ಮೋದಿ ಅಂಗಡಿಯಲ್ಲಿ ಎಲ್ಲವೂ ಕಡಿಮೆ ದರ: ಸತೀಶ್ ಜಾರಕಿಹೊಳಿ ವ್ಯಂಗ್ಯ
ಸವದತ್ತಿ, ಏಪ್ರಿಲ್ 12: "ಪ್ರಧಾನಿ ನರೇಂದ್ರ ಮೋದಿ ಅಂಗಡಿಯಲ್ಲಿ ಗ್ಯಾಸ್, ಗೊಬ್ಬರ ಸೇರಿ ಎಲ್ಲವೂ ಕಡಿಮೆ ದರದಲ್ಲಿ ಸಿಗುತ್ತಿದೆ. ಆ ಅಂಗಡಿ ಎಲ್ಲಿದೆ ಎಂಬುದನ್ನು ಜನರು ಹುಡುಕಬೇಕಿದೆ' ಎಂದು ಬೆಳಗಾವಿ ಲೋಕಸಭೆ ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಜಾರಕಿಹೊಳಿ ವ್ಯಂಗ್ಯವಾಡಿದರು.
ಬೆಳಗಾವಿ ಜಿಲ್ಲೆಯ ಸವದತ್ತಿ ಮತ ಕ್ಷೇತ್ರದ ಕಡಬಿ, ಶಿವಾಪುರ, ಯರಝರ್ವಿ ಗ್ರಾಮಗಳಲ್ಲಿ ಸೋಮವಾರ ಬೆಳಗಾವಿ ಲೋಕಸಭಾ ಉಪ ಚುನಾವಣಾ ಪ್ರಚಾರ ನಡೆಸಿ, ಅವರು ಮಾತನಾಡಿದರು.
ಅರುಣ್ ಸಿಂಗ್ಗೆ ಭಾರತದ ಇತಿಹಾಸ ಗೊತ್ತಿಲ್ಲ; ಸತೀಶ್ ಜಾರಕಿಹೊಳಿ
"ಚುನಾವಣೆಗೂ ಮೊದಲು ಬಿಜೆಪಿಯವರು, ಪೆಟ್ರೋಲ್, ಡೀಸೆಲ್, ಸಿಲಿಂಡರ್ ಎಲ್ಲವನ್ನೂ ಅತ್ಯಂತ ಕಡಿಮೆ ದರದಲ್ಲಿ ಕೊಡುತ್ತೇವೆ ಎಂದಿದ್ದರು. ಆದರೆ, ಇಂದು ಎಲ್ಲ ಅಗತ್ಯ ವಸ್ತುಗಳ ಬೆಲೆಯೂ ಗಗನಕ್ಕೇರಿದೆ. ಜನರಿಗೆ ಅವರು ನೀಡಿದ್ದ ಭರವಸೆಗಳೆಲ್ಲ ಹುಸಿಯಾಗಿವೆ' ಎಂದು ಆಕ್ರೋಶ ವ್ಯಕ್ತಪಡಿಸಿದರು.
"ಸುಳ್ಳು ಭರವಸೆಗಳನ್ನು ನೀಡಿ, ಜನರಿಗೆ ಮೋಸ ಮಾಡಿದ ಪ್ರಧಾನಿ ಮೋದಿ ಹಾಗೂ ಬಿಜೆಪಿಗೆ ಉಪ ಚುನಾವಣೆಯಲ್ಲಿ ಜನರು ತಕ್ಕ ಪಾಠ ಕಲಿಸಬೇಕು. ಸದಾ ಬಡವರ ಪರವಾಗಿರುವ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಬೇಕು' ಎಂದು ಮನವಿ ಮಾಡಿದರು.
"ನಾನು ಕಳೆದ 25 ವರ್ಷಗಳಿಂದ ರಾಜಕೀಯದಲ್ಲಿ ಇದ್ದು, ವಿಧಾನ ಪರಿಷತ್ ಸದಸ್ಯನಾಗಿ, ಶಾಸಕನಾಗಿ, ಸಚಿವನಾಗಿ ಜಿಲ್ಲೆಯಾದ್ಯಂತ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದೇನೆ. ಅನೇಕ ಸಾಮಾಜಿಕ ಕಾರ್ಯಗಳನ್ನು ಮಾಡುತ್ತಾ ಬಂದಿದ್ದೇನೆ. ನನ್ನ ಸೇವೆಯನ್ನು ಪರಿಗಣಿಸಿ, ಜನರು ನನಗೆ ಮತ ನೀಡಬೇಕು' ಎಂದರು.
ಮಾಜಿ ಶಾಸಕ ಜಿ.ಟಿ ಪಾಟೀಲ, ಮುಖಂಡರಾದ ಪಂಚನಗೌಡ ದ್ಯಾಮನಗೌಡ, ವಿಶ್ವಾಸ ವೈದ್ಯ, ರವಿ ಯಲಿಗಾರ, ಸೌರವ ಚೋಪ್ರಾ, ಜಯಪ್ಪ ಹುಂಡೇಕರ್, ಆರ್.ವಿ ಪಾಟೀಲ ಸೇರಿ ಇನ್ನಿತರರು ಇದ್ದರು.