"ನಿಮಗೆ ಕನ್ನಡ ಬರುತ್ತಾ, ಮೊದಲು ಸರಿಯಾಗಿ ಕೆಲಸ ಮಾಡಿ"; ಸಿಡಿಮಿಡಿಗೊಂಡ ಸಿಎಂ
ಬೆಳಗಾವಿ, ಅಕ್ಟೋಬರ್ 3: "ಪ್ರವಾಹ ಸಂತ್ರಸ್ತರಿಗೆ ಪರಿಹಾರ ಕೊಡುವುದು ನಿಂತಿಲ್ಲ. ಕೇಂದ್ರದಿಂದ ಹಣ ಬರದಿದ್ದರೂ 3 ಸಾವಿರ ಕೋಟಿಗೂ ಹೆಚ್ಚು ಹಣ ಬಿಡುಗಡೆ ಮಾಡಿದ್ದೇನೆ. ಶೀಘ್ರವಾಗಿ ಕೇಂದ್ರದಿಂದ ಪರಿಹಾರ ಬರಲಿದೆ. ಮನೆ ಬಿದ್ದವರಿಗೆ, ಬೆಳೆ ಹಾನಿ ಆದವರಿಗೆ ಸೂಕ್ತ ಪರಿಹಾರ ನೀಡುತ್ತೇವೆ" ಎಂದರು ಸಿಎಂ ಬಿ.ಎಸ್.ಯಡಿಯೂರಪ್ಪ.
ಇಂದು ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಅವರು ನೆರೆ ಪರಿಹಾರ ನೀಡುವ ಕುರಿತು ಭರವಸೆ ನೀಡಿದರು. ಜೊತೆಗೆ ಸಿದ್ದರಾಮಯ್ಯ, ಕಾಂಗ್ರೆಸ್, ಜೆಡಿಎಸ್ ನಾಯಕರ ಯಾವುದೇ ಟೀಕೆಗೆ ಪ್ರತಿಕ್ರಿಯೆ ನೀಡುವುದಿಲ್ಲ ಎಂದೂ ಹೇಳಿದರು. ಅವರಿಗೆ ಡಿಸಿಎಂ ಲಕ್ಷ್ಮಣ ಸವದಿ ಸಾಥ್ ನೀಡಿದರು. ಯಡಿಯೂರಪ್ಪ ಅವರು ಬಂದಿಳಿಯುತ್ತಿದ್ದಂತೆ ಜಿಲ್ಲಾ ವಿಭಜನೆ ಘೋಷಣೆ ಕೇಳಿಬಂತು. ಗೋಕಾಕ ಜಿಲ್ಲೆಗೆ ಆಗ್ರಹಿಸಿ ಅವರಿಗೆ ಮನವಿಯನ್ನೂ ನೀಡಲಾಯಿತು.
ಟೌನ್ ಹಾಲ್ ಬಳಿ ನೆರೆ ಪರಿಹಾರಕ್ಕಾಗಿ ನಡೆದ ಶಾಂತಿಯುತ ಪ್ರತಿಭಟನೆ
ಆದರೆ ಶಾಸಕ ಉಮೇಶ್ ಕತ್ತಿ ಗೈರು ಎದ್ದು ಕಾಣುತ್ತಿತ್ತು. ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದ ಶಾಸಕ ಉಮೇಶ್ ಕತ್ತಿ ಗೈರಾಗಿದ್ದದ್ದು ಅವರ ಮುನಿಸು ಇನ್ನೂ ಶಮನವಾಗದ್ದನ್ನು ತೋರುತ್ತಿತ್ತು.
ಜಿಪಂ ಕಚೇರಿಯಲ್ಲಿ ನೆರೆ ಕುರಿತು ಸಿಎಂ ಬಿಎಸ್ ವೈ ಅಧಿಕಾರಗಳೊಂದಿಗೆ ಸಭೆ ನಡೆಸಿದರು. ಪ್ರವಾಹ ಪರಿಹಾರ ವಿಷಯದಲ್ಲಿ ಜಿಲ್ಲಾಡಳಿತ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ಜಿಲ್ಲೆಯ ಬಹುತೇಕ ಶಾಸಕರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ದೂರಿದರು. ಇದರಿಂದ ಕೆರಳಿದ ಯಡಿಯೂರಪ್ಪ ಜಿಲ್ಲಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು."ನಿಮಗೆ ಕನ್ನಡ ಬರುತ್ತಾ? ನಾನು ಹೇಳುತ್ತಿದ್ದೇನೆ, ನಾಳೆಯಿಂದಲೇ ಸರಿಯಾಗಿ ಕೆಲಸ ಮಾಡಬೇಕು. ಮತ್ತೆ 15 ದಿನದಲ್ಲಿ ಇಲ್ಲಿಗೆ ಬರುತ್ತೇನೆ. ಆ ಸಂದರ್ಭದಲ್ಲಿ ಯಾವುದೇ ರೀತಿಯ ದೂರು ಬಾರದಂತೆ ನೋಡಿಕೊಳ್ಳಬೇಕು" ಎಂದು ಸೂಚಿಸಿದರು.
ಈ ವೇಳೆ ಜಿಲ್ಲಾಧಿಕಾರಿಗಳು ಸ್ಪಷ್ಟನೆ ಕೊಡಲು ಯತ್ನಿಸಿದರಾದರೂ ಸಿಎಂ ಕೇಳುವ ಸ್ಥಿತಿಯಲ್ಲಿರಲಿಲ್ಲ. ಸರಿಯಾಗಿ ಕೆಲಸ ಮಾಡಿ ಎಂದು ತಾಕೀತು ಮಾಡಿದರು.
ಸಾಲ ಪಾವತಿಸದ ರೈತರಿಗೆ ವಾರೆಂಟ್!: ಆತಂಕದಲ್ಲಿ ಪ್ರವಾಹಪೀಡಿತ ರೈತರು
ಕಾರ್ಯಾದೇಶ ವಿತರಣೆ: ಪ್ರವಾಹದಿಂದ ಸಂಪೂರ್ಣ ಮನೆಯನ್ನು ಕಳೆದುಕೊಂಡಿರುವ ಕುಟುಂಬಗಳಿಗೆ ಮನೆ ನಿರ್ಮಾಣ ಕಾರ್ಯ ಆರಂಭಿಸಲು ಅಗತ್ಯವಿರುವ ಮೊದಲ ಕಂತು ಒಂದು ಲಕ್ಷ ರೂಪಾಯಿ ಅವರ ಖಾತೆಗೆ ಜಮಾ ಆಗಿದ್ದು, ಮನೆ ನಿರ್ಮಾಣದ ಕಾರ್ಯಾದೇಶವನ್ನು ಮುಖ್ಯಮಂತ್ರಿ ಯಡಿಯೂರಪ್ಪ ಅವರು ವಿವಿಧ ತಾಲ್ಲೂಕುಗಳ ಆಯ್ದ ಫಲಾನುಭವಿಗಳಿಗೆ ಹಸ್ತಾಂತರಿಸಿದರು.
ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಬೆಳಗಾವಿ ಜಿಲ್ಲೆಯ ಪ್ರವಾಹ ಪರಿಹಾರ ಕಾರ್ಯಗಳ ಹಾಗೂ ಅಭಿವೃದ್ಧಿ ಕಾರ್ಯಕ್ರಮಗಳ ಪರಿಶೀಲನಾ ಸಭೆಯಲ್ಲಿ ಸಂತ್ರಸ್ತ ಕುಟುಂಬಗಳಿಗೆ ಕಾರ್ಯಾದೇಶಗಳನ್ನು ನೀಡಲಾಯಿತು. ಇಂದು ಸಿಎಂ ಬೆಳಗಾವಿಯಲ್ಲೇ ವಾಸ್ತವ್ಯ ಹೂಡಲಿದ್ದಾರೆ.