ಚಿಕ್ಕೋಡಿ ಕಣ : ಪ್ರಕಾಶ್ ಹುಕ್ಕೇರಿ v/s ಅಣ್ಣಾ ಸಾಹೇಬ್ ಜೊಲ್ಲೆ
ಚಿಕ್ಕೋಡಿ, ಏಪ್ರಿಲ್ 19 : ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಜಂಗಿ ಕುಸ್ತಿಗೆ ವೇದಿಕೆ ಸಿದ್ಧವಾಗಿದೆ. ಈ ಕ್ಷೇತ್ರದ ಚುನಾವಣೆ ಎಂದರೆ ಕಾಂಗ್ರೆಸ್-ಬಿಜೆಪಿ ನಡುವಿನ ಪೈಪೋಟಿ. ಎರಡೂ ಪಕ್ಷಗಳು ಒಂದೊಂದು ಬಾರಿ ಗೆದ್ದಿದ್ದು, 3ನೇ ಚುನಾವಣೆ ನಡೆಯಲಿದೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಏಪ್ರಿಲ್ 23ರಂದು ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಚುನಾವಣೆ ನಡೆಯಲಿದೆ. ಕಾಂಗ್ರೆಸ್-ಜೆಡಿಎಸ್ ಅಭ್ಯರ್ಥಿಯಾಗಿ ಹಾಲಿ ಸಂಸದ ಪ್ರಕಾಶ್ ಹುಕ್ಕೇರಿ ಕಣದಲ್ಲಿದ್ದಾರೆ. ಬಿಜೆಪಿಯಿಂದ ಅಣ್ಣಾ ಸಾಹೇಬ್ ಜೊಲ್ಲೆ ಅವರು ಅಭ್ಯರ್ಥಿ.
ಚಿಕ್ಕೋಡಿಯಲ್ಲಿ ಪ್ರತ್ಯೇಕ ಜಿಲ್ಲೆಯ ಕೂಗು, ಸಮಸ್ಯೆಗಳು ನೂರಾರು
ಕಳೆದ ಎರಡು ಚುನಾವಣೆಗಳಲ್ಲಿ ಬಿಜೆಪಿಯ ರಮೇಶ್ ಕತ್ತಿ ಮತ್ತು ಕಾಂಗ್ರೆಸ್ನ ಪ್ರಕಾಶ್ ಹುಕ್ಕೇರಿ ಎದುರಾಳಿಗಳಾಗಿದ್ದರು. ಇಬ್ಬರು ಒಂದೊಂದು ಬಾರಿ ಕ್ಷೇತ್ರದಲ್ಲಿ ಗೆದ್ದಿದ್ದಾರೆ. ಈ ಬಾರಿ ಪಕ್ರಾಶ್ ಹುಕ್ಕೇರಿ ಗೆಲ್ಲುವ ಉತ್ಸಾಹದಲ್ಲಿದ್ದಾರೆ.
ಚಿಕ್ಕೋಡಿ ಸಂಸದ ಪ್ರಕಾಶ್ ಹುಕ್ಕೇರಿ ಪರಿಚಯ
ಪಕ್ಕದ ಬೆಳಗಾವಿಯಲ್ಲಿ ಬಿಜೆಪಿಯ ಸಂಸದರಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಚಿಕ್ಕೋಡಿಯಲ್ಲಿ ಸಮಾವೇಶ ಉದ್ದೇಶಿಸಿ ಮಾತನಾಡುವ ಮೂಲಕ ಅಣ್ಣಾ ಸಾಹೇಬ್ ಜೊಲ್ಲೆ ಅವರಿಗೆ ಮತ್ತಷ್ಟು ಶಕ್ತಿ ತುಂಬಿದ್ದಾರೆ. ಚಿಕ್ಕೋಡಿ ಗದ್ದುಗೆ ಯಾರ ಮಡಿಲಿಗೆ ಎಂದು ಕಾದು ನೋಡಬೇಕಿದೆ.
ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಚುನಾವಣಾ ಪುಟ
ಪ್ರತ್ಯೇಕ ಲೋಕಸಭಾ ಕ್ಷೇತ್ರ
ಬೆಳಗಾವಿ ರಾಜ್ಯದಲ್ಲಿಯೇ ಹೆಚ್ಚು (14) ತಾಲೂಕುಗಳನ್ನು ಹೊಂದಿರುವ ಜಿಲ್ಲೆ. ಚಿಕ್ಕೋಡಿ ಬೆಳಗಾವಿ ಜಿಲ್ಲೆಯ ತಾಲೂಕುಗಳಲ್ಲಿ ಒಂದು. ಸುಗಮ ಆಡಳಿತದ ದೃಷ್ಟಿಯಿಂದ ಚಿಕ್ಕೋಡಿಯನ್ನು ಪ್ರತ್ಯೇಕ ಲೋಕಸಭಾ ಕ್ಷೇತ್ರವಾಗಿ ಮಾಡಲಾಗಿದೆ. ಆದರೆ, ಇದಕ್ಕೆ ಪ್ರತ್ಯೇಕ ಜಿಲ್ಲೆಯ ಸ್ಥಾನಮಾನವಿಲ್ಲ. ಪ್ರತ್ಯೇಕ ಜಿಲ್ಲೆಯಾಗಿ ಘೋಷಣೆ ಮಾಡಬೇಕು ಎಂಬ ಕೂಗು ಇದ್ದೇ ಇದೆ.
ಕತ್ತಿ ಮತ್ತು ಹುಕ್ಕೇರಿ ಕುಟುಂಬ
ಬಿಜೆಪಿಯಿಂದ ಕತ್ತಿ ಕುಟುಂಬದ, ಕಾಂಗ್ರೆಸ್ನಿಂದ ಹುಕ್ಕೇರಿ ಕುಟುಂಬದ ಸದಸ್ಯರು ಚಿಕ್ಕೋಡಿಯಲ್ಲಿ ಕಣಕ್ಕಿಳಿಯುತ್ತಾರೆ. 2009 ರಲ್ಲಿ ರಮೇಶ್ ಕತ್ತಿ (ಬಿಜೆಪಿ) ಗೆದ್ದಿದ್ದರು. 2014ರಲ್ಲಿ ಪ್ರಕಾಶ್ ಹುಕ್ಕೇರಿ (ಕಾಂಗ್ರೆಸ್) ಗೆಲುವು ಸಾಧಿಸಿದ್ದಾರೆ. ಜೆಡಿಎಸ್ ಪಕ್ಷ ಇಲ್ಲಿ ಹೆಸರಿಗೆ ಮಾತ್ರ.
ರಮೇಶ್ ಕತ್ತಿಗೆ ಟಿಕೆಟ್ ಸಿಕ್ಕಿಲ್ಲ
ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿಯಿಂದ ಅಣ್ಣಾ ಸಾಹೇಬ್ ಜೊಲ್ಲೆ ಅವರು ಅಭ್ಯರ್ಥಿ. ಟಿಕೆಟ್ ಆಕಾಂಕ್ಷಿಯಾಗಿದ್ದರೂ ರಮೇಶ್ ಕತ್ತಿ ಅವರಿಗೆ ಈ ಬಾರಿ ಟಿಕೆಟ್ ಸಿಕ್ಕಿಲ್ಲ. 2018ರ ವಿಧಾನಸಭೆ ಚುನಾವಣೆಯಲ್ಲಿ ಚಿಕ್ಕೋಡಿ-ಸದಲಗಾ ಕ್ಷೇತ್ರದಲ್ಲಿ ಪ್ರಕಾಶ್ ಹುಕ್ಕೇರಿ ಪುತ್ರ ಗಣೇಶ್ ಹುಕ್ಕೇರಿ ವಿರುದ್ಧ ಸೋತಿರುವ ಅಣ್ಣಾ ಸಾಹೇಬ್ ಜೊಲ್ಲೆ ಅವರು ಲೋಕಸಭಾ ಚುನಾವಣೆಯಲ್ಲಿ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.
ಪ್ರಕಾಶ್ ಹುಕ್ಕೇರಿ ಹಾಲಿ ಸಂಸದರು
2013ರ ವಿಧಾನಸಭೆ ಚುನಾವಣೆಯಲ್ಲಿ ಚಿಕ್ಕೋಡಿ-ಸದಲಗಾ ಕ್ಷೇತ್ರದಿಂದ ಗೆದ್ದು ಸಿದ್ದರಾಮಯ್ಯ ಸಂಪುಟದಲ್ಲಿ ಮುಜರಾಯಿ ಮತ್ತು ಸಕ್ಕರೆ ಖಾತೆ ಸಚಿವರಾಗಿದ್ದರು ಪ್ರಕಾಶ್ ಹುಕ್ಕೇರಿ. ಪಕ್ಷದ ಆದೇಶದಂತೆ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು 2014ರ ಚುನಾವಣೆಯಲ್ಲಿ ಕಣಕ್ಕಿಳಿದು ಗೆದ್ದರು. ಈ ಬಾರಿಯೂ ಅವರೇ ಅಭ್ಯರ್ಥಿ.
ವಿಧಾನಸಭೆ ಬಲಾಬಲ
ಚಿಕ್ಕೋಡಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ 8 ವಿಧಾನಸಭಾ ಕ್ಷೇತ್ರಗಳಿವೆ. 4 ಕ್ಷೇತ್ರ ಕಾಂಗ್ರೆಸ್, 4 ಬಿಜೆಪಿ ವಶದಲ್ಲಿವೆ. ಜೆಡಿಎಸ್ನ ಯಾವುದೇ ಶಾಸಕರು ಇಲ್ಲ.
*ಬಿಜೆಪಿ
:
ನಿಪ್ಪಾಣಿ,
ರಾಯಭಾಗ,
ಹುಕ್ಕೇರಿ,
ಕುಡಚಿ
*
ಕಾಂಗ್ರೆಸ್
:
ಚಿಕ್ಕೋಡಿ-ಸದಲಗಾ,
ಅಥಣಿ,
ಕಾಗವಾಡ,
ಯಮಕನಮರಡಿ
2014ರ ಫಲಿತಾಂಶ
2014ರ ಚುನಾವಣೆಯಲ್ಲಿ ಕಾಂಗ್ರೆಸ್ನ ಪ್ರಕಾಶ್ ಹುಕ್ಕೇರಿ ಅವರು 474373 ಮತಗಳನ್ನು ಪಡೆದು ಜಯಗಳಿಸಿದ್ದರು. ಬಿಜೆಪಿಯ ರಮೇಶ್ ಕತ್ತಿ ಅವರು 471370 ಮತಗಳನ್ನು ಪಡೆದಿದ್ದರು. ಜೆಡಿಎಸ್ನಿಂದ ಕಣಕ್ಕಿಳಿದಿದ್ದ ಸೀಮಂತ ಪಾಟೀಲ್ ಅವರು 39,992 ಮತಗಳನ್ನು ಪಡೆದಿದ್ದರು.