ಎರಡು ದಿನದಿಂದ ಮನೆ ಮೇಲೇ ಕೂತು ಅಂಗಲಾಚುತ್ತಿದ್ದಾರೆ ದಂಪತಿ
ಬೆಳಗಾವಿ, ಆಗಸ್ಟ್ 7: ಸುರಿದ ಭಾರೀ ಮಳೆಗೆ ಬಳ್ಳಾರಿ ನಾಲಾ ನೀರು ಇದ್ದಕ್ಕಿದ್ದಂತೆ ಮನೆಯೊಂದಕ್ಕೆ ನುಗ್ಗಿತ್ತು. ನೋಡನೋಡುತ್ತಿದ್ದಂತೆ ಮನೆ ನೀರಿನಿಂದ ತುಂಬುತ್ತಿರುವುದು ಗಮನಕ್ಕೆ ಬಂದಿತು. ಮನೆಯೊಳಗೆ ಇದ್ದ ದಂಪತಿ ಎಲ್ಲಿ ಹೋಗಬೇಕು ಎಂದು ತಿಳಿಯದೇ, ದಿಕ್ಕೇ ತೋಚದೇ ಮನೆ ಮೇಲೆ ಹತ್ತಿ ಕುಳಿತುಕೊಂಡರು. ರಕ್ಷಣೆಗಾಗಿ ಎಲ್ಲರನ್ನೂ ಕೂಗುತ್ತಿದ್ದಾರೆ.
ಆದರೆ ಇನ್ನೂ ಅವರನ್ನು ಅಲ್ಲಿಂದ ಪಾರು ಮಾಡಲು ಸಾಧ್ಯವಾಗಿಲ್ಲ. ಬೆಳಗಾವಿ ತಾಲೂಕಿನ ಕಬಲಾಪುರ ಗ್ರಾಮದಲ್ಲಿ ತೋಟದ ಮನೆಯಲ್ಲಿದ್ದ ಕಾಳೇಶ ಜಂಗನ್ನವರ, ರತ್ನವ್ವಾ ಜಂಗನ್ನವರ ದಂಪತಿ ತಮ್ಮನ್ನು ರಕ್ಷಿಸುವಂತೆ ಬೇಡಿಕೊಳ್ಳುತ್ತಿದ್ದಾರೆ. ಎರಡು ದಿನಗಳಿಂದ ಮಳೆ, ಚಳಿ, ರಭಸದ ಗಾಳಿಯ ನಡುವೆ ಹಗಲು ರಾತ್ರಿ ಮನೆ ಮೇಲೇ ಕೂತಿದ್ದಾರೆ. ಆದರೆ ಇನ್ನೂ ಅವರನ್ನು ರಕ್ಷಿಸಲು ಸಾಧ್ಯವಾಗಿಲ್ಲ. ನೀರಿನ ರಭಸ ಹೆಚ್ಚಾಗಿದ್ದು, ಅಲ್ಲಿಗೆ ತೆರಳಲು ಸಾಧ್ಯವಾಗುತ್ತಿಲ್ಲ.
ಶಿರಾಡಿ ಘಾಟ್ ನಲ್ಲಿ ರಸ್ತೆಗೆ ಉರುಳಿದ ಮರಗಳು; ವಾಹನ ಸಂಚಾರ ಬಂದ್
ಎನ್.ಡಿ.ಆರ್.ಎಫ ತಂಡದಿಂದ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ. 15 ಜನ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದು, ಬೋಟ್ ಮೂಲಕ ಅವರನ್ನ ರಕ್ಷಿಸುವ ಪ್ರಯತ್ನ ನಡೆದಿದೆ. ಆದರೆ ಆ ಪ್ರಯತ್ನ ಕೈಗೂಡಿಲ್ಲ.
ಸ್ಥಳಕ್ಕೆ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್, ಡಿಸಿಪಿ ಯಶೋಧಾ ವಂಟಗೂಡಿ ಬಂದಿದ್ದು, ಅವರ ನೇತೃತ್ವದಲ್ಲಿ ಕಾರ್ಯಾಚರಣೆ ಮುಂದುವರಿದಿದೆ. ಸದ್ಯಕ್ಕೆ ಹೆಲಿಕಾಪ್ಟರ್ ಮೂಲಕ ಅವರನ್ನು ರಕ್ಷಿಸಲು ಚಿಂತನೆ ನಡೆಸಲಾಗಿದೆ.