ಬೆಳಗಾವಿ: ಸೆಕ್ಷನ್ 144 ಉಲ್ಲಂಘನೆ ಮಾಡಿ ಸಂಗೊಳ್ಳಿ ರಾಯಣ್ಣ ಹೊಸ ಪ್ರತಿಮೆ ಸ್ಥಾಪಿಸಿದ ಜನತೆ
ಬೆಳಗಾವಿ, ಡಿಸೆಂಬರ್ 20: ಬೆಳಗಾವಿಯ ಎರಡು ಕಡೆ ಸಂಗೊಳ್ಳಿ ರಾಯಣ್ಣನ ಪ್ರತಿಮೆಗಳನ್ನು ವಿರೂಪಗೊಳಿಸಲಾಗಿದ್ದು ಇದರ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿದೆ. ಕರ್ನಾಟಕ ರಕ್ಷಣಾ ವೇದಿಕೆ ಇಂದು ಬೆಳಗಾವಿಯಲ್ಲಿ ಪ್ರತಿಭಟನೆಗೆ ಕರೆ ನೀಡಿದೆ. ಜನರ ಆಕ್ರೋಶ ಹೆಚ್ಚಾಗುತ್ತಿರುವ ಹಿನ್ನೆಲೆಯಿಂದಾಗಿ ಪ್ರಸ್ತುತ ಬೆಳಗಾವಿ ನಗರದಲ್ಲಿ ಡಿಸೆಂಬರ್ 22ರ ಬೆಳಗ್ಗೆ 6 ಗಂಟೆ ತನಕ CrPC ಸೆಕ್ಷನ್ 144 ಜಾರಿಗೊಳಿಸಲಾಗಿದೆ. ಆದರೆ ಜನರು ನಿಷೇಧಾಜ್ಞೆಯನ್ನು ಉಲ್ಲಂಘನೆ ಮಾಡಿದ್ದು, ಸಂಗೊಳ್ಳಿ ರಾಯಣ್ಣರ ಹೊಸ ಪ್ರತಿಮೆಯನ್ನು ಸ್ಥಾಪನೆ ಮಾಡಿದ್ದಾರೆ.
ಶನಿವಾರ ನಸುಕಿನ ಅವಧಿಯಲ್ಲಿ ದುಷ್ಕರ್ಮಿಗಳು ಬೆಳಗಾವಿ ನಗರದ ಅನಗೋಳದಲ್ಲಿ ಸಂಗೊಳ್ಳಿ ರಾಯಣ್ಣನ ಪ್ರತಿಮೆಯನ್ನು ಭಗ್ನಗೊಳಿಸಿದ್ದಾರೆ. ರಾಯಣ್ಣನ ಪ್ರತಿಮೆಯ ಡಾಲ್ ಮತ್ತು ಖಡ್ಗ ಮುರಿದು ಚೆಲ್ಲಾಡಲಾಗಿದೆ. ಮುಖವನ್ನು ವಿರೂಪಗೊಳಿಸಲಾಗಿದೆ. ಹಾಗೆಯೇ ತಾಲೂಕಿನ ಗ್ರಾಮೀಣ ಭಾಗದ ಸುಳಗಾ ಗ್ರಾಮದಲ್ಲೂ ಕಿಡಿಗೇಡಿಗಳು ರಾಯಣ್ಣನ ಚಿತ್ರಕ್ಕೆ ಬಣ್ಣ ಎರಚಿ ವಿಕೃತಿ ಮೆರೆದಿದ್ದಾರೆ. ಇದರಿಂದ ರಾಯಣ್ಣ ಅಭಿಮಾನಿಗಳು ಹಾಗೂ ಕನ್ನಡಪರ ಸಂಘಟನೆಯವರು ಆಕ್ರೋಶಗೊಂಡಿದ್ದಾರೆ.
ಸಂಗೊಳ್ಳಿ ರಾಯಣ್ಣ ಪ್ರತಿಮೆ ವಿರೂಪ: ಬೆಳಗಾವಿಯತ್ತ 10,000ಕ್ಕೂ ಹೆಚ್ಚು ಕರವೇ ಕಾರ್ಯಕರ್ತರ ರ್ಯಾಲಿ
"ಕರುನಾಡಿನ ಆದರ್ಶ ಪುರುಷ, ಸ್ವಾತಂತ್ರ್ಯ ಹೋರಾಟಗಾರ, ಬ್ರಿಟಿಷರಿಂದ ಗಲ್ಲಿಗೇರಿಸಲ್ಪಟ್ಟ ಹುತಾತ್ಮ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆಯನ್ನು ವಿರೂಪಗೊಳಿಸಿದ ಎಂಇಎಸ್, ಶಿವಸೇನೆ ಎಂಬ ಭಯೋತ್ಪಾದಕ ಗುಂಪುಗಳ ವಿರುದ್ಧ ನಿರ್ಣಾಯಕ ಹೋರಾಟಕ್ಕೆ ಕರವೇ ಕಾರ್ಯಕರ್ತರು ಸಜ್ಜಾಗಿದ್ದಾರೆ," ಎಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ಸಣ್ಣೀರಪ್ಪ ಹೇಳಿಕೆಯಲ್ಲಿ ತಿಳಿಸಿದ್ದಾರೆ. "ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರಾದ ಟಿ.ಎ.ನಾರಾಯಣಗೌಡರ ಕರೆಯನ್ವಯ ಈಗಾಗಲೇ ರಾಜ್ಯದ ಎಲ್ಲ ಜಿಲ್ಲೆಗಳಿಂದ ಸಹಸ್ರಾರು ಕರವೇ ಸೇನಾನಿಗಳು ಕಾರು, ಬಸ್ಸು, ರೈಲುಗಳ ಮೂಲಕ ಬೆಳಗಾವಿಯತ್ತ ಧಾವಿಸುತ್ತಿದ್ದಾರೆ. ಟಿ.ಎ.ನಾರಾಯಣಗೌಡರ ನೇತೃತ್ವದಲ್ಲಿ ಸುಮಾರು 50 ವಾಹನಗಳ ಮೂಲಕ ನೂರಾರು ಕರವೇ ಸೇನಾನಿಗಳು ರಾತ್ರಿ 8-30ಕ್ಕೆ ಬೆಂಗಳೂರಿನ ಗಾಂಧಿನಗರದ ಕರವೇ ಕೇಂದ್ರ ಕಚೇರಿಯಿಂದ ಹೊರಡಲಿದ್ದಾರೆ," ಎಂದು ಕೂಡಾ ತಿಳಿಸಿದ್ದಾರೆ. ಆದರೆ ಪ್ರಸ್ತುತ ಬೆಳಗಾವಿಯಲ್ಲಿ ನಿಷೇದಾಜ್ಞೆ ಇದೆ.
ಸೆಕ್ಷನ್ 144 ಜಾರಿಯಲ್ಲಿದ್ದು ಪ್ರತಿಭಟನೆಗೆ ಅವಕಾಶವಿಲ್ಲ: ಡಿಸಿಪಿ
"ಬೆಳಗಾವಿ ನಗರ, ತಾಲೂಕಿನಲ್ಲಿ ಸೆಕ್ಷನ್ 144 ಜಾರಿಯಲ್ಲಿದೆ. ಹೀಗಾಗಿ ಯಾವುದೇ ಪ್ರತಿಭಟನೆ, ಮೆರವಣಿಗೆ ಅವಕಾಶ ನೀಡಲ್ಲ. ನಾವು ಹಿರೇಬಾಗೇವಾಡಿ ಟೋಲ್ ಗೇಟ್ ಬಳಿಯೇ ಪ್ರತಿಭಟನಕಾರರನ್ನು ತಡೆಯುತ್ತೇವೆ. ಬಳಿಕ ಅವರ ಮನವೊಲಿಕೆ ಮಾಡಿ ವಾಪಾಸ್ ಕಳುಹಿಸುತ್ತೇವೆ," ಎಂದು ಡಿಸಿಪಿ ವಿಕ್ರಮ್ ಆಮಟೆ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ. ಇನ್ನು ಬೆಳಗಾವಿ ಪೊಲೀಸ್ ಆಯುಕ್ತ ಡಾ. ಕೆ ತ್ಯಾಗರಾಜನ್, "ಪ್ರತಿಭಟನೆಗಳು ನಡೆಯುವ ಹಿನ್ನೆಲೆಯಿಂದಾಗಿ ನಾವು ಡಿಸೆಂಬರ್ 20 ರ ಬೆಳಿಗ್ಗೆ 6 ರಿಂದ ಡಿಸೆಂಬರ್ 22 ರ ಬೆಳಿಗ್ಗೆ 6 ಗಂಟೆವರೆಗೆ ನಿಷೇದಾಜ್ಞೆಯನ್ನು ಜಾರಿ ಮಾಡಿದ್ದೇವೆ," ಎಂದು ತಿಳಿಸಿದ್ದಾರೆ.
ಹಲವು ಮಂದಿ ಪೊಲೀಸ್ ವಶಕ್ಕೆ, ಸಿದ್ಧರಾಮಯ್ಯ ಭೇಟಿ
ಇನ್ನು ಇಂದು ಕರವೇ ಕಾರ್ಯಕರ್ತರು ಘೋಷಣೆಯನ್ನು ಕೂಗಿ ಪ್ರತಿಭಟನಾ ರ್ಯಾಲಿ ಆರಂಭ ಮಾಡುತ್ತಿದ್ದಂತೆ ಪೊಲೀಸರು ಅವರನ್ನು ತಡೆದಿದ್ದು, ಹಲವು ಮಂದಿ ಕಾರ್ಯಕರ್ತರನ್ನು ವಶಕ್ಕೆ ಪಡೆದಿದ್ದಾರೆ. ಇನ್ನು ಈ ನಡುವೆ ಅನಗೋಳದಲ್ಲಿ ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಭೇಟಿ ನೀಡಿದ್ದಾರೆ. ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಗೌರವ ಸಲ್ಲಿಸಿದ್ದಾರೆ. "ನೂರು ವರ್ಷ ಕಳೆದರೂ ಬೆಳಗಾವಿ ಕರ್ನಾಟಕ ರಾಜ್ಯ ಸರ್ಕಾರದ ಆಳ್ವಿಕೆಯಲ್ಲಿ ಇರಲಿದೆ," ಎಂದು ಸಿದ್ಧರಾಮಯ್ಯ ಹೇಳಿದ್ದಾರೆ. ಇನ್ನು ಈ ನಡುವೆ ಸಚಿವ ಸೋಮಯ್ಯ, "ಅವರು (ಎಂಇಎಸ್) ಕೂಡ ನಮ್ಮ ಜನರು. ಅವರು ತಮ್ಮ ಹಕ್ಕಿಗಾಗಿ ಹೋರಾಟ ನಡೆಸಲಿ ಬಿಡಿ. ಆದರೆ ಅವರು ಯಾವುದೇ ಗಲಭೆಯನ್ನು ಎಬ್ಬಿಸುವುದು ಸರಿಯಲ್ಲ," ಎಂದಿದ್ದಾರೆ. ಇನ್ನು ನಿಷೇಧಾಜ್ಞೆ ಜಾರಿಯಾದ ಬೆನ್ನಲ್ಲೇ ಬೆಳಗಾವಿಯಲ್ಲಿ ಭದ್ರತೆ ಬಿಗಿಯಾಗಿದೆ. ಎಲ್ಲಾ ವಾಹನಗಳನ್ನು ಪರಿಶೀಲನೆ ಮಾಡಲಾಗುತ್ತಿದೆ. (ಒನ್ಇಂಡಿಯಾ ಸುದ್ದಿ)
Recommended Video