ತೀವ್ರ ಜ್ವರದ ನಡುವೆಯೂ ಮಾತ್ರೆ ಸೇವಿಸಿ ಬಿಎಸ್ವೈ ಪ್ರಚಾರ: ಸೋಲಿನ ಭೀತಿಯೇ?
ಬೆಳಗಾವಿ ಲೋಕಸಭೆ, ಮಸ್ಕಿ ಮತ್ತು ಬಸವಕಲ್ಯಾಣ ಅಸೆಂಬ್ಲಿಗೆ ಉಪ ಚುನಾವಣೆಯ ಬಹಿರಂಗ ಪ್ರಚಾರ ಇಂದು (ಏ.15) ಮುಕ್ತಾಯಗೊಳ್ಳಲಿದೆ. ಇದೇ ಶನಿವಾರ ಮತದಾನ ನಡೆಯಲಿದ್ದು, ಮೇ ಎರಡರಂದು ಫಲಿತಾಂಶ ಹೊರಬೀಳಲಿದೆ.
ಯಡಿಯೂರಪ್ಪನವರು ಸಿಎಂ ಆದ ನಂತರ ಇದುವರೆಗೆ ಹದಿನೈದು ಕ್ಷೇತ್ರಗಳ ಉಪ ಚುನಾವಣೆ ನಡೆದಿದ್ದು, ಅದರಲ್ಲಿ ಹದಿಮೂರು ಕ್ಷೇತ್ರಗಳಲ್ಲಿ ಬಿಜೆಪಿ ದಡ ಸೇರಿತ್ತು. ಮೇಲ್ನೋಟಕ್ಕೆ ಬಿಜೆಪಿ ಈ ಚುನಾವಣೆಯಲ್ಲೂ ಗೆಲುವು ಸಾಧಿಸಬಹುದು ಎಂದಿದ್ದರೂ ಅದು ಅಷ್ಟು ಸುಲಭದ ತುತ್ತಲ್ಲ.
ಉಪ ಚುನಾವಣೆ: RSS ನೀಡಿದ ಗುಪ್ತ ಮಾಹಿತಿಯಲ್ಲಿ ಬಿಜೆಪಿಗೆ ಶಾಕ್?
ನಾವು ಈಗಾಗಲೇ ಗೆದ್ದಾಗಿದೆ ಗೆಲುವಿನ ಅಂತರವನ್ನಷ್ಟೇ ಕಾಯುತ್ತಿದ್ದೇವೆ ಎಂದು ಬಿಜೆಪಿಯವರು ವಿಶ್ವಾಸದ ಮಾತನ್ನಾಡುತ್ತಿದ್ದರೂ, ವಸ್ತುಸ್ಥಿತಿ ಹಾಗಿಲ್ಲ ಎನ್ನುವುದು ಕಮಲದ ಪಕ್ಷದವರಿಗೂ ತಿಳಿದಿರುವ ವಿಚಾರ.
ಉದಾಸೀನತೆ ತೋರಿದರೆ ವ್ಯತಿರಿಕ್ತ ಫಲಿತಾಂಶ ಬರಬಹುದು ಎಂದು ಈಗಾಗಲೇ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಎಚ್ಚರಿಕೆಯನ್ನು ನೀಡಿರುವ ಬೆನ್ನಲ್ಲೇ, ಮೈಗೊಡವಿ ಪ್ರಚಾರಕ್ಕೆ ಇಳಿದಿರುವ ಸಿಎಂ ಯಡಿಯೂರಪ್ಪ, ಆರೋಗ್ಯ ಸಮಸ್ಯೆ ಇದ್ದರೂ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ.
ಮೋದಿ ಅಂಗಡಿಯಲ್ಲಿ ಎಲ್ಲವೂ ಕಡಿಮೆ ದರ: ಸತೀಶ್ ಜಾರಕಿಹೊಳಿ ವ್ಯಂಗ್ಯ
ಬೆಳಗಾವಿ ಪ್ರವಾಸದಲ್ಲಿರುವ ಸಿಎಂ ಯಡಿಯೂರಪ್ಪ
ಬೆಳಗಾವಿ ಪ್ರವಾಸದಲ್ಲಿರುವ ಸಿಎಂ ಯಡಿಯೂರಪ್ಪ ಅರಭಾವಿ ಮತ್ತು ಗೋಕಾಕ ಕ್ಷೇತ್ರದಲ್ಲಿ ಬಿರುಸಿನ ಪ್ರಚಾರವನ್ನು ಕೈಗೊಂಡಿದ್ದರು. ಮಧ್ಯಾಹ್ನದ ಹೊತ್ತಿಗೆ ಅವರಿಗೆ ಜ್ವರ, ಸುಸ್ತು ಕಾಣಿಸಿಕೊಂಡ ಹಿನ್ನಲೆಯಲ್ಲಿ ಹೊಟೇಲ್ನಲ್ಲಿ ಒಂದು ತಾಸು ವಿಶ್ರಾಂತಿ ತೆಗೆದುಕೊಂಡಿದ್ದರು. ಅಲ್ಲಿಗೆ ಬಂದ ಕೆಎಲ್ಇ ಆಸ್ಪತ್ರೆಯ ವೈದ್ಯರು ಮಾತ್ರೆಯನ್ನು ನೀಡಿದ್ದರು. ಸ್ವಲ್ಪ ಹೊತ್ತು ವಿಶ್ರಾಂತಿ ಪಡೆದ ಬಿಎಸ್ವೈ ಮತ್ತೆ ಪ್ರಚಾರಕ್ಕಾಗಿ ಮೂಡಲಗಿ ಕಡೆ ನಡೆದರು.
ಹೆಲಿಕಾಪ್ಟರ್ ನಲ್ಲಿ ಪ್ರಯಾಣಿಸಬೇಕಾಗಿದ್ದ ಯಡಿಯೂರಪ್ಪ
ಮೂಡಲಗಿಯಿಂದ ಗೋಕಾಕ್ಗೆ ಹೆಲಿಕಾಪ್ಟರ್ ನಲ್ಲಿ ಪ್ರಯಾಣಿಸಬೇಕಾಗಿದ್ದ ಯಡಿಯೂರಪ್ಪ ರಸ್ತೆ ಮೂಲಕ ತೆರಳಿದರು. ಆರೋಗ್ಯ ಸರಿಯಿಲ್ಲದ ಕಾರಣ ಗೋಕಾಕ್ನಲ್ಲಿನ ರೋಡ್ ಶೋ ವೇಳೆ ಹಲವು ಮಾರ್ಗಗಳನ್ನು ಮೊಟಕು ಗೊಳಿಸಲಾಯಿತು. ಪ್ರಚಾರ ಮುಗಿಸಿ ಹೊಟೇಲ್ಗೆ ಬಂದ ಯಡಿಯೂರಪ್ಪನವರಿಗೆ ಮತ್ತೆ ವೈದ್ಯರು ಚಿಕಿತ್ಸೆಯನ್ನು ನೀಡಿದರು. ಈ ವೇಳೆ, ವಿಶ್ರಾಂತಿ ಅಗತ್ಯ ಎನ್ನುವ ಸಲಹೆಯನ್ನು ನೀಡಿದರು ಎಂದು ಹೇಳಲಾಗುತ್ತಿದೆ.
ಅವರಿಗೆ ಸೋಲಿನ ಭೀತಿ ಕಾಡುತ್ತಿದೆ, ಸತೀಶ್ ಜಾರಕಿಹೊಳಿ
"ಇಡೀ ಬಿಜೆಪಿ ಸರಕಾರವೇ ಪ್ರಚಾರದಲ್ಲಿ ತೊಡಗಿಸಿಕೊಂಡಿದೆ, ಮುಖ್ಯಮಂತ್ರಿಗಳೂ ಬಿರುಸಿನ ಪ್ರಚಾರ ನಡೆಸುತ್ತಿದ್ದಾರೆ. ಅವರಿಗೆ ಸೋಲಿನ ಭೀತಿ ಕಾಡುತ್ತಿದೆ, ಹಾಗಾಗಿಯೇ ದೊಡ್ಡ ಪ್ರಮಾಣದಲ್ಲಿ ಪ್ರಚಾರ ಮಾಡುತ್ತಿದ್ದಾರೆ. ನಾನು ಖಚಿತ ಗೆಲುವಿನ ವಿಶ್ವಾಸದಲ್ಲಿದ್ದೇನೆ"ಎಂದು ಬೆಳಗಾವಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಜಾರಕಿಹೊಳಿ ಹೇಳಿದ್ದರು.
ಬಿಜೆಪಿಯ ಮಾತೃ ಸಂಘಟನೆ ಆರ್ ಎಸ್ ಎಸ್
ಬಿಜೆಪಿಯ ಮಾತೃ ಸಂಘಟನೆ ಆರ್ಎಸ್ಎಸ್ ನೀಡಿದೆ ಎಂದು ಹೇಳಲಾಗುತ್ತಿರುವ ಗುಪ್ತ ಮಾಹಿತಿಯಲ್ಲಿ ಬೆಳಗಾವಿಯಲ್ಲಿ ಬಿಜೆಪಿ ಗೆಲ್ಲಬಹುದು. ಆದರೆ ಮಸ್ಕಿ ಮತ್ತು ಬಸವಕಲ್ಯಾಣದಲ್ಲಿ ಗೆಲುವು ಸುಲಭವಲ್ಲ. ಕೊನೇ ಹಂತದಲ್ಲಿ ಉತ್ತಮ ಪ್ರಚಾರವನ್ನು ಮಾಡಬೇಕು, ಇಲ್ಲದಿದ್ದರೆ ಫಲಿತಾಂಶ ಉಲ್ಟಾ ಹೊಡೆಯಬಹುದು ಎಂದು ಆರ್ಎಸ್ಎಸ್ ಗುಪ್ತ ಮಾಹಿತಿಯನ್ನು ನೀಡಿದೆ ಎಂದು ಹೇಳಲಾಗುತ್ತಿದೆ. ಆ ಕಾರಣಕ್ಕಾಗಿಯೇ ಬಿಎಸ್ವೈ ಕಾಲಿಗೆ ಚಕ್ರ ಕಟ್ಟಿಕೊಂಡಂತೆ ಪ್ರಚಾರ ಮಾಡುತ್ತಿದ್ದಾರೆ ಎಂದು ವ್ಯಾಖಾನಿಸಲಾಗುತ್ತಿದೆ.