ಕೇಂದ್ರದ ಅನುದಾನವನ್ನು ಸರಿಯಾಗಿ ಬಳಸಿದ್ದೇವೆ : ಮಹದೇವಪ್ಪ
ಬೆಳಗಾವಿ, ನ.14-ಕೇಂದ್ರದಿಂದ ಬಿಡುಗಡೆಯಾಗಿರುವ ಅನುದಾನವನ್ನು ಸರಿಯಾಗಿ ಬಳಸಿ ಯೋಜನೆಗಳನ್ನು ಅನುಷ್ಠಾನ ಮಾಡಲಾಗಿದೆ ಎಂದು ಲೋಕೋಪಯೋಗಿ ಲೋಕೋಪಯೋಗಿ ಸಚಿವ ಎಚ್.ಸಿ.ಮಹದೇವಪ್ಪ ವಿಧಾನ ಪರಿಷತ್ ನಲ್ಲಿ ಸ್ಪಷ್ಟಪಡಿಸಿದರು.
ಮೌಢ್ಯ ನಿಷೇಧ ಕಾಯ್ದೆ ಸದನದಲ್ಲಿ ಮಂಡನೆ, ಮುಖ್ಯಾಂಶಗಳು
ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿಯ ಪ್ರದೀಪ್ ಶೆಟ್ಟರ್ ಅವರು 'ಕೇಂದ್ರದ ಅನುದಾನವನ್ನು ಸರಿಯಾಗಿ ಬಳಸದೆ ಪೋಲು ಮಾಡಲಾಗಿದೆ' ಎಂಬ ಆರೋಪಕ್ಕೆ ಉತ್ತರಿಸಿದ ಮಹದೇವಪ್ಪ 'ನಮ್ಮ ಸರ್ಕಾರ ಅಭಿವೃದ್ಧಿ ವಿಷಯದಲ್ಲಿ ಯಾವುದೆ ತಾರತಮ್ಯ ಮಾಡದೆ ಯೋಜನೆಗಳನ್ನು ಅನುಷ್ಠಾನ ಮಾಡಿದೆ, ನಮ್ಮ ಸಸಮಯ ಅನುಷ್ಠಾನದ ಬಗ್ಗೆ ಕೇಂದ್ರದಿಂದಲೂ ಪ್ರಶಂಸೆ ವ್ಯಕ್ತವಾಗಿದೆ' ಎಂದು ಹೇಳಿದರು.
ಅಂಕಿ-ಅಂಶ ಸಮೇತ ಶೆಟ್ಟರ್ ಅವರ ಆರೋಪಕ್ಕೆ ಉತ್ತರ ನೀಡಿದ ಮಹದೇವಪ್ಪ ಅವರು ಹುಬ್ಬಳ್ಳಿ-ಧಾರವಾಡ ಮಹಾನಗರ ಹಾಗೂ ಜಿಲ್ಲೆಗಳಲ್ಲಿನ ರಸ್ತೆ ಅಭಿವೃದ್ಧಿಗೆ 2016-17ನೆ ಸಾಲಿನಲ್ಲಿ 5 ಕೋಟಿ, 2017-18ರಲ್ಲಿ ಪುನಃ 5 ಕೋಟಿ ಅನುದಾನ ನೀಡಲಾಗಿದೆ. 2016-17ರಲ್ಲಿ 27 ಕಾಮಗಾರಿಗಳು ಮಂಜೂರಾಗಿದ್ದವು ಇದರಲ್ಲಿ 16 ಕಾಮಗಾರಿಗಳಿಗೆ ಟೆಂಡರ್ ಕರೆಯಲಾಗಿದ್ದರೆ, 12 ಕಾಮಗಾರಿಗಳು ಮಾತ್ರ ಬಾಕಿ ಇವೆ ಎಂದರು.
ಬೆಳಗಾವಿ:ಮಹಾಮೇಳಾವನಲ್ಲಿ ಭಾಗವಹಿಸಿದ್ದ ಮರಾಠಿ ಪುಂಡರ ಮೇಲೆ FIR
2017-18ರಲ್ಲಿ ಕೇಂದ್ರ ರಸ್ತೆ ನಿಧಿ ಯೋಜನೆಯಡಿ 2 ಕಾಮಗಾರಿಗಳು ಮುಂಜೂರಾಗಿವೆ. ಇದಕ್ಕೆ ಶೀಘ್ರವೇ ಟೆಂಡರ್ ಕರೆಯಲಾಗುವುದು ಎಂದು ಮಾಹಿತಿ ನೀಡಿದರು. 'ಈಗಿನ ಕೇಂದ್ರ ಸರ್ಕಾರ ಯೋಜನೆಗಳಿಗೆ ಸಾಕಷ್ಟು ಹಣ ನೀಡಿದೆ. ಹಿಂದಿನ ಯುಪಿಎ ಸರ್ಕಾರವೂ ಬಹಳಷ್ಟು ಅನುದಾನ ನೀಡಿತ್ತು ಇದರಲ್ಲಿ ತಾರತಮ್ಯದ ಪ್ರಶ್ನೆಯೇ ಉದ್ಭವಿಸುವುದಿಲ್ಲ' ಎಂದು ಸದನಕ್ಕೆ ಸ್ಪಷ್ಟನೆ ನೀಡಿದರು.
ಕೇಂದ್ರದ ಅನುದಾನವನ್ನು ರಾಜ್ಯ ಸರ್ಕಾರ ಸಮರ್ಪಕವಾಗಿ ಬಳಸಿಲ್ಲ ಎಂಬುದು ಬಿ.ಜೆ.ಪಿಯ ಹಳೆಯ ವಾದ, ಮೊನ್ನೆ ಪರಿವರ್ತನಾ ರ್ಯಾಲಿ ಉದ್ಘಾಟನೆ ಸಮಯದಲ್ಲಿ ಅಮಿತ್ ಷಾ ಅವರು ಕೂಡ ತಮ್ಮ ಭಾಷಣದಲ್ಲಿ ಈ ವಿಷಯವಾಗಿ ಸಿದ್ದರಾಮಯ್ಯ ಸರ್ಕಾರವನ್ನು ಟೀಕಿಸಿದ್ದರು. ಆದರೆ ಈಗ ಸಚಿವ ಮಹದೇವಪ್ಪ ಅವರು ಕೇಂದ್ರದ ಅನುದಾನವನ್ನು ಸರಿಯಾಗಿ ಬಳಸಿದ್ದೇವೆ ಎಂದಿದ್ದಾರೆ. ಹಾಗಾದರೆ ಯಾರು ಸುಳ್ಳು ಹೇಳುತ್ತಿದ್ದಾರೆ ಎಂಬ ಪ್ರಶ್ನೆ ಜನರ ಮನಸ್ಸಿನಲ್ಲಿ ಮೂಡಿದೆ.