ರಮೇಶ್ ಜಾರಕಿಹೊಳಿ, ಲಕ್ಷ್ಮೀ ಹೆಬ್ಬಾಳ್ಕರ್ಗೆ ಹೈಕಮಾಂಡ್ ಕರೆ!
ಬೆಂಗಳೂರು, ಡಿಸೆಂಬರ್ 20 : ಬೆಳಗಾವಿ ಜಿಲ್ಲೆಯ ಇಬ್ಬರು ಪ್ರಭಾವಿ ಕಾಂಗ್ರೆಸ್ ನಾಯಕರಿಗೆ ಹೈಕಮಾಂಡ್ ಕರೆ ಬಂದಿದೆ. ಉಭಯ ನಾಯಕರು ಶುಕ್ರವಾರ ದೆಹಲಿಯಲ್ಲಿ ಹೈಕಮಾಂಡ್ ನಾಯಕರ ಜೊತೆ ಮಹತ್ವದ ಮಾತುಕತೆ ನಡೆಸಲಿದ್ದಾರೆ.
ಪೌರಾಡಳಿತ ಸಚಿವ, ಗೋಕಾಕ್ ಕ್ಷೇತ್ರದ ಶಾಸಕ ರಮೇಶ್ ಜಾರಕಿಹೊಳಿ ಮತ್ತು ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಹೈಕಮಾಂಡ್ ನಾಯಕರು ಕರೆ ಮಾಡಿದ್ದು, ಶುಕ್ರವಾರ ದೆಹಲಿಗೆ ಬರುವಂತೆ ಸೂಚಿಸಿದ್ದಾರೆ.
ರಮೇಶ್ ಜಾರಕಿಹೊಳಿ ಸಂಪುಟದಿಂದ ಹೊರಕ್ಕೆ?, 5 ಕಾರಣಗಳು
ರಮೇಶ್ ಜಾರಕಿಹೊಳಿ ಮತ್ತು ಲಕ್ಷ್ಮೀ ಹೆಬ್ಬಾಳ್ಕರ್ ಇಬ್ಬರೂ ಬೆಳಗಾವಿ ಜಿಲ್ಲೆಯ ಪ್ರಭಾವಿ ನಾಯಕರು. ಆದರೆ, ಇಬ್ಬರ ನಡುವಿನ ಶೀತಲ ಸಮರದಿಂದಾಗಿ ಪಕ್ಷ ಮತ್ತು ಮೈತ್ರಿ ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತಿದೆ. ಆದ್ದರಿಂದ, ಅಸಮಾಧಾನ ಬಗೆಹರಿಸಲು ಹೈಕಮಾಂಡ್ ಮುಂದಾಗಿದೆ.
ಲಕ್ಷ್ಮಿ ಹೆಬ್ಬಾಳ್ಕರ್, ಜಾರಕಿಹೊಳಿ ಸಹೋದರರ ನಡುವೆ ಮತ್ತೆ ಜಟಾಪಟಿ?
ಸದ್ಯ ಬೆಳಗಾವಿಯಲ್ಲಿರುವ ಉಭಯ ನಾಯಕರು ಇಂದು ರಾತ್ರಿ ದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ. ಶುಕ್ರವಾರ ಹೈಕಮಾಂಡ್ ನಾಯಕರು ಇಬ್ಬರ ಜೊತೆ ಪ್ರತ್ಯೇಕವಾಗಿ ಮಾತುಕತೆ ನಡೆಸಲಿದ್ದು, ಅಭಿಪ್ರಾಯವನ್ನು ಸಂಗ್ರಹಣೆ ಮಾಡಲಿದ್ದಾರೆ.
ಹಳ್ಳಕ್ಕೆ ಬಿದ್ದ ಲಕ್ಷ್ಮಿ ಹೆಬ್ಬಾಳ್ಕರ್ ಮೇಲೆ ಆಳಿಗೊಂದು ಕಲ್ಲು
ಶೀತಲ ಸಮರ
ಕರ್ನಾಟಕದ ಇತರ ಜಿಲ್ಲೆಗಳ ರಾಜಕೀಯ ಬೇರೆ. ಬೆಳಗಾವಿ ರಾಜಕೀಯವೇ ಬೇರೆ. ರಮೇಶ್ ಜಾರಕಿಹೊಳಿ, ಸತೀಶ್ ಜಾರಕಿಹೊಳಿ ಮತ್ತು ಲಕ್ಷ್ಮೀ ಹೆಬ್ಬಾಳ್ಕರ್ ಜಿಲ್ಲೆಯ ಪ್ರಭಾವಿ ಕಾಂಗ್ರೆಸ್ ನಾಯಕರು. ಜಾರಕಿಹೊಳಿ ಸಹೋದರರು, ಲಕ್ಷ್ಮೀ ಹೆಬ್ಬಾಳ್ಕರ್ ನಡುವೆ ಪಕ್ಷ ಸಂಘಟನೆ, ಜಿಲ್ಲಾ ನಾಯಕತ್ವದ ವಿಚಾರದಲ್ಲಿ ಭಿನ್ನಮತ ಉಂಟಾಗಿದೆ. ಇದನ್ನು ಬಗೆಹರಿಸಲು ಹೈಕಮಾಂಡ್ ನಾಯಕರು ನಿರ್ಧರಿಸಿದ್ದಾರೆ.
ಬೆಳಗಾವಿ ಪಿಎಲ್ಡಿ ಬ್ಯಾಂಕ್ ಚುನಾವಣೆ
ಬೆಳಗಾವಿ ಪಿಎಲ್ಡಿ ಬ್ಯಾಂಕ್ ಚುನಾವಣೆ ಸಮಯದಲ್ಲಿ ಜಾರಕಿಹೊಳಿ ಸಹೋದರರು ಮತ್ತು ಲಕ್ಷ್ಮೀ ಹೆಬ್ಬಾಳ್ಕರ್ ನಡುವಿನ ಪ್ರತಿಷ್ಠೆ ಬಹಿರಂಗವಾಯಿತು. ಉಭಯ ನಾಯಕರ ನಡುವೆ ಮಾತಿನ ಸಮರ ನಡೆಯಿತು. ಅಂತಿಮವಾಗಿ ರಾಜ್ಯ ಕಾಂಗ್ರೆಸ್ ನಾಯಕರು ಅಸಮಾಧಾನ ಬಗೆಹರಿಸಿದ್ದರು.
ರಮೇಶ್ ಜಾರಕಿಹೊಳಿ, ಲಕ್ಷ್ಮೀ ಹೆಬ್ಬಾಳ್ಕರ್
ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ನಡೆಯುತ್ತಿದೆ. ರಮೇಶ್ ಜಾರಕಿಹೊಳಿ ಅವರು ಅಧಿವೇಶನಕ್ಕೆ ಗೈರಾದ ಬಗ್ಗೆ ಪ್ರಶ್ನಿಸಿದಾಗ ಲಕ್ಷ್ಮೀ ಹೆಬ್ಬಾಳ್ಕರ್ ಅವರು, 'ತಾವು ರಮೇಶ್ ಜಾರಕಿಹೊಳಿ ಅವರ ಪಿಆರ್ಓ ಅಲ್ಲ' ಎಂದು ಹೇಳಿದ್ದರು.
ಲಕ್ಷ್ಮೀ ಹೆಬ್ಬಾಳ್ಕರ್ ಅವರ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ರಮೇಶ್ ಜಾಕಿಹೊಳಿ ಅವರು, 'ಲಕ್ಷ್ಮೀ ಕಳೆದ 5 ವರ್ಷಗಳಿಂದ ನನ್ನ ಪಿಆರ್ ಆಗಿದ್ದಳು, ಈಗೇಕೆ ಅಲ್ಲ ಎನ್ನುತ್ತಿದ್ದಾಳೆ?' ಎಂದು ಪ್ರಶ್ನಿಸಿದ್ದರು.
ಸರ್ಕಾರಕ್ಕೆ ಕೆಟ್ಟ ಹೆಸರು
ಲಕ್ಷ್ಮೀ ಹೆಬ್ಬಾಳ್ಕರ್ ಮತ್ತು ರಮೇಶ್ ಜಾರಕಿಹೊಳಿ ಒಂದೇ ಜಿಲ್ಲೆಯವರು, ಒಂದೇ ಪಕ್ಷದವರು. ಆದರೆ, ಉಭಯ ನಾಯಕರ ಮುನಿಸಿನಿಂದಾಗಿ ಮೈತ್ರಿ ಸರ್ಕಾರ ಮತ್ತು ಕಾಂಗ್ರೆಸ್ ಪಕ್ಷಕ್ಕೆ ಕೆಟ್ಟ ಹೆಸರು ಬರುತ್ತಿದೆ. ಆದ್ದರಿಂದ, ಅಸಮಾಧಾನ ಶಮನಕ್ಕೆ ಹೈಕಮಾಂಡ್ ನಾಯಕರು ಮುಂದಾಗಿದ್ದಾರೆ.