ಗ್ರಾ.ಪಂ ಚುನಾವಣೆಗೆ ಸ್ಪರ್ಧಿಸಿ ಸಾವನ್ನಪ್ಪಿದ್ದ ಅಭ್ಯರ್ಥಿ ಗೆಲುವು
ಬೆಳಗಾವಿ, ಡಿಸೆಂಬರ್ 30: ಬೆಳಗಾವಿ ಜಿಲ್ಲೆ ಖಾನಾಪುರ ತಾಲೂಕಿನ ಕಕ್ಕೇರಿ ಗ್ರಾ.ಪಂ ಕ್ಷೇತ್ರದಿಂದ ಕಣಕ್ಕಿಳಿದಿದ್ದ ಸಿ.ಬಿ ಅಂಬೋಜಿ ಅವರು 414 ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಆದರೆ ಇದೇ ಡಿಸೆಂಬರ್ 27ರಂದು ಅಂಬೋಜಿ ಮೃತಪಟ್ಟಿದ್ದಾರೆ.
ಅನಾರೋಗ್ಯದಿಂದ ನ್ಯಾಯವಾದಿ ಸಿ.ಬಿ.ಅಂಬೋಜಿ(64) ಸಾವನ್ನಪ್ಪಿದ್ದರು. ಕಕ್ಕೇರಿ ಗ್ರಾ.ಪಂ ವಾರ್ಡ್ ನಂಬರ್ ಎರಡರಿಂದ ಸಿ.ಬಿ.ಅಂಬೋಜಿ ಅವರು ಸ್ಪರ್ಧಿಸಿದ್ದರು.
ಗ್ರಾ.ಪಂ ಚುನಾವಣೆ: ಜೈಲಿನಿಂದಲೇ ಸ್ಪರ್ಧಿಸಿ ಗೆಲುವು ಸಾಧಿಸಿದ ಅಭ್ಯರ್ಥಿ
ಬೆಳಗಾವಿ ಜಿಲ್ಲೆ ಖಾನಾಪುರ ತಾಲೂಕಿನ ಕಕ್ಕೇರಿ ಗ್ರಾಮ ಪಂಚಾಯತಿಯ ಮೊದಲ ಹಂತದ, ಡಿಸೆಂಬರ್ 22ರಂದು ಮತದಾನವಾಗಿತ್ತು. ಇಂದು (ಡಿ.30) ಫಲಿತಾಂಶ ಪ್ರಕಟವಾಗಿದ್ದು, ಆದರೆ ಆ ಗೆಲುವನ್ನು ಸಂಭ್ರಮಿಸಲು ಅಭ್ಯರ್ಥಿಯೇ ಇಲ್ಲವಾಗಿದೆ.
ಖಾನಾಪುರ ತಾಲೂಕಿನಲ್ಲಿ ತಮ್ಮದೇ ಆದ ವರ್ಚಸ್ಸು ಹೊಂದಿದ್ದ ಹಿರಿಯ ನ್ಯಾಯವಾದಿ ಸಿ.ಬಿ.ಅಂಬೋಜಿ, ಚುನಾವಣಾ ಫಲಿತಾಂಶ ಬರುವ ಮೂರು ದಿನ ಮುಂಚೆ ಮೃತಪಟ್ಟಿದ್ದರು.
15 ವರ್ಷದಿಂದ ಕಕ್ಕೇರಿ ಬಿಷ್ಟಮ್ಮದೇವಿ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾಗಿದ್ದರು. ಈಗ ಅವರು ಕಕ್ಕೇರಿ ಗ್ರಾಮ ಪಂಚಾಯತಿ ಚುನಾವಣೆ ಜಯ ಗಳಿಸಿದ್ದು, ಅಭ್ಯರ್ಥಿ ನಿಧನ ಹೊಂದಿದ್ದರಿಂದ ಮರು ಚುನಾವಣೆ ನಡೆಯುವ ಸಾಧ್ಯತೆ ಇದೆ. ಸಿ.ಬಿ.ಅಂಬೋಜಿ ನಿಧನದಿಂದ ಕಕ್ಕೇರಿ ಗ್ರಾಮದಲ್ಲಿ ನೀರವ ಮೌನ ಆವರಿಸಿದೆ.