ಅಥಣಿ ಉಪ ಚುನಾವಣೆ; ಲಕ್ಷ್ಮಣ ಸವದಿಗೆ ಇಲ್ಲ ಬಿಜೆಪಿ ಟಿಕೆಟ್!
ಬೆಳಗಾವಿ, ಸೆಪ್ಟೆಂಬರ್ 22 : ಕರ್ನಾಟಕದ 15 ವಿಧಾನಸಭಾ ಕ್ಷೇತ್ರಗಳಿಗೆ ಉಪ ಚುನಾವಣೆ ಘೋಷಣೆಯಾಗಿದೆ. ಬೆಳಗಾವಿ ಜಿಲ್ಲೆಯ ಮೂರು ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯಲಿದೆ. ಅಥಣಿ ಕ್ಷೇತ್ರದ ಚುನಾವಣೆ ಕುತೂಹಲಕ್ಕೆ ಕಾರಣವಾಗಿದೆ.
2018ರಲ್ಲಿ ಅಥಣಿ ಕ್ಷೇತ್ರದಿಂದ ಕಾಂಗ್ರೆಸ್ನ ಮಹೇಶ್ ಕುಮಟಳ್ಳಿ ಜಯಗಳಿಸಿದ್ದರು. ಅವರು ಈಗ ಶಾಸಕ ಸ್ಥಾನದಿಂದ ಅನರ್ಹಗೊಂಡಿದ್ದು, ಅಕ್ಟೋಬರ್ 21ರಂದು ಉಪ ಚುನಾವಣೆ ದಿನಾಂಕ ನಿಗದಿಯಾಗಿದೆ. ಶಾಸಕರು ಸುಪ್ರೀಂಕೋರ್ಟ್ನಲ್ಲಿ ಸಲ್ಲಿಸಿರುವ ಅರ್ಜಿಯ ವಿಚಾರಣೆ ಇನ್ನೂ ಬಾಕಿ ಇದೆ.
ಚುನಾವಣೆ ಸೋತರೂ ಸಚಿವರಾದ ಲಕ್ಷ್ಮಣ ಸವದಿ ಪರಿಚಯ
ಈಗ ಉಪ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಯಾರಿಗೆ ಸಿಗಲಿದೆ? ಎಂಬುದು ಕುತೂಹಲಕ್ಕೆ ಕಾರಣವಾಗಿವೆ. ಕಳೆದ ಚುನಾವಣೆಯಲ್ಲಿ ಅಥಣಿಯಲ್ಲಿ ಬಿಜೆಪಿಯಿಂದ ಕಣಕ್ಕಿಳಿದು ಸೋತ ಲಕ್ಷ್ಮಣ ಸವದಿಗೋ? ಅಥವ ಮಹೇಶ್ ಕುಮಟಳ್ಳಿಗೋ?.
ಮಾಜಿ ಶಾಸಕ ಲಕ್ಷ್ಮಣ ಸವದಿಗೆ ಒಲಿದು ಬಂದ ಸಚಿವ ಸ್ಥಾನ!
59 ವರ್ಷದ ಲಕ್ಷ್ಮಣ ಸವದಿ ಚುನಾವಣೆಯಲ್ಲಿ ಸೋತರೂ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಸಂಪುಟ ಸೇರಿದ್ದಾರೆ. ಉಪ ಮುಖ್ಯಮಂತ್ರಿಯಾಗಿರುವ ಅವರು ಆರು ತಿಂಗಳಿನಲ್ಲಿ ವಿಧಾನಸಭೆ ಅಥವ ಪರಿಷತ್ ಸದಸ್ಯರಾಗಬೇಕಿದೆ.
ಲಕ್ಷ್ಮಣ ಸವದಿಗೆ ಯಾಕೆ ಡಿಸಿಎಂ ಹುದ್ದೆ ಕೊಟ್ರು, ಕಾರಣ ಬಹಿರಂಗ
ಮಹೇಶ್ ಕುಮಟಳ್ಳಿಗೆ ಟಿಕೆಟ್
ವಿಜಯಪುರದ ಬಿಜೆಪಿ ಸಂಸದ ರಮೇಶ್ ಜಿಗಜಿಣಗಿ ಮಾಧ್ಯಮಗಳ ಜೊತೆ ಮಾತನಾಡಿ, 'ಅಥಣಿಯಲ್ಲಿ ನಂಬಿಕೊಂಡು ಬಂದವರಿಗೆ (ಮಹೇಶ್ ಕುಮಟಳ್ಳಿ)ಗೆ ಟಿಕೆಟ್ ನೀಡಲಾಗುತ್ತದೆ. ಲಕ್ಷ್ಮಣ ಸವದಿ ಅವರಿಗೆ ಪಕ್ಷದ ನಾಯಕರು ಪರ್ಯಾಯ ವ್ಯವಸ್ಥೆ ಮಾಡುತ್ತಾರೆ" ಎಂದು ಹೇಳಿದರು.
ಎದುರಾಳಿ ಸಚಿವರಾಗಿದ್ದಾರೆ
2018ರ ವಿಧಾನಸಭೆ ಚುನಾವಣೆಯಲ್ಲಿ ಮಹೇಶ್ ಕುಮಟಳ್ಳಿ ಅಥಣಿಯಲ್ಲಿ ಕಾಂಗ್ರೆಸ್ನಿಂದ ಕಣಕ್ಕಿಳಿದು ಗೆದ್ದಿದ್ದರು. ಬಿಜೆಪಿಯಿಂದ ಕಣಕ್ಕಿಳಿದು ಸೋತಿದ್ದ ಲಕ್ಷ್ಮಣ ಸವದಿ ಈಗ ಯಡಿಯೂರಪ್ಪ ಸಂಪುಟದಲ್ಲಿ ಉಪ ಮುಖ್ಯಮಂತ್ರಿ, ಸಾರಿಗೆ ಸಚಿವರು.
ಸೋತರೂ ಸಚಿವ ಸ್ಥಾನ
ಯಡಿಯೂರಪ್ಪ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿರುವ ಲಕ್ಷ್ಮಣ ಸವದಿ 2013ರ ಚುನಾವಣೆಯಲ್ಲಿ ಸೋತಿದ್ದರು. 2018ರ ಚುನಾವಣೆಯಲ್ಲಿ 79,763 ಮತಗಳನ್ನು ಪಡೆದು ಸೋಲು ಕಂಡಿದ್ದರು. ಆದರೆ, ಬಿಜೆಪಿ ಸರ್ಕಾರ ರಚನೆಯಾದ ಬಳಿಕ ಅವರು ಯಡಿಯೂರಪ್ಪ ಸಂಪುಟ ಸೇರಿದ್ದಾರೆ. ಚುನಾವಣೆಯಲ್ಲಿ ಗೆದ್ದಿದ್ದ ಮಹೇಶ್ ಕುಮಟಳ್ಳಿ ಶಾಸಕ ಸ್ಥಾನದಿಂದ ಅನರ್ಹರಾಗಿದ್ದಾರೆ.
ಯಾರಿಗೆ ಸಿಗಲಿದೆ ಟಿಕೆಟ್
ಲಕ್ಷ್ಮಣ ಸವದಿ ಅಥವ ಮಹೇಶ್ ಕುಮಟಳ್ಳಿ ಇಬ್ಬರನ್ನೂ ಬಿಜೆಪಿ ಕಡೆಗಣಿಸುವಂತಿಲ್ಲ. ಒಬ್ಬರು ಸರ್ಕಾರ ರಚನೆ ಮಾಡಲು ಬೆಂಬಲ ನೀಡಿದವರು. ಮತ್ತೊಬ್ಬರು ಯಡಿಯೂರಪ್ಪ ಆಪ್ತರು. ಆದ್ದರಿಂದ, ಬಿಜೆಪಿಯ ತೀರ್ಮಾನ ಕುತೂಹಲಕ್ಕೆ ಕಾರಣವಾಗಿದೆ.