ಇಂದು ಬೆಳಗಾವಿ ಪ್ರವಾಹಪೀಡಿತ ಪ್ರದೇಶಗಳಿಗೆ ಸಿಎಂ ಬಿಎಸ್ ವೈ ರೌಂಡ್
Recommended Video
ಬೆಳಗಾವಿ, ಆಗಸ್ಟ್ 8: ಕಳೆದ ಕೆಲವೂ ದಿನಗಳಿಂದ ಸುರಿಯುತ್ತಿರುವ ಮಳೆಗೆ ಬೆಳಗಾವಿ ತತ್ತರಿಸಿ ಹೋಗಿದೆ. ಜಿಲ್ಲೆಯ 106 ಗ್ರಾಮಗಳು ಜಲಾವೃತಗೊಂಡಿದ್ದು, 29089 ಕುಟುಂಬಗಳನ್ನು ಸ್ಥಳಾಂತರ ಮಾಡಲಾಗಿದೆ. ಆರು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. 40 ಮಂದಿ ನಾಪತ್ತೆಯಾಗಿದ್ದಾರೆ. ನಿನ್ನೆ ಸುದ್ದಿಗೋಷ್ಟಿ ನಡೆಸಿರುವ ಮುಖ್ಯಮಂತ್ರಿ ಯಡಿಯೂರಪ್ಪ, ಪ್ರವಾಹದಲ್ಲಿ ಮೃತ ಪಟ್ಟವರ ಕುಟುಂಬಗಳಿಗೆ 5 ಲಕ್ಷ ಪರಿಹಾರ ಘೋಷಿಸಿದ್ದಾರೆ. ಇಂದು ಕೂಡ ಬೆಳಗಾವಿಯ ಪ್ರವಾಹ ಪೀಡಿತ ಪ್ರದೇಶಗಳಿಗೆ ಯಡಿಯೂರಪ್ಪನವರು ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ.
ಪ್ರವಾಹ: ಮೃತರ ಕುಟುಂಬಕ್ಕೆ 5 ಲಕ್ಷ ಪರಿಹಾರ ಘೋಷಿಸಿದ ಯಡಿಯೂರಪ್ಪ
ಬೆಳಿಗ್ಗೆ 8 ಗಂಟೆಗೇ ಯಡಿಯೂರಪ್ಪನವರ ಬೆಳಗಾವಿ ನಗರದ ಪ್ರದಕ್ಷಿಣೆ ಆರಂಭವಾಗಿದೆ. ನಗರದ ಕಪಿಲೇಶ್ವರ ಕಾಲೋನಿ, ಹಳೆ ಪಿಬಿ ರಸ್ತೆಯ ಪರಿಹಾರ ಕೇಂದ್ರಕ್ಕೆ ಮೊದಲು ಭೇಟಿ ನೀಡಿ ಬಳಿಕ ಬೆಳಗಾವಿ ತಾಲೂಕಿನ ಕಾಕತಿ ಗ್ರಾಮ ಮಾರ್ಕಂಡೇಯ ನದಿ ಪ್ರವಾಹ ಪರಿಶೀಲನೆ ಕಾರ್ಯ ಕೈಗೊಳ್ಳಲಿದ್ದಾರೆ.
ಅನಂತರ ಬೆಳಗಾವಿ ತಾಲೂಕಿನ ಸುತಗಟ್ಟಿ ಗ್ರಾಮದ ಬಳಿಯ ಘಟಪ್ರಭಾ ನದಿ ಪ್ರವಾಹದ ಪರಿಶೀಲನೆ ನಡೆಯಲಿದೆ. ಇದೇ ಸಮಯ ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣದ ಪ್ರವಾಹ ಪೀಡಿತ ಪ್ರದೇಶ ಮತ್ತು ಪರಿಹಾರ ಕೇಂದ್ರಕ್ಕೆ ಭೇಟಿ ನೀಡಲಿರುವರು. ಅಲ್ಲಿಂದ ಸಿಎಂ ನಿಪ್ಪಾಣಿ, ಚಿಕ್ಕೋಡಿಯ ಪ್ರವಾಹ ಪೀಡಿತ ಪ್ರದೇಶಗಳಿಗೆ ತೆರಳಲಿರುವರು. ಎಲ್ಲೆಲ್ಲಿ ಪ್ರವಾಹದಿಂದ ದೊಡ್ಡ ಮಟ್ಟದಲ್ಲಿ ಹಾನಿ ಸಂಭವಿಸಿದೆಯೋ ಅಲ್ಲಿಗೆ ಅವರು ಭೇಟಿ ನೀಡಲಿದ್ದಾರೆ.