ವಿಧಾನ ಪರಿಷತ್ ಚನಾವಣೆ: ಅರುಣ್ ಶಹಪುರ, ಹನುಮಂತ ನಿರಾಣಿ ಪರ ಸಿಎಂ ಪ್ರಚಾರ
ಬೆಳಗಾವಿ ಜೂ.11: ಶಿಕ್ಷಣ ಮತ್ತು ಜ್ಞಾನದಿಂದ ಮಾತ್ರ ಸಂಸ್ಕಾರ ಸಹಿತ ಸಮಾಜ ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ. ಶಿಕ್ಷಣಕ್ಕೆ ಎಲ್ಲಿ ಪ್ರಾಮುಖ್ಯತೆ ಇರುತ್ತದೆಯೊ ಅಲ್ಲಿ ಎಲ್ಲವು ಅಭಿವೃದ್ಧಿ ಆಗುತ್ತವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಶನಿವಾರ ಬೆಳಗಾವಿಯಲ್ಲಿ ಆಯೋಜಿಸಿದ್ದ ಕೆ.ಎಲ್.ಇ ಸೊಸೈಟಿಯಲ್ಲಿ ವಾಯುವ್ಯ ಶಿಕ್ಷಕರ ಕ್ಷೇತ್ರ ಹಾಗೂ ಪದವೀಧರರ ಕ್ಷೇತ್ರದ ಚುನಾವಣಾ ಪ್ರಚಾರ ಸಭೆಯಲ್ಲಿ ಪಾಲ್ಗೊಂಡು ಅಬ್ಬರದ ಪ್ರಚಾರ ನಡೆಸಿದರು. ಮುಖ್ಯಮಂತ್ರಿಗಳಿಗೆ ಸ್ಥಳಿಯ ಶಾಸಕರು, ಈ ಭಾಗದ ಬಿಜೆಪಿ ನಾಯಕರು ಸಾಥ್ ನೀಡಿದರು.
ಶಿಕ್ಷಣ ಸಚಿವರ ಮನೆ ಮುಂದೆ RSS ಚಡ್ಡಿ ಸುಟ್ಟಿದ್ದ NSUI ಕಾರ್ಯಕರ್ತರಿಗೆ ಜಾಮೀನು
ಈ ಸಂದರ್ಭದಲ್ಲಿ ಮಾತನಾಡಿದ ಸಿಎಂ ಬೊಮ್ಮಾಯಿ, "ಶಿಕ್ಷಕರ ಕ್ಷೇತ್ರ ಹಾಗೂ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಮತದಾರರು ಅರುಣ್ ಶಹಪುರ ಹಾಗೂ ಹನುಮಂತ ನಿರಾಣಿಯವರಿಗೆ ಮತ ನೀಡಬೇಕು. ಸರಿಯಾದ ವ್ಯಕ್ತಿಯನ್ನು ಆಯ್ಕೆ ಮಾಡಿದರೆ ಚುನಾಯಿತ ಸಲಹೆಗಳ ಮೇರೆಗೆ ಉತ್ತಮ ಕಾರ್ಯಕ್ರಮ ರೂಪಿಸಲು ಸಾಧ್ಯವಾಗುತ್ತದೆ. ಯಾವ ವಿಚಾರದಲ್ಲಿ ಈ ಕ್ಷೇತ್ರಗಳ ಹಾಗೂ ಉತ್ತರ ಕರ್ನಾಟಕ ಭಾಗದ ಜನರ ಆಸೆ ನಿರಾಶೆಗೊಳಿಸುವುದಿಲ್ಲ. ಇಲ್ಲಿನ ಅಭಿವೃದ್ಧಿಗಾಗಿ ಸದಾ ಕಂಕಣ ಬದ್ಧನಾಗಿದ್ದೇನೆ," ಎಂದು ಅವರು ಭವರಸೆ ನೀಡಿದರು.
ಕೆಎಲ್ಇ ಸಂಸ್ಥೆ ಕಾರ್ಯಪ್ರಗತಿ ಕುರಿತು ಶ್ಲಾಘನೀಯ
ಕರ್ನಾಟಕದ ಅಭಿವೃದ್ಧಿಯಲ್ಲಿ ಮೈಸೂರು ಮಹಾರಾಜರ ಯೋಜನೆಗಳು ಹಾಗೂ ಉತ್ತರ ಕರ್ನಾಟಕದಲ್ಲಿನ ಶಿಕ್ಷಣ ಸಂಸ್ಥೆಗಳು ಅದರಲ್ಲೂ ಬೆಳಗಾವಿಯ ಕೆಎಲ್ಇ ಸೊಸೈಟಿಯ ಕೊಡುಗೆ ಅಪಾರವಾದುದು. ಈ ಶೈಕ್ಷಣಿಕ ಸಂಸ್ಥೆ ಕುರಿತು ಬಹಳ ದೊಡ್ಡ ಇತಿಹಾಸವಿದೆ. ಚುನಾಯಿತ ಅಧ್ಯಕ್ಷರಾಗಿರುವ ಪ್ರಭಾಕರ್ ಕೋರೆ ಅವರ ಸ್ಥಾನ ಅತ್ಯಂತ ಗೌರವಯುತವಾದದ್ದು. ಅವರ ನೇತೃತ್ವದಲ್ಲಿ ಸಂಸ್ಥೆಯು ಅಭಿವೃದ್ಧಿಯತ್ತ ಸಾಗುತ್ತಿದೆ. 34 ಸಂಸ್ಥೆಗಳಿದ್ದ ಸೊಸೈಟಿ ಮೂರು ದಶಕಗಳಲ್ಲಿ 278 ಸಂಸ್ಥೆಗಳಾಗಿವೆ. ಇದೊಂದು ವಿಶ್ವ ದಾಖಲೆ ಸರಿ ಎಂದು ಕೆಎಲ್ ಇ ಸಂಸ್ಥೆ ಕಾರ್ಯಪ್ರಗತಿ ಕುರಿತು ಶ್ಲಾಘಿಸಿದರು.
ಕೋರೆಯಂತಹವರು ನೂರಾರು ಜನ ಬೇಕು
ಈ ದೇಶದ ಗಡಿದಾಟಿ ಸಂಸ್ಥೆಗಳನ್ನು ಕಟ್ಟಿದ್ದಾರೆ. ಇದು ಶಿಕ್ಷಣದಲ್ಲಿ ನಾಯಕತ್ವವನ್ನು ತೋರಿಸುತ್ತದೆ. ಪ್ರಭಾಕರ್ ಕೋರೆಯಂತಹವರು ನೂರಾರು ಜನ ಬಂದರೆ ಈ ದೇಶದ ಶೈಕ್ಷಣಿಕ ಚಿತ್ರಣವೇ ಬದಲಾಗುತ್ತದೆ. ವೈಜ್ಞಾನಿಕ ಚಿಂತನೆಯುಳ್ಳ ಸಮಾಜದ ನಿರ್ಮಾಣ ಶೈಕ್ಷಣಿಕ ಸಂಸ್ಥೆಗಳ ಮೇಲೆ ಅವಲಂಬಿತವಾಗಿದೆ. ಮುಂದಿನ ಪೀಳಿಗೆಗೆ ಈ ಸಂಸ್ಥೆ ಹೇಗೆ ಬೆಳೆಯಬೇಕು ಎಂಬುದರ ಕುರಿತು ವಿದ್ಯಾರ್ಥಿಗಳು ಸಂಶೋಧನೆ ನಡೆಸಿ ಎಂದು ಸಲಹೆ ನೀಡಿದರು.
15 ಸಾವಿರ ಶಿಕ್ಷಕರ ನೇಮಕಾತಿಗೆ ಅನುಮೋದನೆ
ಶಿಕ್ಷಣ ಕ್ಷೇತ್ರಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ಮಹತ್ವ ಕೊಡಲಾಗಿದೆ. ಈ ಸಂಬಂಧ ಒಂದು ತಿಂಗಳಲ್ಲಿ 1, ಲಕ್ಷ 4ಸಾವಿರ ಕೋಟಿ ಮೌಲ್ಯದ ಯೋಜನೆಗಳಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಬೊಮ್ಮಾಯಿ ತಿಳಿಸಿದರು.
ಬಿಜೆಪಿ ಸರ್ಕಾರ ಸದಾ ಶಿಕ್ಷಣಕ್ಕೆ ಆದ್ಯತೆ ನೀಡುತ್ತಲೇ ಬಂದಿದೆ. ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳ ಏಳು ಸಾವಿರ ಕೊಠಡಿಗಳನ್ನು ನಿರ್ಮಿಸಲು ಅನುದಾನ ಒದಗಿಸಲಾಗಿದೆ. ಇದೇ ವರ್ಷ 15 ಸಾವಿರ ಶಿಕ್ಷಕರ ನೇಮಕಾತಿಗೆ ಅನುಮೋದನೆ ನೀಡಲಾಗಿದೆ. ಮಾದರಿ ಶಾಲೆಗಳನ್ನು ಮತ್ತು ಉನ್ನತ ಶಿಕ್ಷಣಕ್ಕೂ ಮಹತ್ವ ನೀಡಲಾಗಿದೆ ಆರು ಸಾವಿರ ಶಾಲಾ ಕೊಠಡಿಗಳು ಮುಂದಿನ ದಿನಗಳಲ್ಲಿ ಸ್ಮಾರ್ಟ್ ಕ್ಲಾಸ್ ರೂಮ್ ಗಳಾಗಿ ಬದಲಾಗಲಿವೆ. ಏಳು ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳನ್ನು ಐಐಟಿ ಮಾದರಿಯಲ್ಲಿ ಮೇಲ್ದರ್ಜೆಗೇರಿಸಲು ತೀರ್ಮಾನಿಸಲಾಗಿದೆ ಎಂದು ಶಿಕ್ಷಣಕ್ಕೆ ಬಿಜೆಪಿ ಸರ್ಕಾರ ನೀಡಿದ ಆದ್ಯತೆ ಕುರಿತು ಅವರು ವಿವರಿಸಿದರು.
ಉತ್ಕೃಷ್ಟತಾ ಕೇಂದ್ರ ಸ್ಥಾಪನೆ ಕಾರ್ಯ
ರಾಜೀವ್ ಗಾಂಧಿ ವಿಶ್ವವಿದ್ಯಾಲಯದ ವೈದ್ಯಕೀಯ ವಿಜ್ಞಾನ ವಿಭಾಗದಲ್ಲಿ ಉತ್ಕೃಷ್ಟತಾ ಕೇಂದ್ರ ಸ್ಥಾಪನೆ ಕಾರ್ಯ ಆರಂಭವಾಗಿದೆ. ಆರ್ ಅಂಡ್ ಡಿ ನೀತಿ ರೂಪಿಸಲಾಗಿದ್ದು, ಶಿಕ್ಷಣದಲ್ಲಿ ದೊಡ್ಡ ಬದಲಾವಣೆ ತರಲಾಗುತ್ತಿದೆ. ಏಳು ನೂತನ ಡಿಜಿಟಲ್ ವಿಶ್ವವಿದ್ಯಾಲಯಗಳನ್ನು ಪ್ರಾರಂಭಿಸಲಿದ್ದು, ಬೇರಾವ ರಾಜ್ಯವು ಈ ಕೆಲಸ ಮಾಡಿಲ್ಲ ಎಂದು ನೂತನ ಶಿಕ್ಷಣ ನೀತಿ ಕುರಿತು ತಿಳಿಸಿದರು.