ಬೆಳಗಾವಿಯಲ್ಲಿ ಸಿಎಂ ಬಿಎಸ್ವೈ ಹೇಳಿಕೆ: ಮತ್ತೆ ಗರಿಗೆದರಿದ ಸಂಪುಟ ವಿಸ್ತರಣೆ
ಬೆಳಗಾವಿ, ಡಿ 4: ಪಕ್ಷದ ಕಾರ್ಯಕಾರಿಣಿ ಸಭೆಯಲ್ಲಿ ಭಾಗವಹಿಸಲು ಕುಂದಾ ನಗರಿ ಬೆಳಗಾವಿಗೆ ಆಗಮಿಸಿರುವ ಮುಖ್ಯಮಂತ್ರಿ ಯಡಿಯೂರಪ್ಪ, ಸಂಪುಟ ವಿಸ್ತರಣೆಯ ಬಗ್ಗೆ ಒಂದೆರಡು ಮಾತನ್ನು ಆಡಿದ್ದಾರೆ.
"ನಮ್ಮ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾದ ಅರುಣ್ ಸಿಂಗ್ ಅವರು ಸಂದೇಶವೊಂದನ್ನು ಹೊತ್ತು ತಂದಿದ್ದಾರೆ. ಆ ಸಂದೇಶ ಏನೆಂದು ನೋಡಿ, ಸಂಪುಟ ವಿಸ್ತರಣೆಯೋ, ಪುನರ್ ರಚನೆಯೋ ಎನ್ನುವುದರ ಬಗ್ಗೆ ನಿರ್ಧರಿಸಲಾಗುವುದು"ಎಂದು ಯಡಿಯೂರಪ್ಪ ಹೇಳಿದರು.
ಸಿಎಂ ಬಿಎಸ್ವೈ-ಎಚ್ಡಿಕೆ ಭೇಟಿ ಕುರಿತು ಸಚಿವ ಬೊಮ್ಮಾಯಿ ಪ್ರತಿಕ್ರಿಯೆ
ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಉಸ್ತುವಾರಿಗಳಾದ ಅರುಣ್ ಸಿಂಗ್ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಆಗಮಿಸಲು ಗೋವಾ ವಿಮಾನ ನಿಲ್ದಾಣದ ಮೂಲಕ ಬೆಳಗಾವಿಗೆ ಆಗಮಿಸಿದ್ದಾರೆ.
ಇತ್ತೀಚಿನ ಕೆಲವು ದಿನಗಳಲ್ಲಿ ಸಂಪುಟ ವಿಸ್ತರಣೆಯ ಬಗ್ಗೆ ಮೌನಕ್ಕೆ ಶರಣಾಗಿದ್ದ ಯಡಿಯೂರಪ್ಪ, ಎಲ್ಲಾ ವಿಚಾರವನ್ನು ಹೈಕಮಾಂಡ್ ಅಂಗಣಕ್ಕೆ ತಳ್ಳಿ ಸುಮ್ಮನಾಗಿದ್ದರು. ಜೊತೆಗೆ, ಈ ವಿಚಾರದಲ್ಲಿನ ಚಟುವಟಿಕೆಗಳ ವೇಗವೂ ಕಮ್ಮಿಯಾಗಿತ್ತು.
ಮುಖ್ಯಮಂತ್ರಿಗಳ ಮೇಲಿನ ಹೇಳಿಕೆಯಿಂದ ಸಂಪುಟ ವಿಸ್ತರಣೆಯ ವಿಚಾರ ಮತ್ತೆ ಗರಿಗೆದರುವ ಸಾಧ್ಯತೆಯಿದೆ. ಗ್ರಾಮ ಪಂಚಾಯತಿ ಚುನಾವಣೆ ಎದುರಾಗುತ್ತಿರುವುದರಿಂದ, ಈ ಕಸರತ್ತು ನೆನೆಗುದಿಗೆ ಬೀಳಲಿದೆ ಎಂದು ಹೇಳಲಾಗುತ್ತಿತ್ತು.
ಸಂಪುಟ ವಿಸ್ತರಣೆಯ ವಿಚಾರದಲ್ಲಿ ಪಕ್ಷದಲ್ಲಿ ಮೂಲ ಮತ್ತು ವಲಸಿಗರು ಎನ್ನುವ ವಿಚಾರವೂ ಜೋರಾಗಿ ನಡೆಯುತ್ತಿತ್ತು. ಇದಾದ ನಂತರ, ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರಿಗೆ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಕರೆ ಮಾಡಿ, ಬಹಿರಂಗವಾಗಿ ಹೇಳಿಕೆ ನೀಡುತ್ತಿರುವವರ ಬಾಯಿ ಮುಚ್ಚಿಸುವಂತೆ ಸೂಚಿಸಿದ್ದರು.