಸ್ತ್ರತ್ಯಾಗದ ಹಿಂದಿದೆಯಾ ಮಾಸ್ಟರ್ ಪ್ಲಾನ್?
ಬೆಳಗಾವಿ, ನವೆಂಬರ್ ೪: ಇದೇ ನ.6 ರಂದು ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರ (ಡಿಸಿಸಿ) ಬ್ಯಾಂಕ್ ನಿರ್ದೇಶಕ ಸ್ಥಾನಕ್ಕೆ ಚುನಾವಣೆ ನಡೆಯಲಿದ್ದು, ಡಿಸಿಎಂ ಲಕ್ಷ್ಮಣ್ ಸವದಿ ಶಸ್ತ್ರತ್ಯಾಗ ಮಾಡಿದರಾ ಎಂಬ ಅನುಮಾನ ಮೂಡಿದೆ.
ಡಿಸಿಎಂ ಲಕ್ಷ್ಮಣ್ ಸವದಿ ಶಸ್ತ್ರತ್ಯಾಗದ ಹಿಂದೆ ಯಾವುದಾದರೂ ಮಾಸ್ಟರ್ ಪ್ಲ್ಯಾನ್ ಇದೆಯೇ ಎಂದು ಬೆಳಗಾವಿ ರಾಜಕೀಯ ವಲಯದಲ್ಲಿ ಕೇಳಿಬಂದಿದೆ. ಮುಖ್ಯಮಂತ್ರಿ ಕನಸು ಹೊತ್ತು ಸ್ಥಳೀಯ ನಾಯಕರ ಮನಗೆಲ್ಲಲು ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಶಸ್ತ್ರತ್ಯಾಗ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ; 3 ವರ್ಷಗಳ ನಂತರ ಒಂದಾದ ನಾಯಕರು
ಡಿಸಿಸಿ ಬ್ಯಾಂಕ್ ಚುನಾವಣೆ ವಿಚಾರವಾಗಿ ಬೆಳಗಾವಿ ಬಿಜೆಪಿಯಲ್ಲಿ ಎರಡು ಬಣಗಳಾಗಿದ್ದವು, ಡಿಸಿಎಂ ಲಕ್ಷ್ಮಣ್ ಸವದಿ ಹಾಗೂ ಕತ್ತಿ, ಜಾರಕಿಹೊಳಿ ಬ್ರದರ್ಸ್ ಮಧ್ಯೆ ಭಾರಿ ಪೈಪೋಟಿ ಇತ್ತು. ಈ ವೇಳೆ ನಿರ್ದೇಶಕರ ಅವಿರೋಧ ಆಯ್ಕೆಗೆ ಶ್ರಮಿಸುವಂತೆ ಆರ್ಎಸ್ಎಸ್, ಬಿಜೆಪಿ ವರಿಷ್ಠರಿಂದ ಬೆಳಗಾವಿ ಬಿಜೆಪಿ ನಾಯಕರಿಗೆ ಸಲಹೆ ನೀಡಿದ್ದರು.
ಅವಿರೋಧ ಆಯ್ಕೆಗೆ ಶ್ರಮಿಸುತ್ತಿದ್ದಾರೆ
ಡಿಸಿಎಂ ಲಕ್ಷ್ಮಣ್ ಸವದಿ ಅವರು ಕಳೆದ ಒಂದು ವರ್ಷದಿಂದ ಡಿಸಿಸಿ ಬ್ಯಾಂಕ್ ಚುನಾವಣೆಗೆ ತಯಾರಿ ನಡೆಸಿದ್ದು, ಪಕ್ಷದ ವರಿಷ್ಠರ ಸಲಹೆ ಮೇರೆಗೆ ಎಲ್ಲರನ್ನೂ ಒಗ್ಗೂಡಿಸಿ ಅವಿರೋಧ ಆಯ್ಕೆಗೆ ಶ್ರಮಿಸುತ್ತಿದ್ದಾರೆ. ಜಾರಕಿಹೊಳಿ, ಕತ್ತಿ ಬ್ರದರ್ಸ್ ಸೇರಿ ಎಲ್ಲಾ ನಾಯಕರು ಸೇರಿ ಒಗ್ಗಟ್ಟಿನ ಜಪ ಮಾಡುತ್ತಿದ್ದು, ಸ್ವಪಕ್ಷದಲ್ಲಿರುವ ವಿರೋಧಿಗಳ ಮನಗೆಲ್ಲಲು ಸವದಿ ಹಿಂದೆ ಸರಿದರಾ ಎಂಬ ಪ್ರಶ್ನೆ ಮೂಡಿದೆ.
ತಾನೊಬ್ಬ ಪಕ್ಷ ನಿಷ್ಠ ಪ್ರಭಾವಿ ನಾಯಕ
ಎಲ್ಲರನ್ನು ಒಟ್ಟಾಗಿ, ಒಂದೇ ವೇದಿಕೆಯಲ್ಲಿ ಸೇರಿಸಿ ವರಿಷ್ಠರಿಗೆ ಸಂದೇಶ ರವಾನಿಸಿದ್ದು, ಪರೋಕ್ಷವಾಗಿ ತಾನೊಬ್ಬ ಪಕ್ಷ ನಿಷ್ಠ ಪ್ರಭಾವಿ ನಾಯಕ ಎನ್ನುವ ಸಂದೇಶ ರವಾನಿಸಿದ್ದಾರೆ. ಡಿಸಿಎಂ ಲಕ್ಷ್ಮಣ್ ಸವದಿ ಚುನಾವಣೆಯಿಂದ ಹಿಂದೆ ಸರಿದಿರುವ ಬಗ್ಗೆ ಜಿಲ್ಲಾ ರಾಜಕೀಯ ವಲಯದಲ್ಲಿ ಬಿರುಸಿನ ಚರ್ಚೆಯಾಗುತ್ತಿದೆ.
ರಮೇಶ್ ವಿರುದ್ಧ ಸತೀಶ್ ಜಾರಕಿಹೊಳಿ ಆಕ್ರೋಶ
ಡಿಸಿಸಿ ಬ್ಯಾಂಕ್ ನಿರ್ದೇಶಕ ಚುನಾವಣೆಯಲ್ಲಿ ಎಂಇಎಸ್ ನಾಯಕನಿಗೆ ಬಿಜೆಪಿ ಬೆಂಬಲ ವಿಚಾರವಾಗಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಪ್ರತಿಕ್ರಿಯಿಸಿದ್ದಾರೆ.
ಎಂಇಎಸ್ ರಾಜ್ಯಕ್ಕೆ ಯಾವ ರೀತಿ ಅನ್ಯಾಯ ಮಾಡಿದೆ ಅದನ್ನು ನೋಡುವ ಪ್ರಯತ್ನವನ್ನು ಸಚಿವರು ಮಾಡಲಿ ಎಂದು ರಮೇಶ್ ಜಾರಕಿಹೊಳಿ ವಿರುದ್ಧ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಆಕ್ರೋಶ ವ್ಯಕ್ತಪಡಿಸಿದರು.
ಪಕ್ಷಕ್ಕೆ ಆಹ್ವಾನಿಸುವ ಮುನ್ನ 10 ಸಾರಿ ಯೋಚನೆ
ಬೆಳಗಾವಿ ಜಿಲ್ಲೆ ಘಟಪ್ರಭಾದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಮಾತನಾಡಿ, ಕರಾಳ ದಿನದಲ್ಲಿ ಭಾಗಿಯಾದವರನ್ನು ರಾಷ್ಟ್ರೀಯ ಪಕ್ಷವೊಂದು ಆಹ್ವಾನಿಸುತ್ತಿದೆ. ಎಂಇಎಸ್ ನವರು ಕರ್ನಾಟಕದ ವಿರುದ್ಧ ಹೋರಾಟ ಮಾಡುತ್ತಲೇ ಬಂದಿದ್ದಾರೆ ಎಂದು ತಿಳಿಸಿದರು. ಕರ್ನಾಟಕದ ನಿಲುವು, ಭಾಷೆ ವಿರೋಧ ಮಾಡಿಕೊಂಡು ಬಂದಿರುವವರನ್ನು ಪಕ್ಷಕ್ಕೆ ಆಹ್ವಾನಿಸುವ ಮುನ್ನ 10 ಸಾರಿ ಯೋಚನೆ ಮಾಡಬೇಕು. ಅವರ ಪಕ್ಷದ ನಿರ್ಧಾರ ನಾವು ಏನು ಹೇಳಕ್ಕಾಗಲ್ಲ. ಆದರೂ ಎಂಇಎಸ್ ನವರು ಕರ್ನಾಟಕಕ್ಕೆ ಮಾಡಿದ ಅನ್ಯಾಯವನ್ನು ನೋಡಲಿ ಎಂದು ಬೆಳಗಾವಿ ಜಿಲ್ಲೆ ಘಟಪ್ರಭಾದಲ್ಲಿ ಸತೀಶ್ ಜಾರಕಿಹೊಳಿ ಹೇಳಿದರು.