ರಮೇಶ್ ಜಾರಕಿಹೊಳಿ ನಿವಾಸದಲ್ಲಿ ಬೆಂಬಲಿಗರ ಸಭೆ, ಬಿಜೆಪಿಗೆ ಬೆಂಬಲ?
ಬೆಳಗಾವಿ, ಏಪ್ರಿಲ್ 20: ನಿನ್ನೆಯಷ್ಟೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯಲ್ಲಿ ನಡೆದ ಕಾಂಗ್ರೆಸ್ ಸಮಾವೇಶಕ್ಕೆ ಗೈರಾಗಿ ಅಸಮಾಧಾನವನ್ನು ಬಹಿರಂಗಪಡಿಸಿದ್ದ ರಮೇಶ್ ಜಾರಕಿಹೊಳಿ ಅವರು ಇಂದು ತಮ್ಮ ನಿವಾಸದಲ್ಲಿ ಬೆಂಬಲಿಗರ ಸಭೆ ನಡೆಸಿದರು.
ವಾರದಲ್ಲಿ ಎರಡನೇ ಬಾರಿಗೆ ತಮ್ಮ ನಿವಾಸದಲ್ಲಿ ಬೆಂಬಲಿಗರ ಸಭೆ ನಡೆಸುತ್ತಿರುವ ರಮೇಶ್ ಜಾರಕಿಹೊಳಿ ಅವರು, ಬಿಜೆಪಿಗೆ ಬೆಂಬಲ ನೀಡುವಂತೆ ತಮ್ಮ ಬೆಂಬಲಿಗರಿಗೆ ಸೂಚಿಸಿದ್ದಾರೆ ಎನ್ನಲಾಗುತ್ತಿದೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ತಮಗೆ ಪಕ್ಷದಲ್ಲಿ ಸೂಕ್ತ ಸ್ಥಾನ-ಮಾನ ನೀಡಲಿಲ್ಲವೆಂದು ಮುನಿಸಿಕೊಂಡಿದ್ದ ರಮೇಶ್ ಜಾರಕಿಹೊಳಿ, ಸರ್ಕಾರಕ್ಕೆ ಆಪತ್ತು ತರುವವರೆಗೆ ಹೋಗಿದ್ದರು, ಆದರೆ ಮೈತ್ರಿ ಸರ್ಕಾರದ ಮುಖಂಡರು ಅದನ್ನು ತಡೆದರು, ಆದರೆ ರಮೇಶ್ ಜಾರಕಿಹೊಳಿ ಅತೃಪ್ತಿ ಶಮನವಾಗದೆ ಉಲ್ಬಣವಾಗಿದ್ದು, ಅವರು ಪಕ್ಷಕ್ಕೆ ವಿರುದ್ಧವಾಗಿ ನಡೆದುಕೊಳ್ಳುವ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ.
ದೆಹಲಿಗೆ ಹೋದ ರಮೇಶ್ ಜಾರಕಿಹೊಳಿ ರಾಜ್ಯ ರಾಜಕೀಯದಲ್ಲಿ ದಿಢೀರ್ ಬೆಳವಣಿಗೆ
ಕೆಲವು ಮೂಲಗಳ ಪ್ರಕಾರ ನಿನ್ನೆ ನಡೆದ ಕಾಂಗ್ರೆಸ್ ಸಮಾವೇಶಕ್ಕೆ ಜಿಲ್ಲಾ ಕಾಂಗ್ರೆಸ್ ವತಿಯಿಂದ ರಮೇಶ್ ಜಾರಕಿಹೊಳಿ ಅವರಿಗೆ ಆಹ್ವಾನವೇ ಹೋಗಿಲ್ಲವಂತೆ. ಆದರೆ ಅದೇ ಸಮಾವೇಶದಲ್ಲಿ ರಮೇಶ್ ಜಾರಕಿಹೊಳಿ ಅವರ ಕಟ್ಟಾ ಬೆಂಬಲಿಗರಾದ ಮಹೇಶ್ ಕುಮಠಳ್ಳಿ ಮತ್ತು ಶ್ರೀಮಂತ ಪಾಟೀಲ್ ಅವರು ಉಪಸ್ಥಿತರಾಗಿದ್ದುದು ಗಮನಾರ್ಹ.
ನಿನ್ನೆ ಸಮಾವೇಶಕ್ಕೆ ರಮೇಶ್ಗೆ ಆಹ್ವಾನವಿರಲಿಲ್ಲ
ನಿನ್ನೆ ನಡೆದ ಸಮಾವೇಶದಲ್ಲಿ ಯಾವೊಬ್ಬ ನಾಯಕರೂ ಸಹ ರಮೇಶ್ ಜಾರಕಿಹೊಳಿ ಅವರ ಹೆಸರನ್ನು ಸಹ ಹೇಳಲಿಲ್ಲ. ಸಮಾವೇಶದಲ್ಲಿ ಗಮನ ಸೆಳೆದ ಅಂಶವೆಂದರೆ, ಹಾವು-ಮುಂಗುಸಿಯಂತಿದ್ದ ಲಕ್ಷ್ಮಿ ಹೆಬ್ಬಾಳ್ಕರ್ ಮತ್ತು ಸತೀಶ್ ಜಾರಕಿಹೊಳಿ ಪರಸ್ಪರ ವೈರತ್ವ ಮರೆತು ಒಬ್ಬರನ್ನೊಬ್ಬರು ಹೊಗಳಿ ಮಾತನಾಡಿದರು. ಲಕ್ಷ್ಮಿ ಹೆಬ್ಬಾಳ್ಕರ್ ಅವರಂತೂ ಸತೀಶ್ ಜಾರಕಿಹೊಳಿ ಅವರಿಗೆ ಜಯಕಾರಗಳನ್ನು ಹಾಕಿಸಿದ್ದು ಗಮನ ಸೆಳೆಯಿತು.
ರಮೇಶ್ ಜಾರಕಿಹೊಳಿ ವಿರುದ್ಧ ಕೆಪಿಸಿಸಿ ಅಧ್ಯಕ್ಷರಿಗೆ ದೂರು
ರಮೇಶ್ ವಿರುದ್ಧ ಸ್ಪೀಕರ್ಗೆ ದೂರು ನೀಡಿರುವ ಸಿದ್ದರಾಮಯ್ಯ
ರಮೇಶ್ ಜಾರಕಿಹೊಳಿ ಅವರ ಮೇಲೆ ಅವರ ಗುರುಗಳಾದ ಸಿದ್ದರಾಮಯ್ಯ ಅವರೇ ಸ್ಪೀಕರ್ ಅವರಿಗೆ ದೂರು ನೀಡಿದ್ದಾರೆ. ಇದು ರಮೇಶ್ ಅವರು ಸಂಧಾನಕ್ಕೆ ಬರುವ ಸಾಧ್ಯತೆಯನ್ನು ಕ್ಷೀಣವಾಗಿಸುವುದರಿಂದ ರಮೇಶ್ ಅವರು ಅಡಕತ್ತರಿಯಲ್ಲಿ ಸಿಲುಕಿದ್ದು, ಇತ್ತ ಬಿಜೆಪಿಗೆ ದಾಟಲೂ ಆಗದೆ, ಕಾಂಗ್ರೆಸ್ನಲ್ಲಿ ಉಳಿಯಲೂ ಆಗದೆ ಒತ್ತಡಕ್ಕೆ ಸಿಲುಕಿದ್ದಾರೆ.
ಲೋಕಸಭೆ ಚುನಾವಣೆ: ರಮೇಶ್ ಜಾರಕಿಹೊಳಿ ಬೆಂಬಲ ಯಾರ ಕಡೆಗೆ?
ರಮೇಶ್ಗೆ ಆಹ್ವಾನ ನೀಡಿರುವ ಬಿಜೆಪಿ ಮುಖಂಡರು
ಶೋಭಾ ಕರಂದ್ಲಾಕೆ, ಅರವಿಂದ ಲಿಂಬಾವಳಿ ಅಂತಹಾ ನಾಯಕರು ಈಗಾಗಲೇ ಬಹಿರಂಗವಾಗಿಯೇ ರಮೇಶ್ ಜಾರಕಿಹೊಳಿ ಅವರಿಗೆ ಬಿಜೆಪಿಗೆ ಆಹ್ವಾನ ನೀಡಿದ್ದಾರೆ. ಸತೀಶ್ ಜಾರಕಿಹೊಳಿ ಸಹ ರಮೇಶ್ ಅವರ ಬಗ್ಗೆ ಋಣಾತ್ಮಕವಾದ ಮಾತುಗಳನ್ನು ಆಡುತ್ತಿದ್ದಾರೆ. ಈಗ ರಮೇಶ್ ಅವರು ತಮ್ಮ ಬೆಂಬಲಿಗರನ್ನು ಬಿಜೆಪಿಗೆ ಬೆಂಬಲ ನೀಡುವಂತೆ ಕೋರಿರುವುದನ್ನು ಗಮನಿಸಿದಲ್ಲಿ ರಮೇಶ್ ಅವರು ಬಿಜೆಪಿಗೆ ಹಾರುವ ಸಾಧ್ಯತೆ ಕಾಣುತ್ತಿದೆ.
ಬಿಜೆಪಿ-ಕಾಂಗ್ರೆಸ್ ನಡುವೆ ನೇರ ಸ್ಪರ್ಧೆ
ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ ಅಣ್ಣಾಸಾಹೇಬ್ ಜೊಲ್ಲೆ ಅವರು ಕಣಕ್ಕೆ ಇಳಿದಿದ್ದರೆ, ಕಾಂಗ್ರೆಸ್ನಿಂದ ಪ್ರಕಾಶ್ ಹುಕ್ಕೇರಿ ಅವರು ಅವರು ಕಣದಲ್ಲಿ ಇದ್ದಾರೆ. ಇಬ್ಬರ ನಡುವೆ ನೇರ ಸ್ಪರ್ಧೆ ಇದೆ. ಒಟ್ಟು 13 ಜನ ಇಲ್ಲಿ ಕಣದಲ್ಲಿ ಇದ್ದಾರೆ