ರಮೇಶ್ ಜಾರಕಿಹೊಳಿ ಗೋಕಾಕ್ ಗೌರ್ನಮೆಂಟ್ ಆಸ್ಪತ್ರೆಯಿಂದ ಎಸ್ಕೇಪ್?
ಬೆಂಗಳೂರು, ಏಪ್ರಿಲ್ 05: ಕೊರೊನಾ ಸೋಂಕಿನಿಂದ ಸರ್ಕಾರಿ ಆಸ್ಪತ್ರೆಗೆ ಸೇರಿದ್ದ ಎನ್ನಲಾದ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಎಸ್ಪೇಪ್ ಆದರೇ ? ಹೀಗೊಂದು ಪ್ರಶ್ನೆ ಇದೀಗ ರಾಜ್ಯದೆಲ್ಲೆಡೆ ಚರ್ಚೆಗೆ ನಾಂದಿ ಹಾಡಿದೆ. ಅಶ್ಲೀಲ ಸಿಡಿ ಪ್ರಕರಣದಲ್ಲಿ ಎಸ್ಐಟಿ ವಿಚಾರಣೆ ಎದುರಿಸಬೇಕಿದ್ದ ರಮೇಶ್ ಜಾರಕಿಹೊಳಿ ಕೊರೋನಾ ಸೋಂಕಿನ ಹಿನ್ನೆಲೆಯಲ್ಲಿ ಗೋಕಾಕ್ ಆಸ್ಪತ್ರೆಗೆ ದಾಖಲಾಗಿದ್ದರು. ಸೋಂಕು ಹಿನ್ನೆಲೆಯಲ್ಲಿ ಅವರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು.ಇದರ ಬೆನ್ನಲ್ಲೇ ಐಸಿಯುನಲ್ಲಿ ರಮೇಶ್ ಜಾರಕಿಹೊಳಿ ಇಲ್ಲ ಎಂಬುದನ್ನು ವಿಡಿಯೋ ರೆಕಾರ್ಡ್ ಮಾಡಿ ಅಪರಿಚಿತರು ಹರಿ ಬಿಟ್ಟಿದ್ದಾರೆ. ರಮೇಶ್ ಜಾರಕಿಹೊಳಿ ಎಸ್ಐಟಿ ವಿಚಾರಣೆಗೆ ಹೆದರಿ ಎಸ್ಕೇಪ್ ಆದರೇ ಎಂಬ ಅನುಮಾನ ವ್ಯಕ್ತವಾಗಿದೆ.
ಅಶ್ಲೀಲ ಸಿಡಿ ಪ್ರಕರಣದಲ್ಲಿ ಸಂತ್ರಸ್ತ ಸಿಡಿಲೇಡಿ ಎಸ್ಐಟಿ ಅಧಿಕಾರಿಗಳ ಮುಂದೆ ಪ್ರಕರಣ ಸಂಬಂಧ ಮಹತ್ವದ ವಿವರ ನೀಡಿದ್ದರು. ಆಕೆಯ ಸುದೀರ್ಘ ವಿಚಾರಣೆ ಬಳಿಕ ರಮೇಶ್ ಜಾರಕಿಹೊಳಿ ಅವರನ್ನು ವಿಚಾರಣೆಗೆ ಒಳಪಡಿಸಲು ಎಸ್ಐಟಿ ಮುಂದಾಗಿತ್ತು. ಇಂದು ರಮೇಶ್ ಜಾರಕಿಹೊಳಿ ಎಸ್ಐಟಿ ಮುಂದೆ ಹಾಜರಾಗುತ್ತಾರೆ ಎಂದೇ ಭಾವಿಸಲಾಗಿತ್ತು. ರಮೇಶ್ ಜಾರಕಿಹೊಳಿಗೆ ಕೊರೊನಾ ಸೋಂಕು ತಗುಲಿದೆ. ಅವರು ಗೋಕಾಕ್ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂಬ ಸುದ್ದಿ ಹೊರಗೆ ಬಿತ್ತು. ಶಾಸಕ ಭೈರತಿ ಬಸವರಾಜ್ ಕೂಡ ರಮೇಶ್ ಅವರಿಗೆ ಕೊರೊನಾ ಸೋಂಕು ತಗುಲಿದೆ ಎಂದು ಹೇಳಿಕೆ ನೀಡಿದ್ದರು. ಇದರ ಬೆನ್ನಲ್ಲೇ ಜಾರಕಿಹೊಳಿ ಗೋಕಾಕ್ ಸರ್ಕಾರಿ ಆಸ್ಪತ್ರೆಯಲ್ಲಿದ್ದಾರೆ ಎಂದೇ ಹೇಳಲಾಗಿತ್ತು.
ಆದರೆ, ಅಪರಿಚಿತರು ಗೋಕಾಕ್ ಸರ್ಕಾರಿ ಆಸ್ಪತ್ರೆಯ ಐಸಿಯುನಲ್ಲಿ ಸಂಪೂರ್ಣ ವಿಡಿಯೋ ಮಾಡಿದ್ದಾರೆ. ಅಲ್ಲಿ ಯಾವ ಹಾಸಿಗೆಯಲ್ಲೂ ರಮೇಶ್ ಜಾರಕಿಹೊಳಿ ಇಲ್ಲ ಎಂಬುದಕ್ಕೆ ವಿಡಿಯೋ ಪೋಸ್ಟ್ ಮಾಡಿ, ರಮೇಶ್ ಜಾರಕಿಹೊಳಿ ಎಲ್ಲಿ ಹೋದರು ಎಂಬ ಪ್ರಶ್ನೆ ಮಾಡಿದ್ದಾರೆ. ಆಸ್ಪತ್ರೆ ವೈದ್ಯಾಧಿಕಾರಿ ರವೀಂದ್ರ ಅವರನ್ನು ಪ್ರಶ್ನಿಸಿದ್ದು, ಅವರು ರಮೇಶ್ ಜಾರಕಿಹೊಳಿ ಸರ್ಕಾರಿ ಆಸ್ಪತ್ರೆಯಲ್ಲಿದ್ದಾರೆ ಎಂದು ಹೇಳಿದ್ದ ಮೊಬೈಲ್ ರೆಕಾರ್ಡಿಂಗ್ ಕ್ಲಿಪ್ ನ್ನು ಸಹ ಸಾಮಾಜಿಕ ಜಾಲ ತಾಣದಲ್ಲಿ ಹರಿ ಬಿಟ್ಟಿದ್ದಾರೆ.
Recommended Video
ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ಪಕ್ಷದ ಕಾನೂನು ಘಟಕ, ರಮೇಶ್ ಜಾರಕಿಹೊಳಿ ಬಂಧನದ ಭೀತಿಯಿಂದ ತಪ್ಪಿಸಿಕೊಂಡು ಎಸ್ಕೇಪ್ ಆಗಿದ್ದಾರೆ. ಕೂಡಲೇ ಅತ್ಯಾಚಾರಿ ಆರೋಪಿಯನ್ನು ಬಂಧಿಸಿ ಎಂದು ಆಗ್ರಹಿಸಿದೆ. ಕೊರೋನಾ ಸೋಂಕು ಹೆಸರಿನಲ್ಲಿ ರಮೇಶ್ ಜಾರಕಿಹೊಳಿ ನಾಪತ್ತೆಯಾಗಿದ್ದಾರೆ ಎಂಬ ಗಂಭೀರ ಆರೋಪ ಕೇಳಿ ಬಂದರೂ ಈ ಕುರಿತು ಸ್ಪಷ್ಟನೆ ನೀಡಲು ರಮೇಶ್ ಜಾರಕಿಹೊಳಿ ಮುಂದಾಗಿಲ್ಲ.