ನ.1ರಂದು ಕರಾಳ ದಿನಾಚರಣೆಗೆ ಮುಂದಾದ ಎಂಇಎಸ್: 'ಮಹಾ' ಸರ್ಕಾರದಿಂದ ಬೆಂಬಲ
ಬೆಳಗಾವಿ, ಅಕ್ಟೋಬರ್ 30: ನವೆಂಬರ್ 1ರಂದು ಕರ್ನಾಟಕ ರಾಜ್ಯೋತ್ಸವವನ್ನು ವಿರೋಧಿಸಿ ಎಂಇಎಸ್ ನ ಕರಾಳ ದಿನಾಚರಣೆಗೆ ಮಹಾರಾಷ್ಟ್ರ ಸರ್ಕಾರ ಬೆಂಬಲ ನೀಡಿದೆ.
ಗಡಿ ಜಿಲ್ಲೆ ಬೆಳಗಾವಿಯಲ್ಲಿ ಪ್ರತಿ ವರ್ಷ ಕರ್ನಾಟಕ ರಾಜ್ಯೋತ್ಸವದಂದು ಕರಾಳ ದಿನ ಆಚರಿಸುತ್ತ ಬಂದಿರುವ ಎಂಇಎಸ್ ನಿರ್ಧಾರಕ್ಕೆ ಮಹಾರಾಷ್ಟ್ರದ ಸಂಪುಟ ಸಭೆ ಬೆಂಬಲ ನೀಡಿದೆ ಎನ್ನಲಾಗಿದೆ.
ರಂಗೇರಿದ ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ: ಪ್ರತಿಷ್ಠಿತರ ಗದ್ದುಗೆ ಗುದ್ದಾಟ
ನ.1ರಂದು ಕಪ್ಪು ಪಟ್ಟಿ ಧರಿಸಿ ಮಹಾರಾಷ್ಟ್ರ ಸಚಿವರಿಂದ ಕರಾಳ ದಿನ ಆಚರಿಸಲಾಗುವುದು ಎಂದು ಮುಂಬೈನಲ್ಲಿ ಗಡಿ ಉಸ್ತುವಾರಿ ಸಚಿವ ಏಕನಾಥ ಶಿಂಧೆ ಹೇಳಿದ್ದಾರೆ.
"ಮರಾಠಿ ಭಾಷಿಕರ ಮೇಲೆ ಕರ್ನಾಟಕ ಸರ್ಕಾರ ನಿರಂತರ ಅನ್ಯಾಯ, ದಬ್ಬಾಳಿಕೆ ಮಾಡುತ್ತಿದೆ. ಮರಾಠಿ ಭಾಷಿಕರ ಧ್ವನಿ ಹತ್ತಿಕ್ಕುವ ಪ್ರಯತ್ನ ನಡೆಯುತ್ತಿದೆ. ಗಡಿ ವಿವಾದ ಸಂಬಂಧ ಮಹಾರಾಷ್ಟ್ರ ಸರ್ಕಾರದಿಂದ ಕಾನೂನು ಹೋರಾಟ ನಡೆಯಲಿದೆ' ಎಂದು ಉದ್ಧಟನ ತೋರಿದ್ದಾರೆ.
ಮಹಾರಾಷ್ಟ್ರ ಸರ್ಕಾರ ತನ್ನ ಕಾನೂನು ಹೋರಾಟ ಮುಂದುವರೆಸುತ್ತದೆ. ಆದಷ್ಟು ಬೇಗ ಮರಾಠಿ ಭಾಷಿಕರಿಗೆ ನ್ಯಾಯ ಸಿಗುವ ವಿಶ್ವಾಸವಿದ್ದು, ಮಂತ್ರಿಮಂಡಲ ಎಲ್ಲಾ ಸದಸ್ಯರು ಕರಾಳ ದಿನಾಚರಣೆಗೆ ಬೆಂಬಲ ನೀಡುತ್ತೇವೆ ಎಂದು ಹೇಳಿದರು.
ನವೆಂಬರ್ ೧ರಂದು ಎಲ್ಲಾ ಸಚಿವರು ಕಪ್ಪುಪಟ್ಟಿ ಧರಿಸಿ ಕೆಲಸ ಮಾಡುತ್ತೇವೆ, ಮರಾಠಿ ಭಾಷಿಕರ ಹೋರಾಟಕ್ಕೆ ನಮ್ಮ ಸಂಪೂರ್ಣ ಬೆಂಬಲ ಇದೆ ಎಂದು ಗಡಿ ಉಸ್ತುವಾರಿ ಮಂತ್ರಿಗಳಾದ ಏಕನಾಥ ಶಿಂಧೆ, ಛಗನ್ ಭುಜಬಲ್ ಕರ್ನಾಟಕದ ಮರಾಠಿ ಭಾಷಿಕರನ್ನುದ್ದೇಶಿಸಿ ಪತ್ರ ಬರೆದಿರುವ ಸಚಿವದ್ವಯರಾಗಿದ್ದಾರೆ.
ಮಹಾರಾಷ್ಟ್ರ ಸರ್ಕಾರದ ಸಚಿವರ ಉದ್ಧಟತನಕ್ಕೆ ಕನ್ನಡ ಸಂಘಟನೆಗಳ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ನವೆಂಬರ್ 1ರಂದು ಎಂಇಎಸ್ ಕರಾಳ ದಿನ ಆಚರಣೆಗೆ ಅನುಮತಿ ನೀಡದಂತೆ ಕನ್ನಡ ಸಂಘಟನೆಗಳು ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿವೆ.